Friday, May 17, 2024

ಸಿಎಂ ಆಗೋದು ಹಣೆಯಲ್ಲಿ ಬರೆದಿರಬೇಕು : ಡಿಕೆಶಿಗೆ ಟಾಂಗ್ ಕೊಟ್ಟ ಆರ್. ಅಶೋಕ್

ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹಂಗಾಮ ಜೋರಾಗಿದೆ. ಇತ್ತ, ಮುಂದಿನ ಮುಖ್ಯಮಂತ್ರಿ ಪಟ್ಟದ ಬಗ್ಗೆಯೂ ಟಾಕ್ ಶುರುವಾಗಿದೆ. ಈ ಬಗ್ಗೆ ಕಂದಾಯ ಸಚಿವ ಆರ್.ಅಶೋಕ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವ ಆರ್. ಅಶೋಕ್ ಅವರು, ಮುಖ್ಯಮಂತ್ರಿ ಆಗುವುದು ಹಣೆಯಲ್ಲಿ ಬರೆದಿರಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆ ಮೂಲಕ ತಮ್ಮದೇ ಸಮುದಾಯದ ನಾಯಕರಾದ ಡಿ.ಕೆ ಶಿವಕುಮಾರ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರ ನೇಮಕದ ಬಗ್ಗೆಯೂ ಸಚಿವ ಆರ್. ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ. ಉಸ್ತುವಾರಿ ಸಚಿವರ ನೇಮಕದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇನ್ನೂ ಹತ್ತು ವರ್ಷಗಳಾದ್ರೂ ಬಿಜೆಪಿ ತೆಗೆಯೋಕೆ ಆಗಲ್ಲ – ಮಾಜಿ ಸಿಎಂ

ಡಿಕೆಶಿಗೆ ಟಾಂಗ್ ಕೊಟ್ಟ ಅಶೋಕ್

ಇನ್ನೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಬಗ್ಗೆಯೂ ಆರ್. ಅಶೋಕ್ ಮಾತನಾಡಿದ್ದಾರೆ. ನಾನು ಹುಟ್ಟಿದ್ದು ಒಕ್ಕಲಿಗ ಸಮುದಾಯದಲ್ಲಿ. ಆದರೆ, ನಾನು ಎಲ್ಲಾ ಜಾತಿಗಳನ್ನು, ಸಮುದಾಯಗಳನ್ನು ಇಷ್ಟಪಡುವಂತವನು. ನನ್ನನ್ನು ಒಕ್ಕಲಿಗ ಸಮುದಾಯಕ್ಕೆ ಮಾತ್ರ ಯಾಕೆ ಸೀಮಿತ ಮಾಡುತ್ತೀರಿ. ನಾನು ಏನು ಡಿ.ಕೆ ಶಿವಕುಮಾರ್ ಅವರ ರೀತಿ ಹೇಳಲ್ಲ ಎಂದು ಪರೋಕ್ಷವಾಗಿ ಡಿಕೆಶಿಗೆ ಟಾಂಗ್ ಕೊಟ್ಟಿದ್ದಾರೆ.

ಐದು ವರ್ಷಕ್ಕೊಮ್ಮೆ ವೇತನ ಹೆಚ್ಚಳ
ರಾಜ್ಯ ಸರ್ಕಾರಿ ನೌಕರರ ವೇತನ ಹೆಚ್ಚಳದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿ ಐದು ವರ್ಷಕ್ಕೊಮ್ಮೆ ನೌಕರರ ವೇತನ ಹೆಚ್ಚಳ ಮಾಡಬೇಕು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಸಹ ಚುನಾವಣಾ ಸಮಯದಲ್ಲೇ ನೌಕರರ ವೇತನ ಹೆಚ್ಚಳ ಮಾಡಿತ್ತು ಎಂದು ಹೇಳಿದ್ದಾರೆ.

ಪ್ರತಿಭಟನೆ ಮೊದಲೇ ಆದೇಶ
ನೌಕರರ ವೇತನ ಹೆಚ್ಚಳ ಸಂಬಂಧ ನಿನ್ನೆ ಮುಖ್ಯಮಂತ್ರುಇ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಾಗಿತ್ತು. ಅದರಂತೆ ಈಗ ನೌಕರರ ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ. ಕಾಂಗ್ರೆಸ್​ ಪಕ್ಷ ಪ್ರತಿಭಟನೆ ಮಾಡಿದ ಬಳಿಕ ವೇತನ ಹೆಚ್ಚಳ ಮಾಡಿತ್ತು . ನಮ್ಮ ಸರ್ಕಾರ ಪ್ರತಿಭಟನೆಗೆ ಮೊದಲೇ ಆದೇಶ ಹೊರಡಿಸಿದೆ. ನಿನ್ನೆ ರಾತ್ರಿಯೇ ಸಭೆ ನಡೆಸಿರುವುದರಿಂದ ರಾಜ್ಯಪಾಲರ ಆದೇಶದ ಮೇಲೆ ಇದೀಗ ಆದೇಶ ಆಗಿದೆ ಎಂದು ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES