Friday, April 26, 2024

‘ನುಡಿದಂತೆ ನಡೆಯುವ ಯಾವನಾದ್ರು ಸಿಎಂ’ ಇದ್ರೆ ಅದು ನನ್ನ ಮಗ : ಎಚ್.ಡಿ ದೇವೇಗೌಡ

ಚನ್ನಪಟ್ಟಣ : ನುಡಿದಂತೆ ನಡೆಯುವ ಯಾವನಾದ್ರು ಸಿಎಂ ಇದ್ರೆ.. ರಾಜಕಾರಣಿ ಯಾವನಾದ್ರು ಇದ್ರೆ.. ಅದು ನನ್ನ ಮಗ ಕುಮಾರಸ್ವಾಮಿ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಪುತ್ರನ ಪರ ಬ್ಯಾಟ್ ಬೀಸಿದರು.

ಚನ್ನಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರಿಗೆ ಬಹಿರಂಗ ಸವಾಲೆಸಿದರು.

ಕುಮಾರಸ್ವಾಮಿ ಕಳೆದೆರಡು ದಿನಗಳಲ್ಲಿ ಹದಿನಾರು ಕ್ಷೇತ್ರಗಳಲ್ಲಿ ಪ್ರಚಾರ ಮಾಡ್ತಿದ್ದಾರೆ. ಈ ದೇಶದಲ್ಲಿ ರೈತನಿಗೆ ಪಿಂಚಣಿ‌ ಕೊಡ್ತೇನೆ ಎಂದು ಹೇಳುವ ವ್ಯಕ್ತಿ ಇದ್ರೆ ಅದು ಕುಮಾರಸ್ವಾಮಿ. ಯಾವನಾದ್ರು ಸಿಎಂ ಇದ್ರೆ, ನುಡಿದಂತೆ ನಡೆಯುವ ರಾಜಕಾರಣಿ ಯಾವನಾದ್ರು ಇದ್ರೆ ಅದು ಕುಮಾರಸ್ವಾಮಿ ಎಂದರು.

ಕಾಂಗ್ರೆಸ್‌ನವರ ವ್ಯಂಗ್ಯದ ನಡುವೆ ಸಾಲ‌ ಮನ್ನಾ ಮಾಡಿದ್ರು. ಬಜೆಟ್ ಮೇಲಿನ ಚರ್ಚೆಯಲ್ಲಿ ಎರಡನೇ ಸಾಲಿನಲ್ಲಿ ಕುಳಿತ ಸಿದ್ದರಾಮಯ್ಯ ವ್ಯಂಗ್ಯ ಮಾಡಿ ಹೊರಗೆ ಹೋಗ್ತಾರೆ. ಹಿಂದೂಸ್ಥಾನದಲ್ಲಿ ಕಾಂಗ್ರೆಸ್‌ನ ಎಲ್ಲಾ ಕಾರ್ಯಕ್ರಮಗಳಿಗೆ ಹಣ ಕೊಟ್ಟು ಸಾಲ ಮನ್ನಾ ಮಾಡಿದ್ದು ಕುಮಾರಸ್ವಾಮಿ. ಸಿದ್ದರಾಮಯ್ಯ ಐವತ್ತು ಸಾವಿರ  ಸಾಲ‌ ಮನ್ನಾ ಮಾಡಿದ್ದರೂ 3,500 ಕೋಟಿ ಬಾಕಿ ಉಳಿದಿತ್ತು. ಅದರ ಜೊತೆಗೆ 26 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದು ಕುಮಾರಸ್ವಾಮಿ ಎಂದು ಮಗನನ್ನು ಕೊಂಡಾಡಿದರು.

ಇದನ್ನೂ ಓದಿ : ಸಾಲ ಮನ್ನಾ ಮಾಡಿದ್ದು ನಾನು, ‘ಸಿದ್ದು ಬ್ಯುಸಿ’ಯಲ್ಲಿ ಮರೆತಿದ್ದಾರೆ : ಕುಮಾರಸ್ವಾಮಿ

ಬಿಜೆಪಿಯವ್ರು ನನ್ನ ಮುಂದೆ ನಿಂತು ಹೇಳಲಿ

ಇಡೀ ಹಿಂದೂಸ್ತಾನದಲ್ಲಿ ಕುಮಾರಸ್ವಾಮಿಯಂತ ಮತ್ತೊಬ್ಬ ಸಿಎಂ ಇಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿಯವ್ರು ನನ್ನ ಮುಂದೆ ನಿಂತು ಹೇಳಲಿ. ‌ಇದು ನನ್ನ ಸವಾಲು. ಮಂಡ್ಯದಿಂದ ಸ್ಪರ್ಧೆಗೆ ಒತ್ತಡ ಬಂದ್ರೂ ಚನ್ನಪಟ್ಟಣ ನನ್ನ ಕರ್ಮ ಭೂಮಿ ಅಂತ ನಿರಾಕರಿಸಿದ್ರು. ಮುಸ್ಲಿಂ ಮೀಸಲಾತಿ ಕೊಟ್ಟಿದ್ದು ಯಾರು? ಮುಸ್ಲಿಂ ವಸತಿ ಶಾಲೆಗಳನ್ನು ಕೊಟ್ಟಿದೆ. ಆದರೆ, ಸಮಾಜ ಕಲ್ಯಾಣ ಇಲಾಖೆಗಳಿಗೆ ಸೇರಿಸಿ ಹಾಳು ಮಾಡಿದ್ರು. 13 ಬಾರಿ ಬಜೆಟ್ ಮಂಡಿಸಿದ್ದೇನೆ ಎನ್ನುವವರು ಉತ್ಸಾಹ ತೋರಲಿಲ್ಲ ಎಂದು ಗುಡುಗಿದರು.

ನನ್ನ ಮಗ ಸಿಎಂ ಆಗುವುದು ಶತಸಿದ್ದ

ಚನ್ನಪಟ್ಟಣದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿದ್ರೂ ಒಂದೇ ತಾಯಿ ಮಕ್ಕಳಂತೆ ಕೆಲಸ ಮಾಡಿ. ಸಮೀಕ್ಷಾ ವರದಿಗಳ ಬಗ್ಗೆ ತಲೆ‌ಕೆಡಿಸಿಕೊಳ್ಳಬೇಡಿ. ಕುಮಾರಸ್ವಾಮಿ ಸಿಎಂ ಆಗುವುದು ಶತಸಿದ್ದ. ಮುಖ್ಯಮಂತ್ರಿ ಕೊಡುವ ಹೆಗ್ಗಳಿಕೆ ಚನ್ನಪಟ್ಟಣಕ್ಕೆ ಸಲ್ಲಬೇಕು. ಯುವಕರು ದೇಶದ ಮುಂದಿನ ಪ್ರಜೆಗಳು ಈ ಪಕ್ಷವನ್ನು ಉಳಿಸಿ. ನಾವು ತಾಯಿ ಭುವನೇಶ್ವರಿ ಮಕ್ಕಳು ನಾಡಿಗಾಗಿ ತಮ್ಮ ಶಕ್ತಿ ತೋರಿಸಿ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.

ನಿಮ್ಮ ಮನೆ ಮಗನನ್ನ ಸಿಎಂ ಮಾಡಿ

ಕುಮಾರಸ್ವಾಮಿ ಇಡೀ ರಾಜ್ಯ ಸುತ್ತಬೇಕು. ಅವರು ಬರಲು ಸಾಧ್ಯವಿಲ್ಲ. ರಾತ್ರಿ 12ರವರೆಗೂ ಪ್ರಚಾರ ಮಾಡ್ತಿದ್ದಾರೆ. ಯಾರು ಏನೇ ಹೇಳಿದರೂ, ಅಪ ಪ್ರಚಾರ ಮಾಡಿದರೂ ನಿಮ್ಮ ಮನೆ ಮಗನನ್ನ ಸಿಎಂ ಮಾಡ್ತೀವಿ ಅಂತ ಪಣ ತೊಡಿ ಎಂದು ಚನ್ನಪಟ್ಟಣದಲ್ಲಿ ಪುತ್ರನ ಗೆಲುವಿಗೆ ಎಚ್.ಡಿ ದೇವೇಗೌಡ ಅವರು ಕರೆ ಕೊಟ್ಟರು.

RELATED ARTICLES

Related Articles

TRENDING ARTICLES