Monday, May 13, 2024

ಭಾಗ್ಯಗಳ ಸರ್ದಾರ ಸಿದ್ದುಗೆ ಕ್ಷೇತ್ರ ಭಾಗ್ಯವೇ ಇಲ್ಲ : ಪ್ರತಾಪ್ ಸಿಂಹ ವ್ಯಂಗ್ಯ

ಬೆಂಗಳೂರು : ಮುಂಬರುವ ವಿಧಾನಸಭಾ ಚುನಾವಣೆಗೆ ಕ್ಷೇತ್ರ ಹುಡುಕಾಟ ಮಾಡುತ್ತಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಂಕಟದ ಬಗ್ಗೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ವಿವಿಧ ಭಾಗ್ಯಗಳನ್ನು ಕೊಟ್ಟಿದ್ದೇನೆ ಎಂದು ಹೇಳಿಕೊಳ್ಳುವ ಭಾಗ್ಯಗಳ ಸರ್ದಾರ ಸಿದ್ದರಾಮಯ್ಯಗೆ ಕ್ಷೇತ್ರ ಭಾಗ್ಯವೇ ಇಲ್ಲ. ಕ್ಷೇತ್ರ ಹುಡುಕುವ ಪರಿಸ್ಥಿತಿ ಉಂಟಾಗಿದೆ ಎಂದು ಲೇವಡಿ ಮಾಡಿದ್ದಾರೆ.

ಎಚ್.ಡಿ ರೇವಣ್ಣರಿಗೆ ಪತ್ನಿ ಭವಾನಿಯವರ ಚಿಂತೆ,  ಮಾಜಿ ಸಿಎಂ ಎಚ್.ಡಿ ಕುಮಾರಣ್ಣ ಅವರಿಗೆ ಮಗ ನಿಖಿಲ್‌ ಚಿಂತೆಯಾದರೆ, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕ್ಷೇತ್ರದ ಚಿಂತೆಯಾಗಿದೆ. ಇವರಿಗೆಲ್ಲ ಅವರವರ ಕುಟುಂಬಗಳ ಚಿಂತೆ ಇದೆ. ಹೀಗಾಗಿ, ರಾಜ್ಯದ ಜನತೆ ಇವರ ಮಾತಿಗೆ ಮರುಳಾಗಿ, ಮಂಗಗಳಾಗಬೇಡಿ ಎಂದು ಪ್ರತಾಪ್ ಸಿಂಹ ಸಲಹೆ ನೀಡಿದ್ದಾರೆ.

ಮೈಸೂರಿನ ವರುಣಾಕ್ಕೆ ಬರ್ತಾರೆ

ರಾಜ್ಯಕ್ಕೆ ಅನ್ನಭಾಗ್ಯ, ಶಾದಿಭಾಗ್ಯ, ಕ್ಷೀರಭಾಗ್ಯ ಕೊಟ್ಟೆ ಎನ್ನುವ ಸಿದ್ದರಾಮಯ್ಯನವರಿಗೆ ಕ್ಷೇತ್ರಭಾಗ್ಯವೇ ಇಲ್ಲ. ಇದನ್ನು ನೋಡಿದ್ರೆ ಬಹಳ ಆಶ್ಚರ್ಯವಾಗುತ್ತೆ. ಅಷ್ಟೇ ಸೋಜಿಗವೂ ಆಗುತ್ತೆ. ಸಿದ್ದರಾಮಯ್ಯ ಅವರಿಗೆ ಯುಗಾದಿ ದಿನ ಕಾಂಗ್ರೆಸ್ ಟಿಕೆಟ್ ಘೋಷಣೆ ಆಗಬೇಕಾಗಿತ್ತು. ಆದರೆ, ಈವರೆಗೆ ಟಿಕೆಟ್ ಘೋಷಣೆ ಆಗಿಲ್ಲ ಎಂದು ಕುಟುಕಿದ್ದಾರೆ.

ನಾನು ಈಗಲೂ ಹೇಳುತ್ತೇನೆ ಅವರು ಕೊನೆಯದಾಗಿ ಮೈಸೂರಿನ ವರುಣಾಕ್ಕೆ ಬರುತ್ತಾರೆ. ಹೀಗಾಗಿ ರಾಜ್ಯದ ಜನರು ಇವರ ಮಾತಿಗೆ ಮರುಳಾಗಬೇಡಿ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES