Friday, May 17, 2024

ಯಡಿಯೂರಪ್ಪಗೆ ಅವಮಾನ ಆಗಿಲ್ವಾ? : ಶಾಸಕ ಯತ್ನಾಳ್ ಪ್ರಶ್ನೆ

ಬೆಂಗಳೂರು : ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಬಿಜೆಪಿ ಟಿಕೆಟ್ ಕೈತಪ್ಪಿರುವ ಕುರಿತು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದು, ಯಡಿಯೂರಪ್ಪಗೆ ಅವಮಾನ ಆಗಿಲ್ವಾ? ಎಂದು ಪ್ರಶ್ನೆ ಮಾಡಿದ್ದಾರೆ.

ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಇಂದು ಸಾಂಕೇತಿಕವಾಗಿ ನಾಮಪತ್ರವನ್ನು ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.

ಲಕ್ಷ್ಮಣ ಸವದಿ ತಾಳ್ಮೆಯಿಂದ ಇದ್ದಿದ್ದರೆ ಒಳ್ಳೆಯ ಭವಿಷ್ಯ ಕಾದಿತ್ತು. ಪಕ್ಷದಲ್ಲಿ ಸವದಿ ಬಗ್ಗೆ ಬಹಳ ಗೌರವವಿತ್ತು. ಲಕ್ಷ್ಮಣ ಸವದಿ ದುಡುಕಿದ್ದಾರೆ, ಉದ್ವೇಗಕ್ಕೆ ಒಳಗಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಅವಮಾನ ಆಗಿಲ್ವಾ? ಜಗದೀಶ ಶಟ್ಟರ್‌ಗೆ ಆಗಿಲ್ವಾ? ರಾಜ್ಯದ ಹಿತದೃಷ್ಟಿಯಿಂದ ಪಕ್ಷದ ಹಿರಿಯರು ತೀರ್ಮಾನ ತೆಗೆದುಕೊಂಡಿರ್ತಾರೆ ಎಂದು ಯತ್ನಾಳ್ ಅಭಿಪ್ರಾಯಪಟ್ಟಿದ್ದಾರೆ.

ಸವದಿಗೆ ಒಳ್ಳೆಯ ಭವಿಷ್ಯವಿತ್ತು

ಲಕ್ಷ್ಮಣ ಸವದಿ ಅವರನ್ನು ಬಿಜೆಪಿಯಲ್ಲಿ ಉಳಿಸಿಕೊಳ್ಳಲು ವರಿಷ್ಠರು ಪ್ರಯತ್ನ ಮಾಡಲಿಲ್ಲವೇ ಎಂಬ ಸುದ್ದಿಗಾರರ ಪ್ರಶ್ನೆಗೆ, ಪಕ್ಷ ಸವದಿಯವರನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದೆ. ಪಕ್ಷದಿಂದ ಅಮೀತ್ ಶಾ, ಬಿ.ಎಲ್ ಸಂತೋಷ್ ಎಲ್ಲರೂ ಪ್ರಯತ್ನ ಮಾಡಿದ್ದಾರೆ. ತಾಳ್ಮೆ ಬೇಕು. ಲಕ್ಷ್ಮಣ ಸವದಿ ಬಗ್ಗೆ ನಾನು ಎಲ್ಲಿಯೂ ಟೀಕೆ ಮಾಡಿಲ್ಲ, ಅವರು ನನಗೆ ಟೀಕೆ ಮಾಡಿಲ್ಲ. ಬಿಜೆಪಿಯಲ್ಲಿ ಮುಂದೆ ಸವದಿಗೆ ಒಳ್ಳೆಯ ಭವಿಷ್ಯವಿತ್ತು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ‘ಯಡಿಯೂರಪ್ಪನವರ ಆಶೀರ್ವಾದ’ದಿಂದ ಸಿಎಂ ಆದೆ : ಬಸವರಾಜ ಬೊಮ್ಮಾಯಿ

ಈಶ್ವರಪ್ಪ ಪಕ್ಷಕ್ಕೆ ದ್ರೋಹ ಮಾಡಿಲ್ಲ

ಈಶ್ವರಪ್ಪ ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿರುವ ಅವರು, ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಗೌರವಯುತವಾಗಿ ನಡೆದುಕೊಂಡರು. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಪಕ್ಷಕ್ಕೆ ದ್ರೋಹ ಮಾಡಲ್ಲ ಎನ್ನುವ ಸಂದೇಶವನ್ನು ಈಶ್ವರಪ್ಪ ನೀಡಿದ್ದಾರೆ. ಎಲ್ಲ ಕಾರ್ಯಕರ್ತರಲ್ಲಿ ಈ ಭಾವನೆ ಬರಬೇಕು ಎಂದು ಯತ್ನಾಳ್ ಹೇಳಿದ್ದಾರೆ.

ನಾನು ಕೊನೆಯ ಅಧಿವೇಶನದಲ್ಲಿ ಇದನ್ನೇ ಹೇಳಿದ್ದೆ. 75 ವರ್ಷದ ನಂತರ ಪಕ್ಷದ ಕೆಲಸ ಮಾಡುವುದು ಬಿಜೆಪಿ ಕಡ್ಡಾಯ ಮಾಡಿದೆ. ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಯಿಂದ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಯಾವುದೇ ಹಿನ್ನಡೆ ಆಗಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಎಂ.ಎಸ್.ಕರಡಿ, ಗುರುಪಾದಯ್ಯ ಗಚ್ಚಿನಮಠ, ವಕೀಲರಾದ ಸತೀಶಚಂದ್ರ ಕುಲಕರ್ಣಿ,ಎನ್.ಎಂ.ಪ್ಯಾಟಿ ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES