Monday, May 20, 2024

ದೇಹ ಕತ್ತರಿಸುವಾಗ ಡ್ರಗ್ಸ್ ಸೇವಿಸಿ ನಶೆಯಲ್ಲಿದ್ದ ಅಫ್ತಾಬ್?

ನವದೆಹಲಿ : ವೃತ್ತಿಪರ ಕ್ರಿಮಿನಲ್​ಗಳು, ಅದರಲ್ಲೂ ಕೊಲೆಗಡುಕರು ಇರ್ತಾರಲ್ಲ ಅವರು ತಮಗೆ ಕೊಟ್ಟಿರುವ ಟಾರ್ಗೆಟ್ ಪೂರೈಸುವ ಮೊದಲು ಕಂಠಪೂರ್ತಿ ಮದ್ಯ ಸೇವನೆ ಮಾಡ್ತಾರಂತೆ. ಮರ್ಡರ್ ಮಾಡಿದ ಬಳಿಕವೂ ಕೂಡ ಆ ಪಾಪವನ್ನು ಮರೆಯೋದಕ್ಕೆ ಮತ್ತೆ ಮದ್ಯ ಸೇವಿಸಿ ಮಲಗಿ ಬಿಡ್ತಾರಂತೆ. ಈಗ ಶ್ರದ್ದಾ ವಾಲ್ಕರ್ ಹತ್ಯೆ ಮಾಡುವ ಸಂದರ್ಭದಲ್ಲಿ, ಅದಾದ ಬಳಿಕ ಆಕೆಯ ದೇಹವನ್ನು 32 ತುಂಡು ಮಾಡುವ ಸಂದರ್ಭದಲ್ಲಿ ಹಂತಕ ಅಫ್ತಾಬ್ ಪೂನಾವಾಲ ಕೂಡ ಹೀಗೆಯೇ ವರ್ತಿಸಿದ್ದನಾ..? ಪೊಲೀಸ್ ಮೂಲಗಳ ಪ್ರಕಾರ ಹೌದು. ಅಫ್ತಾಬ್ ಪೂನಾವಾಲ ಡ್ರಗ್ ಅಡಿಕ್ಟ್. ನಶೆಯಲ್ಲಿರುವ ವ್ಯಕ್ತಿಗಳು ಏನು ಬೇಕಾದರೂ ಮಾಡುತ್ತಾರಂತೆ. ಹಾಗೆ ಅಫ್ತಾಬ್ ಕೂಡ.

ಶ್ರದ್ಧಾ ವಾಲ್ಕರ್​ಳನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿ, ಬಳಿಕ ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್​ನಲ್ಲಿ ತುಂಬಿಡಲು ಅಫ್ತಾಬ್ ಬರೋಬ್ಬರಿ ಹತ್ತು ಗಂಟೆ ತೆಗೆದುಕೊಂಡಿದ್ದಾನೆ. ಮುಂಬೈ ಮತ್ತು ದೆಹಲಿ ಹೊಟೇಲ್​ನಲ್ಲಿ ಮಾಂಸ ಸಿದ್ದಪಡಿಸುವ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವನ್ನು ಅಫ್ತಾಬ್ ಇಲ್ಲಿ ಬಳಕೆ ಮಾಡಿಕೊಂಡಿದ್ದಾನೆ. ಹೊಟ್ಟೆಯ ಭಾಗದಲ್ಲಿದ್ದ ಕರುಳು, ಲಿವರ್ ಮೊದಲಾದ ಭಾಗಗಳನ್ನ ಪ್ರತ್ಯೇಕವಾಗಿ ತೆಗೆದು ಕವರ್​ಗಳಲ್ಲಿ ತುಂಬಿಸಿಟ್ಟಿದ್ದಾನೆ. ನಂತರ ಇಡೀ ದೇಹವನ್ನು ತುಂಡು ತುಂಡು ಮಾಡಿ ವಾಟರ್ ವಾಶ್ ಮಾಡಿದ್ದಾನೆ. ಪೊಲೀಸರು ಹೇಳೋ ಪ್ರಕಾರ, ಇದಕ್ಕಾಗಿ ಅವನು ನಿರಂತರವಾಗಿ ಬಾತ್ ರೂಮ್ ನೀರು ಬಿಟ್ಟಿದ್ದ. ಒಂದೇ ದಿನದಲ್ಲಿ ಅಫ್ತಾಬ್ 2 ಸಾವಿರ ಲೀಟರ್ ನೀರು ಖರ್ಚು ಮಾಡಿದ್ದಾನೆ. ಆ ತಿಂಗಳಲ್ಲಿ, ನೀರಿನ ಗರಿಷ್ಠ ಮಿತಿ ಮೀರಿದ್ದಕ್ಕೆ ದೆಹಲಿ ಜಲಮಂಡಳಿ ಅಫ್ತಾಬ್ ಫ್ಲಾಟ್​ಗೆ 300 ರೂಪಾಯಿ ಹೆಚ್ಚುವರಿ ಶುಲ್ಕ ವಿಧಿಸಿ ಬಿಲ್ ನೀಡಿತ್ತು.

