Sunday, May 12, 2024

ಧರ್ಮಯುದ್ಧದಲ್ಲಿ ‘ಸತ್ಯ ಗೆಲ್ಲಬೇಕು, ಅಧರ್ಮ’ ಸೋಲಬೇಕು : ‘ಕೈ’ ವಿರುದ್ಧ ಡಾ.ಕೆ ಸುಧಾಕರ್ ಗುಡುಗು

ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ನಡೆಯುವ ಚುನಾವಣಾ ಧರ್ಮಯುದ್ಧದಲ್ಲಿ ಸತ್ಯ-ಧರ್ಮ ಗೆಲ್ಲಬೇಕು, ಅಧರ್ಮ ಸೋಲಬೇಕು ಎಂದು ಕಾಂಗ್ರೆಸ್ ವಿರುದ್ಧ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ವಾಗ್ದಾಳಿ ನಡೆಸಿದರು.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಅಂಗರೇಖನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಪ್ರಚಾರ ನಡೆಸಿ, ಮತಯಾಚನೆ ಮಾಡಿದರು. ಈ ವೇಳೆ ಸಾರ್ವಜನಿಕರನ್ನುದ್ದೇಶಿಸಿ ಅವರು ಮಾತನಾಡಿದರು.

ಪ್ರಸ್ತುತ ನಡೆಯುತ್ತಿರುವ ಚುನಾವಣೆಗಳು ಧರ್ಮ ಯುದ್ಧವಾಗಿದ್ದು, ಈ ಯುದ್ಧದಲ್ಲಿ ಸತ್ಯ ಮತ್ತು ಧರ್ಮ ಗೆಲ್ಲಬೇಕು, ಅಧರ್ಮ ಸೋಲಬೇಕು. ಇದು ನಡೆಯಬೇಕಾದರೆ ಎಲ್ಲರೂ ಬಿಜೆಪಿಗೆ ಮತ ಹಾಕಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಅಭಿವೃದ್ಧಿ ಮಾತುಗಳಲ್ಲಿ ಹೇಳಬೇಕಾ?

ಕ್ಷೇತ್ರದಲ್ಲಿ ತಾವು ಮಾಡಿರುವ ಅಭಿವೃದ್ಧಿ ಮಾತುಗಳಲ್ಲಿ ಹೇಳಬೇಕಾದ ಅಗತ್ಯವಿಲ್ಲ. ಬದಲಿಗೆ ಕ್ಷೇತ್ರದ ಪ್ರತಿಯೊಬ್ಬ ವರ್ಗದವರಿಗೂ ಅನುಭವಕ್ಕೆ ಬಂದಿದೆ. ತೋಟದಲ್ಲಿ ಬೆಳೆಗೆ ನೀರು  ಹಾಯಿಸುವಾಗ, ಮಾರುಕಟ್ಟೆಗೆ ಹೂವು ಕೊಂಡೊಯ್ಯುವಾಗ ರೈತರಿಗೆ ಸುಧಾಕರ್ ನೆನಪಾಗಲಿದ್ದಾರೆ. ಅಂತಾರಾಷ್ಟ್ರೀಯ ಖ್ಯಾತಿಯ ಹೂವಿನ ಮಾರುಕಟ್ಟೆ ನಿರ್ಮಾಣ ಮಾಡಬೇಕು ಎಂಬ ಗುರಿ ಮುಟ್ಟಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ : ಕಾಂಗ್ರೆಸ್ ಪ್ರಣಾಳಿಕೆ ಸುಟ್ಟುಹಾಕಿದ ಈಶ್ವರಪ್ಪ

ಅಂಗರೇಖನಹಳ್ಳಿ  ಗ್ರಾಪಂ ವ್ಯಾಪ್ತಿಯಲ್ಲಿ 2013ಕ್ಕೂ ಮುನ್ನ ಗುಣಮಟ್ಟದ ರಸ್ತೆಯೇ ಇರಲಿಲ್ಲ. ಕಳೆದ 10 ವರ್ಷದಲ್ಲಿ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸುವ ಜೊತೆಗೆ ಅನೇಕ ಅಬಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಮುಖ್ಯವಾಗಿ ನಿವೇಶನಗಳನ್ನು ಬಡವರಿಗೆ ಹಂಚಲಾಗಿದೆ. ಮುಂದೆ ಈ ನಿವೇಶನಗಳಲ್ಲಿ ಸರ್ಕಾರದಿಂದಲೇ 5 ಲಕ್ಷ ರೂ. ನೀಡಿ ಮನೆಗಳನ್ನು ನಿರ್ಮಿಸಿಕೊಡುವ ಕೆಲಸವೂ ನಡೆಯಲಿದೆ ಎಂದು ಸಚಿವ ಡಾ.ಕೆ ಸುಧಾಕರ್ ಭರವಸೆ ನೀಡಿದರು.

2028ಕ್ಕೆ ಮತ್ತೆ ಮತ ಕೇಳುವುದಿಲ್ಲ

ಮುಂದಿನ ಐದು ವರ್ಷದ ಅವಧಿಯಲ್ಲಿ ಈ ಭಾಗಕ್ಕೆ ಕೈಗಾರಿಕೆಗಳನ್ನು ತಂದು ಪ್ರತಿ ಮನೆಗೆ ಉದ್ಯೋಗ ನೀಡದಿದ್ದರೆ 2028ಕ್ಕೆ ಮತ್ತೆ ತಾವು ಮತ ಕೇಳುವುದಿಲ್ಲ. ಪ್ರಸ್ತುತ ಸಮಯದ ಅಭಾವ ಇರುವ ಕಾರಣ ಪ್ರತಿ ಹಳ್ಳಿಗೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ. ಚುನಾವಣೆ ಮುಗಿದ ನಂತರ ಪ್ರತಿ ಗ್ರಾಮಕ್ಕೆ ಭೇಟಿ ನೀಡಲಾಗುವುದು. ನೀವೇ ಸುಧಾಕರ್ ಎಂದು ಭಾವಿಸಿ ಮತ ಹಾಕಿಸುವ ಕೆಲಸವಾಗಬೇಕು. ಇದರಿಂದ ಇಡೀ ದೇಶಕ್ಕೇ ಚಿಕ್ಕಬಳ್ಳಾಪುರ ಬ್ರಾಂಡ್ ಆಗಿ ಪರಿವರ್ತನೆ ಮಾಡುವ ಕೆಲಸವನ್ನು ಮಾಡುತ್ತೇನೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES