Sunday, May 12, 2024

ಮೋದಿ ರೋಡ್ ಶೋನಿಂದ ಬಿಜೆಪಿಗೆ ಹೊಸ ಚೈತನ್ಯ : ಸಚಿವ ಅಶ್ವತ್ಥನಾರಾಯಣ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋನಿಂದ ಬಿಜೆಪಿಗೆ ಹೊಸ ಚೈತನ್ಯ ಮತ್ತು ಭರವಸೆಗಳು ಸಿಕ್ಕಿವೆ ಎಂದು ಸಚಿವ ಹಾಗೂ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್ ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟರು.

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಸಚಿವ ಅಶ್ವತ್ಥನಾರಾಯಣ ಅವರು ಕಾಡು ಮಲ್ಲೇಶ್ವರ ದೇವಸ್ಥಾನದ ಸಮೀಪ ಕಾರ್ಯಕರ್ತರ ಜತೆ ಇದ್ದು ಪ್ರಧಾನಿಗೆ ಶುಭ‌ ಕೋರಿದರು.

ಪ್ರಧಾನಿ ಮೋದಿ ಅವರ ಬೃಹತ್ ರೋಡ್ ಶೋ ಬಳಿಕ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ಇದು ಮೋದಿಯವರು ಪ್ರಧಾನಿಗಳಾದ ಬಳಿಕ ಕ್ಷೇತ್ರಕ್ಕೆ ಮೊದಲ ಭೇಟಿಯಾಗಿದೆ. ಇದರಿಂದ ಬಿಜೆಪಿಗೆ ಹೊಸ ಚೈತನ್ಯ ಮತ್ತು ಭರವಸೆಗಳು ಸಿಕ್ಕಿವೆ. ಅವರನ್ನು ಆದರದಿಂದ ಸ್ವಾಗತಿಸಿದ ಕ್ಷೇತ್ರದ ಜನತೆಗೆ ಕೃತಜ್ಞತೆಗಳು ಸಲ್ಲುತ್ತವೆ. ರಾಜ್ಯದ ಜನರು ಈ ಬಾರಿ ಬಿಜೆಪಿಗೆ ಸ್ಪಷ್ಟ ಬಹುಮತ ನೀಡಲು ತೀರ್ಮಾನಿಸಿದ್ದಾರೆ ಎಂದರು.

ಕಾಂಗ್ರೆಸ್ ದೇಶದ್ರೋಹಿ ಸಂಘಟನೆ ಪರ

ಈ ರೋಡ್ ಶೋ ಮೂಲಕ ವಿದ್ಯುತ್ ಸಂಚಾರ ಉಂಟಾಗಿದೆ. ಅದರಲ್ಲೂ ರಸ್ತೆಯ ಎರಡೂ ಬದಿಗಳಲ್ಲಿ ಭಜರಂಗ ದಳದ ಬಾವುಟ ಮತ್ತು ಜಯಘೋಷಗಳು ಮೊಳಗುವ ಮೂಲಕ ಕಾಂಗ್ರೆಸ್ಸಿಗೆ ಸ್ಪಷ್ಟ ಸಂದೇಶ ಕೊಡಲಾಗಿದೆ. ಆ ಪಕ್ಷವು ಭಯೋತ್ಪಾದನೆ ಮತ್ತು ದೇಶದ್ರೋಹಿ ಸಂಘಟನೆಯಾದ ಪಿಎಫ್ಐ ಪರ ಇರುವುದು ಸಾಬೀತಾಗಿದೆ ಎಂದು ಅಶ್ವತ್ಥನಾರಾಯಣ ಟೀಕಿಸಿದರು.

ಇದನ್ನೂ ಓದಿ : ‘ಭವ್ಯ ರಾಮನಗರ’ ನಿರ್ಮಾಣಕ್ಕೆ ಡಬಲ್ ಇಂಜಿನ್ ಸರ್ಕಾರ ಬದ್ಧ : ಸಚಿವ ಅಶ್ವತ್ಥನಾರಾಯಣ

26 ಕಿ.ಮೀ‌. ಭರ್ಜರಿ ರೋಡ್ ಶೋ

ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ನಗರದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ನಡೆಸಿದ 26 ಕಿ.ಮೀ‌. ಭರ್ಜರಿ ರೋಡ್ ಶೋ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಸಂಚಲನ ಹುಟ್ಟಿಸಿತು. ಬೆಳಗ್ಗೆ ಜೆ.ಪಿ.ನಗರದ ಸೋಮೇಶ್ವರ ಭವನದಲ್ಲಿ ಆರಂಭವಾದ ರೋಡ್ ಶೋ ಮಧ್ಯಾಹ್ನ 12.45ಕ್ಕೆ ಮಲ್ಲೇಶ್ವರದ ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ಕೊನೆಗೊಂಡಿತು.

ಈ ಸಂದರ್ಭದಲ್ಲಿ ಕ್ಷೇತ್ರದ ವ್ಯಾಪ್ತಿಯ ಮಹಾಕವಿ ಕುವೆಂಪು ರಸ್ತೆ ಮತ್ತು ಸಂಪಿಗೆ ರಸ್ತೆಗಳಲ್ಲಿ ಮೋದಿಯವರು ಇಕ್ಕೆಲಗಳಲ್ಲೂ ಮೋದಿ ಅವರನ್ನು ಕಣ್ತುಂಬಿಕೊಳ್ಳಲು ಸಾಲುಗಟ್ಟಿ ನಿಂತಿದ್ದ ಸಾವಿರಾರು ಅಭಿಮಾನಿಗಳಿಗೆ ಹರ್ಷಚಿತ್ತದಿಂದ ಮೋದಿ ಕೈಬೀಸುತ್ತ ತೆರೆದ ವಾಹನದಲ್ಲಿ ಸಾಗಿದರು. ತಮ್ಮ ನೆಚ್ಚಿನ ಪ್ರಧಾನಿಯನ್ನು ಕಂಡು ಪುಳಕಿತರಾದ ಸಾರ್ವಜನಿಕರು ಪುಷ್ಪವೃಷ್ಟಿಗರೆದರು.

RELATED ARTICLES

Related Articles

TRENDING ARTICLES