Friday, April 19, 2024

ಮುಂದಿನ 5 ವರ್ಷ ದೇಶದ ಪಾಲಿಗೆ ‘ಅಮೃತ ಕಾಲ’ : ಸಂವಾದದಲ್ಲಿ ಮೋದಿ ಘರ್ಜನೆಯ ಹೈಲೆಟ್ಸ್ ಇಲ್ಲಿದೆ ನೋಡಿ

ನವದೆಹಲಿ : ಮುಂದಿನ 5 ವರ್ಷ ದೇಶದ ಪಾಲಿಗೆ ಅಭಿವೃದ್ಧಿಯ ಪರ್ವ. ಅಭಿವೃದ್ಧಿಯ ನೆಲೆಯಲ್ಲಿ ಈ ಐದು ವರ್ಷಗಳು ಬಹು ಮುಖ್ಯ. ಅಭಿವೃದ್ಧಿ ಅಂದರೆ ಏನು ಎಂಬುದರ ಬಗೆಗೂ ಒಂದು ಸ್ಪಷ್ಟ ಚಿತ್ರಣ ಇರಬೇಕಾದ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ರಾಜ್ಯ ವಿಧಾನಸಭೆ ಚುನಾವಣೆ ರೂಪುರೇಷೆಗಳ ಕುರಿತು ಕಾರ್ಯಕರ್ತರ ನಡುವೆ ನಡೆಸಿದ ಸಂವಾದದಲ್ಲಿ ಪ್ರಧಾನಿ ಮೋದಿ ಅವರು ಮಾತನಾಡಿದರು. ಸಂವಾದದಲ್ಲಿ ಪ್ರಧಾನಿ ಮೋದಿ ಭಾಷಣದ ಹೈಲೆಟ್ಸ್ ಇಲ್ಲಿದೆ ನೋಡಿ.

  • ಕಾರ್ಯಕರ್ತರ ಶ್ರಮದ ಫಲವಾಗಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಬಹುಮತದಿಂದ ಆರಿಸಿ ಬರಲಿದೆ. ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ಹಬ್ಬ ನಡೆಯುತ್ತಿದೆ. ಬಿಜೆಪಿ ಸದಾ ಚುನಾವಣೆಗಳನ್ನು ಪ್ರಜಾಪ್ರಭುತ್ವದ ಮಹೋತ್ಸವದ ರೀತಿಯಲ್ಲಿ ಆಚರಿಸುತ್ತಾ ಬಂದಿದೆ.
  • ಪ್ರತಿ ಬೂತ್‌ನಲ್ಲಿ ನಿಮ್ಮ ಮೂಲಕ ನಡೆದ ಪ್ರಯತ್ನಗಳು ಬಿಜೆಪಿಯನ್ನು ಕರ್ನಾಟಕದಲ್ಲಿ ದಾಖಲೆಯ ಸ್ಥಾನಗಳಿಂದ ಗೆಲ್ಲಿಸಿಕೊಡುತ್ತದೆ ಎಂಬ ವಿಶ್ವಾಸ ನನಗಿದೆ. ಬೂತ್ ಜಯ ಗಳಿಸಿದಾಗ ಚುನಾವಣೆಯಲ್ಲಿ ವಿಜಯ ಖಚಿತವಾಗಿ ದೊರೆಯುತ್ತದೆ.
  • ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ಹಬ್ಬ ನಡೆಯುತ್ತಿದೆ. ಬಿಜೆಪಿ ಪ್ರತಿ ಚುನಾವಣೆಯನ್ನು ಹಬ್ಬವಾಗಿ ಆಚರಿಸುತ್ತದೆ. ರಾಷ್ಟ್ರಭಕ್ತಿಯ ಜೊತೆಗೆ ಬಿಜೆಪಿ ಕಾರ್ಯಕರ್ತ ಆಗಿರುವುದಕ್ಕೆ ಹೆಮ್ಮೆ, ಗೌರವ ಪಡಬೇಕು.
  • ನಾನು ಎಲ್ಲ ಕಾರ್ಯಕರ್ತರ ಜೊತೆಗಿರಲು ಬಯಸುತ್ತೇನೆ. ಇಡೀ ಕರ್ನಾಟಕದ ಜನರು ಬಿಜೆಪಿ ಜೊತೆಗಿದ್ದಾರೆ ಎಂದು ರಾಜ್ಯ ನಾಯಕರು ನನಗೆ ತಿಳಿಸಿದ್ದಾರೆ. ಸಮಸ್ತ ಕಾರ್ಯಕರ್ತರೊಂದಿಗೆ ಮಾತನಾಡಲು ಮಹಾ ಸಂವಾದ ಆಯೋಜಿಸಿದ್ದೇವೆ.

