Saturday, May 18, 2024

JDSಗೆ ಸ್ವಂತ ಬಲದಿಂದ ಅಧಿಕಾರಕ್ಕೆ ಬರುವ ಶಕ್ತಿಯೇ ಇಲ್ಲ : ಅಶ್ವತ್ಥನಾರಾಯಣ

ಕೆ.ಆರ್.ಪೇಟೆ : ಜೆಡಿಎಸ್ ಪಕ್ಷಕ್ಕೆ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವ ಶಕ್ತಿಯೇ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಲೇವಡಿ ಮಾಡಿದ್ದಾರೆ.

ತಾಲ್ಲೂಕಿನ ಶೀಳನೆರೆ ಗ್ರಾಮದಲ್ಲಿ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಸಚಿವ ಕೆ.ಸಿ ನಾರಾಯಣಗೌಡರ ಪರವಾಗಿ ಶನಿವಾರ ಪ್ರಚಾರ ಸಭೆ ನಡೆಸಿ, ಮಾತನಾಡಿದರು. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗಲೇ ಅಸಹಾಯಕತೆಯಿಂದ ಒದ್ದಾಡಿ, ತಮ್ಮನ್ನು ಸಾಂದರ್ಭಿಕ ಶಿಶು ಅಂತ ಗೋಳಾಡುತ್ತಿದ್ದರು. ಈಗಂತೂ ಆ ಪಕ್ಷಕ್ಕೆ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವ ಶಕ್ತಿಯೇ ಇಲ್ಲ ಎಂದು ಕುಟುಕಿದ್ದಾರೆ.

ಒಕ್ಕಲಿಗರ ಮತವೆಲ್ಲ ಜೆಡಿಎಸ್‌ಗೆ!

ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಸೇರಿಕೊಂಡು ಜಿಲ್ಲೆಯ ಜೀವನಾಡಿಗಳಲ್ಲಿ ಒಂದಾದ ಮೈಶುಗರ್ ಕಾರ್ಖಾನೆಗೆ ಬೀಗ ಹಾಕಿದ್ದವು. ಆದರೆ, ಬಿಜೆಪಿ ಸರಕಾರವು ಈ ಕಾರ್ಖಾನೆಗೆ ಮರುಜೀವ ನೀಡಿ, ರೈತರಿಗೆ ನೆರವು ನೀಡುತ್ತಿದೆ. ಒಕ್ಕಲಿಗರ ಮತವೆಲ್ಲ ಜೆಡಿಎಸ್‌ಗೆ ಅನ್ನುವ ಕಾಲವಿತ್ತು. ಆದರೆ, ಅದರಿಂದ ಯಾವ ಪ್ರಯೋಜನವೂ ಇಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ : ರಿಸ್ಕ್ ತೆಗೆದುಕೊಳ್ಳೋದ್ರಲ್ಲಿ ‘ಬಿಜೆಪಿ ವರಿಷ್ಠರು ನಿಸ್ಸೀಮರು’ : ಬಿ.ವೈ ವಿಜಯೇಂದ್ರ

ಬಿಜೆಪಿ ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಪಕ್ಷ

ಕಾಂಗ್ರೆಸ್ ಈಗಿರುವ ಸೀಟುಗಳನ್ನೇ ಉಳಿಸಿಕೊಳ್ಳುವುದು ಕಷ್ಟವಾಗಿದೆ. ಇನ್ನು ಕಣ್ಣೀರು ಸುರಿಸುವ ಜೆಡಿಎಸ್‌ಗೆ ವೋಟು ಹಾಕಿದರೆ ಅದು ವ್ಯರ್ಥ. ಏಕೆಂದರೆ, ಅಧಿಕಾರ ಕೊಟ್ಟಾಗಲೇ ಅವರು ಏನೂ ಮಾಡಲಿಲ್ಲ. ಆದ್ದರಿಂದ ಇಲ್ಲಿನ ಮತದಾರರು ತಾಲ್ಲೂಕಿನ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ಚಲಾಯಿಸಬೇಕು. ಇವತ್ತು ಬಿಜೆಪಿ ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಪಕ್ಷವಾಗಿದೆ ಎಂದು ತಿಳಿಸಿದ್ದಾರೆ.

ಜೆಡಿಎಸ್ ನಾಯಕರ ಕಣ್ಣೀರಿಗೆ ಮರುಳಾಗಬೇಡಿ

ಜನರ ನಾಡಿಮಿಡಿತ ಅರಿತಿರುವ ಪಕ್ಷವೆಂದರೆ ಅದು ಬಿಜೆಪಿ ಮಾತ್ರ. ಜೆಡಿಎಸ್ ನಾಯಕರ ಕಣ್ಣೀರಿಗೆ ಮರುಳಾದರೆ ನಮ್ಮ ಕಣ್ಣನ್ನೇ ನಾವು ಕಳೆದುಕೊಂಡಂತೆ ಅಷ್ಟೆ. ಅವರಿಗೆ ಮತ ಹಾಕುವುದರಿಂದ ಜನರಿಗೆ ಯಾವ ಪ್ರಯೋಜನವೂ ಇಲ್ಲ. ಬಿಜೆಪಿ ಮಾತ್ರ ಆಡಳಿತ ಮತ್ತು ಅಭಿವೃದ್ಧಿ ಎರಡಕ್ಕೂ ಸಮಾನ ಮಹತ್ತ್ವ ಕೊಡುತ್ತ, ಪ್ರತಿಯೊಬ್ಬರ ಏಳಿಗೆಗೂ ಶ್ರಮಿಸುತ್ತಿದೆ ಎಂದಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ಇದುವರೆಗೂ ಜೆಡಿಎಸ್‌ಗೆ ಮಣೆ ಹಾಕಿಕೊಂಡು ಬರಲಾಗಿದೆ. ಆದರೆ, ಅದರಿಂದ ಜಿಲ್ಲೆಗೆ ಯಾವ ಪ್ರಯೋಜನವೂ ಅಗಿಲ್ಲ. ಆದರೆ, ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ನಾರಾಯಣಗೌಡರು ಗೆದ್ದ ಮೇಲೆ ಇಲ್ಲಿ ಅಭಿವೃದ್ಧಿಯ ಮಹಾಪೂರವೇ ಆಗಿದೆ. ಬಿಜೆಪಿ ರಾಜಕೀಯ ಲೆಕ್ಕಾಚಾರವನ್ನು ಮೀರಿ, ಎಲ್ಲೆಡೆಗಳಲ್ಲೂ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದೆ. ಈಗಾಗಲೇ ತಾಲ್ಲೂಕಿಗೆ ಮಂಜೂರಾಗಿರುವ ಏತನೀರಾವರಿ ಯೋಜನೆಯ ಕಾಮಗಾರಿ ಶೇಕಡ 80ರಷ್ಟು ಮುಗಿದಿದೆ. ಇದಕ್ಕೆ ನಾರಾಯಣಗೌಡರ ಪರಿಶ್ರಮವೇ ಕಾರಣವಾಗಿದೆ ಎಂದು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡರಾದ ಅಂಬರೀಶ್, ಸಂತೋಷ್‌ ಮುಂತಾದವರನ್ನು ಅಶ್ವತ್ಥನಾರಾಯಣ ಅವರು ಬಿಜೆಪಿಗೆ ಬರ ಮಾಡಿಕೊಂಡರು.

RELATED ARTICLES

Related Articles

TRENDING ARTICLES