Sunday, April 28, 2024

ಮೋದಿ ‘ಕೈ’ ಬಲಪಡಿಸಲು ಸೀಕಲ್ ರಾಮಚಂದ್ರಗೌಡರನ್ನು ಗೆಲ್ಲಿಸಿ : ಜೆ.ಪಿ ನಡ್ಡಾ

ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಚುನಾವಣೆ ಕಾವು ಜೋರೋಗಿದ್ದು, ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಪರ ಅಬ್ಬರದ ರೋಡ್ ಶೋ ನಡೆಸುತ್ತಿವೆ. ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೀಕಲ್​ ರಾಮಚಂದ್ರಗೌಡರಿಗೆ ಹೋದಲ್ಲೆಲ್ಲಾ ಭಾರೀ ಜನಬೆಂಬಲ ವ್ಯಕ್ತವಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಶಿಡ್ಲಘಟ್ಟದಲ್ಲಿ ಬೃಹತ್ ರೋಡ್ ಶೋ ನಡೆಸಿದರು.

ರೋಡ್ ಶೋ‌ನಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಸೀಕಲ್ ರಾಮಚಂದ್ರಗೌಡ ಗೆಲುವಿಗಾಗಿ ರೋಡ್ ಶೋ ಮಾಡುತ್ತಿದ್ದೇವೆ. ಈ‌ ಚುನಾವಣೆ ಕರ್ನಾಟಕದ ಅಭಿವೃದ್ಧಿಗಾಗಿ ನಡೆಯುತ್ತಿರುವ ಚುನಾವಣೆಯಾಗಿದೆ. ಡಾ.ಕೆ ಸುಧಾಕರ್, ಸೀಕಲ್ ರಾಮಚಂದ್ರಗೌಡ ಅಥವಾ ನಳಿನ್ ಕುಮಾರ್ ಕಟೀಲ್​ಗಾಗಿ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ.

ಶಿಡ್ಲಘಟ್ಟದ ಬದಲಾವಣೆಗಾಗಿ, ಅಭಿವೃದ್ಧಿಗಾಗಿ ನಮ್ಮ ಅಭ್ಯರ್ಥಿ ಸೀಕಲ್​ ರಾಮಚಂದ್ರಗೌಡರಿಗೆ ಮತ ನೀಡಿ ಬದಲಾವಣೆಗೆ ಕಾರಣರಾಗ ಬೇಕು. ಮತ್ತೆ ಕರ್ನಾಟಕದಲ್ಲಿ ಬಿಜೆಪಿ ಆಡಳಿತವನ್ನು ತರಲು, ಪ್ರಧಾನಿ ನರೇದ್ರ ಮೋದಿ ಕೈ ಬಲಪಡಿಸಲು ಈ ಬಾರಿ ಸೀಕಲ್​ ರಾಮಚಂದ್ರಗೌಡರನ್ನು ಅಧಿಕ ಮತಗಳಿಂದ ಗೆಲ್ಲಿಸಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ : ನಿಮ್ಮ ‘ಕೈ’ ಕೆಸರಿನಲ್ಲಿ ನಮ್ಮ ‘ಕಮಲ’ ಅರಳಿಸಿ : ಸೀಕಲ್ ರಾಮಚಂದ್ರಗೌಡ

ಶಿಡ್ಲಘಟ್ಟ ಅಭಿವೃದ್ಧಿಗೆ ಸೀಕಲ್​ಗೆ ಮತ ನೀಡಿ

ಡಬಲ್ ಇಂಜಿನ್ ಸರ್ಕಾರ ಡಬಲ್ ಸ್ಪೀಡ್​ನಲ್ಲಿ ಕೆಲಸ ಮಾಡುತ್ತದೆ. ಮತ್ತೊಮ್ಮೆ ಕರ್ನಾಟಕದಲ್ಲಿ ಬಿಜೆಪಿಗೆ ಅವಕಾಶ ಮಾಡಿಕೊಡಬೇಕಿದೆ. ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ಬೊಮ್ಮಾಯಿ‌ ಅಭಿವೃದ್ಧಿ ಮಾಡುತ್ತಿದ್ದಾರೆ. 2018 ರಲ್ಲಿ ಕೊಟ್ಟಂತಹ ಎಲ್ಲ ಭರವಸೆಯನ್ನು ಬಿಜೆಪಿ ಈಡೇರಿಸಿದೆ. ಕುಮಾರಸ್ವಾಮಿ ಸರ್ಕಾರ ರೈತರ ಪರ ಯೋಜನೆಗಳಿಗೆ ಮನ್ನಣೆ ನೀಡಿಲ್ಲ. ಕರ್ನಾಟಕದ ಅಭಿವೃದ್ಧಿಗಾಗಿ ಮೋದಿಗಾಗಿ ಮತ ನೀಡಿ. ಕ್ಷೇತ್ರದ ಅಭಿವೃದ್ಧಿಗಾಗಿ ಸೀಕಲ್​ಗೆ ಮತ ನೀಡಿ ಎಂದು ಜೆ.ಪಿ ನಡ್ಡಾ ಕರೆ ಕೊಟ್ಟಿದ್ದಾರೆ.

ಮುಸ್ಲಿಮರ ಮೀಸಲಾತಿ ವಾಪಸ್​ಗೆ ಯತ್ನ

ಪಿಎಫ್​ಐ ದೇಶವನ್ನು ಸಂಕಷ್ಟಕ್ಕೆ ಸಿಲುಕಿಸುವ ಪ್ರಯತ್ನ ಮಾಡುತ್ತಿತ್ತು. ಸಿದ್ದರಾಮಯ್ಯ ಸರ್ಕಾರ ಪಿಎಫ್​ಐಗೆ ಬೆಂಬಲ‌ ನೀಡುತ್ತಿತ್ತು. ಆದರೆ, ಬಿಜೆಪಿ ಸರ್ಕಾರ ಆ ಸಂಘಟನೆಯನ್ನೇ ಬ್ಯಾನ್ ಮಾಡಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪಿಎಫ್​ಐ ಪರ ಧ್ವನಿ ಎತ್ತುತಿದ್ದಾರೆ. ಮುಸ್ಲಿಮರ ಮೀಸಲಾತಿಯನ್ನು ವಾಪಸ್ ತರುವ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಜೆ.ಪಿ ನಡ್ಡಾ ವಾಗ್ದಾಳಿ ನಡೆಸಿದ್ದಾರೆ.

ರೋಡ್ ಶೋನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಸದ ಎಸ್.ಮುನಿಸ್ವಾಮಿ, ಬಿಜೆಪಿ‌ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ ಹಾಗೂ ಇತರ ಗಣ್ಯರು ಪಾಲ್ಗೊಂಡರು.

ಒಟ್ಟಾರೆ, ಶಿಡ್ಲಘಟ್ಟ ಕ್ಷೇತ್ರದಲ್ಲಿ ಈ ಬಾರಿ ಕ್ಷೇತ್ರದ ಅಭಿವೃದ್ಧಿಗಾಗಿ, ಬೆಳವಣಿಗಾಗಿ ಸೀಕಲ್​ ರಾಮಚಂದ್ರಗೌಡರನ್ನು ಗೆಲ್ಲಿಸಲು ಬಿಜೆಪಿ ರಣತಂತ್ರ ಹೆಣೆದಿದೆ. ಕ್ಷೇತ್ರದ ಜನರು ಸಹ ಬಿಜೆಪಿಗೆ ಅಭೂತಪೂರ್ವ ಬೆಂಬಲ ನೀಡುತ್ತಿದ್ದಾರೆ. ಜೆ.ಪಿ ನಡ್ಡಾ ಅವರ ಆಗಮನ ಮತ್ತಷ್ಟು ಬಲ ನೀಡಿದೆ.

RELATED ARTICLES

Related Articles

TRENDING ARTICLES