ಬೆಂಗಳೂರು: ಬಿಜೆಪಿಯವರು 500 ರೂಪಾಯಿ ಕೊಟ್ಟು ರ್ಯಾಲಿಗೆ ಜನ ಕರೆದುಕೊಂಡು ಬರುತ್ತಾರೆ ಎಂದು ನಾನು ಹೇಳಿದ್ದನ್ನು ಬಿಜೆಪಿಯವರು ತಿರುಚಿ, ಅವರು ಮಾಡಿರುವ ಪಾಪಕೃತ್ಯವನ್ನು ನನ್ನ ತಲೆಗೆ ಕಟ್ಟುವ ಪ್ರಯತ್ನ ಮಾಡಿದ್ದಾರೆ. ಸುಳ್ಳು, ಮೋಸ ಮತ್ತು ದ್ರೋಹ ಬಿಜೆಪಿಯ ಡಿಎನ್ಎಯಲ್ಲಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಮ್ಮ ವೈರಲ್ ವಿಡಿಯೋ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ಇಂದು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ನನ್ನ ಹೇಳಿಕೆಯ ವಿಡಿಯೋಗಳನ್ನು ತಿರುಚಿ ಈ ರೀತಿ ಅಪಪ್ರಚಾರ ಮಾಡುತ್ತಿರುವುದು ಇದು ಮೊದಲ ಬಾರಿ ಅಲ್ಲ, ಹಿಂದೆ ಕೆಲವು ಬಾರಿ ನಡೆದಿದೆ, ಚುನಾವಣೆ ಹತ್ತಿರವಾಗುತ್ತಿದ್ದಂತೆ ಇನ್ನು ಹಲವು ಬಾರಿ ನಡೆಯಬಹುದು. ಇಂತಹ ಸುಳ್ಳುಗಳನ್ನು ಸೃಷ್ಟಿಸಲು ಬಿಜೆಪಿಯವರು ದೊಡ್ಡ ದೊಡ್ಡ ಫ್ಯಾಕ್ಟರಿಗಳನ್ನೇ ತೆಗೆದಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಂತಹ ನಕಲಿ ವಿಡಿಯೋಗಳಿಗೆ ಬಲಿಬೀಳದೆ ಜನರು ಎಚ್ಚರಿಕೆಯಿಂದ ಇರಬೇಕು ಮತ್ತು ನಕಲಿ ವಿಡಿಯೋಗಳನ್ನು ರಚಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಪುಂಡರನ್ನು ನಮ್ಮ ಪಕ್ಷದ ಬೆಂಬಲಿಗರು ಮತ್ತು ಕಾರ್ಯಕರ್ತರು ಹುಡುಕಿ ಪೊಲೀಸರಿಗೆ ದೂರು ನೀಡಬೇಕು. ಈ ರೀತಿಯ ನಕಲಿ ವಿಡಿಯೋ-ಅಡಿಯೋ ಮೂಲಕ ಅಪಪ್ರಚಾರ ಮಾಡಿ ನನ್ನ ತೇಜೋವಧೆ ಮಾಡಬಹುದು ಎಂದು ಭಾವಿಸಿದ್ದರೆ ಅದು ಭ್ರಮೆ. ನಲ್ವತ್ತು ವರ್ಷಗಳ ನನ್ನ ರಾಜಕಾರಣವನ್ನು ರಾಜ್ಯದ ಜನ ನೋಡಿದ್ದಾರೆ. ಸರಿ-ತಪ್ಪು, ಸತ್ಯ-ಸುಳ್ಳುಗಳನ್ನು ಅರ್ಥಮಾಡಿಕೊಳ್ಳುವಷ್ಟು ಅವರು ಪ್ರಜ್ಞಾವಂತರಿದ್ದಾರೆ ಎಂದಿದ್ದಾರೆ.
ಅಷ್ಟೇ ಅಲ್ಲದೇ, ಹಣ, ಹೆಂಡ ಹಂಚಿ ಕಾರ್ಯಕ್ರಮಕ್ಕೆ ಜನ ಕರೆತಂದ ಕೂಡಲೆ ಅವೆಲ್ಲ ಮತಗಳಾಗುವುದಿಲ್ಲ, ಚುನಾವಣೆ ಗೆಲ್ಲಲೂ ಆಗಲ್ಲ. ಪ್ರೀತಿ-ವಿಶ್ವಾಸದಿಂದ ಬರುವ 10 ಜನ ಸೇರಿದರೂ ಆ ಹತ್ತೇ ಜನಕ್ಕೆ ಭಾಷಣ ಮಾಡುವವನು ನಾನು. ಇದು ನಾನು ರಾಜಕೀಯದಲ್ಲಿ ರೂಢಿಸಿಕೊಂಡು ಬಂದಿರುವ ಅಭ್ಯಾಸ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸರಣಿ ಟ್ವಿಟ್ ಮಾಡುವ ಮೂಲಕ ಬಿಜೆಪಿಯನ್ನು ಟೀಕಿಸಿದ್ದಾರೆ.
‘ಬಿಜೆಪಿಯವರು 500 ರೂಪಾಯಿ ಕೊಟ್ಟು ರ್ಯಾಲಿಗೆ ಜನ ಕರೆದುಕೊಂಡು ಬರುತ್ತಾರೆ’’ ಎಂದು ನಾನು ಹೇಳಿದ್ದನ್ನು @BJP4Karnataka ಯವರು ತಿರುಚಿ, ಅವರು ಮಾಡಿರುವ ಪಾಪಕೃತ್ಯವನ್ನು ನನ್ನ ತಲೆಗೆ ಕಟ್ಟುವ ಪ್ರಯತ್ನ ಮಾಡಿದ್ದಾರೆ.
ಸುಳ್ಳು, ಮೋಸ ಮತ್ತು ದ್ರೋಹ ಬಿಜೆಪಿಯ ಡಿಎನ್ಎಯಲ್ಲಿದೆ. 1/5
— Siddaramaiah (@siddaramaiah) March 3, 2023