  • ಕೆಲವು ಪಕ್ಷಗಳು ಪ್ರಜಾಪ್ರಭುತ್ವ ಎಂದರೆ ಚುನಾವಣೆಗಳನ್ನು ಗೆಲ್ಲುವುದಷ್ಟೇ ಅಂದುಕೊಂಡಿವೆ, ಗೆಲುವಿಗಾಗಿ ಅವರು ಏನು ಮಾಡಲೂ ಸಿದ್ಧ. ಅವರಿಗೆ ಅಭಿವೃದ್ಧಿ ಬೇಕಿಲ್ಲ. ತುಷ್ಟೀಕರಣ ನೀತಿಗಾಗಿ ಭರ್ಜರಿ ಖರ್ಚು ಮಾಡುತ್ತಾರೆ.
  • ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಕರ್ನಾಟಕದ ಜನರಿಗೆ ಆಡಳಿತದ ಅಸ್ಥಿರತೆಯು ರಾಜ್ಯಕ್ಕೆ ಹೇಗೆ ನಷ್ಟವನ್ನು ಉಂಟುಮಾಡಿದೆ ಎಂಬುದನ್ನು ಜನರಿಗೆ ಅರ್ಥಮಾಡಿಸಿ. ವಿರೋಧ ಪಕ್ಷಗಳ ಗುರಿ ಕೇವಲ ಚುನಾವಣೆಯಲ್ಲಿ ಗೆಲ್ಲುವುದಾದರೆ, ಮುಂದಿನ 25 ವರ್ಷಗಳಲ್ಲಿ ಭಾರತವನ್ನು ಎಲ್ಲ ರೀತಿಯ ಸಮಸ್ಯೆಗಳಿಂದ ಮುಕ್ತಗೊಳಿಸುವುದು ನಮ್ಮ ಗುರಿಯಾಗಿದೆ.

ಇದನ್ನೂ ಓದಿ : ಕಾಂಗ್ರೆಸ್ 70 ವರ್ಷಗಳಲ್ಲಿ ಕೇವಲ 7 ಏಮ್ಸ್ ನಿರ್ಮಿಸಿದೆ : ಪ್ರಧಾನಿ ನರೇಂದ್ರ ಮೋದಿ

  • 1920 ರ ನಂತರದ 25 ವರ್ಷಗಳು 800 ವರ್ಷಗಳ ವಸಾಹತುಶಾಹಿಯಿಂದ 1947ರಲ್ಲಿ ನಮಗೆ ಹೇಗೆ ಸ್ವಾತಂತ್ರ್ಯವನ್ನು ತಂದುಕೊಟ್ಟವೋ ಹಾಗೆಯೇ ಈ 5 ವರ್ಷಗಳು ಭಾರತದ ಅಮೃತ ಕಾಲದ ಯಶಸ್ಸನ್ನು ನಿರ್ಧರಿಸುತ್ತವೆ.
  • ಬಿಜೆಪಿ ಕಾರ್ಯಕರ್ತರ ಉತ್ಸಾಹ ಬೇರೆ ಪಕ್ಷಕ್ಕಿಂತ ಭಿನ್ನ ಎಂದು ತೋರಿಸುತ್ತದೆ. ಬೂತ್‌ ಮಟ್ಟದಲ್ಲಿ ಬಿಜೆಪಿ ಸಂಘಟಿತ ಶಕ್ತಿ ದೊಡ್ಡಮಟ್ಟದ್ದಾಗಿದೆ. ಪ್ರತಿ ಬೂತ್‌ನಲ್ಲಿ ಬಿಜೆಪಿ ಗೆಲ್ಲಿಸುವ ಉತ್ಸಾಹ ತೋರಿಸುತ್ತಿದ್ದೀರಿ. ಕಾರ್ಯಕರ್ತರ ಉತ್ಸಾಹದಿಂದ ನಾಯಕರ ಶಕ್ತಿ ಇಮ್ಮಡಿಸಿದೆ.
  • ಪ್ರತಿ ಬೂತ್‌ಮಟ್ಟದಲ್ಲಿ ಕಾರ್ಯಕರ್ತರು ಟೀಂ ಆಗಿ ಕಾರ್ಯ ನಿರ್ವಹಿಸಬೇಕು. 10 ಮಹಿಳಾ ಹಾಗೂ 10 ಪುರುಷ ಕಾರ್ಯಕರ್ತರು ಬೂತ್‌ ಮಟ್ಟದಲ್ಲಿ ಕಾರ್ಯ ನಿರ್ವಹಿಸಬೇಕು. ಸ್ಥಳೀಯ ಮಟ್ಟದಲ್ಲಿ ಯುವ ಕಾರ್ಯಕರ್ತರು ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು.
  • ಎಫ್‌ಡಿಐ ಅಂದರೆ‌ ನನ್ನ ಪಾಲಿಗೆ ಫಸ್ಟ್‌ ಡೆವೆಲಪ್ ಇಂಡಿಯಾ. ಆದರೆ ಹಿಂದಿನ ಕಾಂಗ್ರೆಸ್ ಸರ್ಕಾರವಿದ್ದಾಗ ಹರಿದುಬಂದ ವಿದೇಶಿ ನೇರ ಬಂಡವಾಳ 1 ಲಕ್ಷ‌ ಕೋಟಿ ರೂ. ಆದರೆ, ನಮ್ಮ ಸರ್ಕಾರ ಕಳೆದ ನಾಲ್ಕೇ ವರ್ಷಗಳಲ್ಲಿ 4 ಲಕ್ಷ ಕೋಟಿ ರೂ. ಆಕರ್ಷಿಸಿದ್ದೇವೆ.
  • ದೇಶದಲ್ಲಿ ಮೊದಲ ಏಮ್ಸ್ (AIIMS) ಅನ್ನು 1956 ರಲ್ಲಿ ನಿರ್ಮಿಸಲಾಯಿತು. ಎರಡನೇ AIIMS ಅನ್ನು 2003 ರಲ್ಲಿ ಅಟಲ್ ಜೀ ನೇತೃತ್ವದಲ್ಲಿ ನಿರ್ಮಿಸಲಾಗಿದ್ದು ಎಂದು ತಿಳಿದರೆ ಆಶ್ಚರ್ಯ ಪಡುತ್ತೀರಿ. 2014 ರವರೆಗೆ ಕೇವಲ 7 ಏಮ್ಸ್ (AIIMS) ಇತ್ತು. ಇಂದು ಇದರ ಸಂಖ್ಯೆ 20. ಇದು ಡಬಲ್ ಎಂಜಿನ್ ಸರ್ಕಾರದ ಶಕ್ತಿ.
  • ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನದ ಮಂದಿ ಕಾಂಗ್ರೆಸ್ ನೀಡಿದ್ದ ಗ್ಯಾರೆಂಟಿಗಳಿಗೆ ಪಾಪ ಈಗಲೂ ಕಾಯುತ್ತಲೇ ಇದ್ದಾರೆ. ಕಾಂಗ್ರೆಸ್‌ನ ವಾರಂಟಿಯದ್ದೇ ವಾಯಿದೆ‌ ಮುಗಿದಿರುವಾಗ ಅಂಥ ಪಾರ್ಟಿಯಿಂದ ಏನು ತಾನೆ ಗ್ಯಾರೆಂಟಿ ನಿರೀಕ್ಷೆ ಸಾಧ್ಯ?
  • ಕೆಲವು ಪಕ್ಷಗಳು ರಾಜಕೀಯವನ್ನು ಭಷ್ಟಾಚಾರ ಮತ್ತು ಬಾಹುಬಲದ ವಾಹಕವಾಗಿಸಿದ್ದಾರೆ. ಕೆಲವು ರಾಜ್ಯಗಳಲ್ಲಂತೂ ಉಚಿತ‌ ಕೊಡುಗೆಗಳಿಗಾಗಿ ರಾಜ್ಯದ ಭವಿಷ್ಯವನ್ನೇ ಸಂಕಷ್ಟಕ್ಕೆ ದೂಡಲಾಗಿದೆ. ಸರ್ಕಾರಗಳು ಇಂದಿನದ್ದು‌ ಮಾತ್ರವಲ್ಲ, ಮುಂಬರುವ ತಲೆಮಾರುಗಳ ಬಗೆಗೂ ಚಿಂತಿಸಬೇಕು.

RELATED ARTICLES

Related Articles

TRENDING ARTICLES