ವಾಟರ್ ವಾಶ್ ಮಾಡಿ, ಫ್ರಿಡ್ಜ್​ನಲ್ಲಿ ತುಂಬಿಸಿಟ್ಟಿದ್ದರೂ ವಾಸನೆ ಬರದೇ ಇರುತ್ತದೆಯೇ? ಹೇಳಿ ಕೇಳಿ ಮನುಷ್ಯ ದೇಹದ ಮಾಂಸ. ಜಸ್ಟ್​ 24 ಗಂಟೆ ಕಳೆಯುತ್ತಿದ್ದಂತೆ ಮಾಂಸ ಕೊಳೆಯಲು ಆರಂಭಿಸುತ್ತದೆ. ಹಾಗಾಗಿ ಅಫ್ತಾಬ್ ಫ್ಲಾಟ್​ನಲ್ಲೂ ಸಹಿಸಲು ಅಸಾಧ್ಯವಾದ ದುರ್ನಾತ ತುಂಬಿತ್ತು. ಹೊರಗಿನ ಜನರಿಗೆ ದುರ್ನಾತ ಗೊತ್ತಾಗಬಾರದು ಅಂತಾ ಮನೆಯ ತುಂಬಾ ಅಗರಬತ್ತಿಗಳನ್ನು ಹಚ್ಚಿಟ್ಟು, ಸ್ಟ್ರಾಂಗ್ ರೂಮ್ ಫ್ರೆಶ್ನರ್ ಹಾಗೂ ಪರ್ಫ್ಯೂಮ್​ ಸ್ಪ್ರೇ ಮಾಡುತ್ತಿದ್ದನಂತೆ. ಶ್ರದ್ಧಾ ದೇಹವನ್ನು ಕತ್ತರಿಸಲು ಬಳಿಕ 18 ದಿನಗಳ ಕಾಲ ಆ ದುರ್ವಾಸನೆ ಸಹಿಸೋದಕ್ಕೆ ಅಫ್ತಾಬ್ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದನಂತೆ. ತೀವ್ರ ಪ್ರಮಾಣದ ಡ್ರಗ್ಸ್ ತೆಗೆದುಕೊಂಡು ನಶೆಯಲಿದ್ದ ಕಾರಣದಿಂದಲೇ ಅಫ್ತಾಬ್ ಅಷ್ಟು ಕ್ರೂರವಾಗಿ ವರ್ತಿಸಲು ಸಾಧ್ಯವಾಯ್ತು ಎನ್ನಲಾಗುತ್ತಿದೆ. ಶ್ರದ್ದಾ ಧರಿಸಿದ್ದ ಬಟ್ಟೆಗಳು ಹಾಗೂ ಅಫ್ತಾಬ್ ಧರಿಸಿದ್ದ ಬಟ್ಟೆಗಳೂ ಸಹ ರಕ್ತಸಿಕ್ತವಾಗಿದ್ದವು. ಅವನ್ನು ಮಹಾನಗರ ಪಾಲಿಕೆಯ ಕಸದ ಲಾರಿಗೆ ಹಾಕಿದ್ದಾಗಿ ಅಫ್ತಾಬ್ ಹೇಳಿಕೆ ನೀಡಿದ್ದಾನೆ.

ಶ್ರದ್ಧಾಳನ್ನು ಮುಗಿಸೋದಕ್ಕೆ ಮೊದಲು ಹಿಂದೆಯೂ ಒಂದೆರಡು ಬಾರಿ ಅಫ್ತಾಬ್, ಶ್ರದ್ದಾ ಹತ್ಯೆಗೆ ಪ್ರಯತ್ನ ಮಾಡಿದ್ದಾನೆ. ಜಸ್ಟ್ ಹತ್ತು ದಿನ ಮೊದಲು ಹೀಗೇ ಇಬ್ಬರ ನಡುವೆ ಜೋರು ಗಲಾಟೆಯಾಗಿದೆ. ಅಫ್ತಾಬ್ ಶ್ರದ್ಧಾಳ ಕುತ್ತಿಗೆ ಹಿಸುಕಿ ಕೊಲ್ಲಲು ಮುಂದಾಗಿದ್ದಾನೆ. ಆದರೆ, ಶ್ರದ್ದಾ ತಪ್ಪಾಯ್ತೆಂದು ಪರಿಪರಿಯಾಗಿ ಬೇಡಿಕೊಂಡಿದ್ದಾಳೆ. ಆ ಸಮಯದಲ್ಲಿ ಅವನ ನಶೆ ಕೂಡ ಸ್ವಲ್ಪ ಕಡಿಮೆಯಾಗಿದೆ. ಹಾಗಾಗಿ ಶ್ರದ್ಧಾಳನ್ನು ಕೊಲ್ಲದೆ ಹಾಗೆ ಬಿಟ್ಟು ಹೊರಗೆ ಹೋಗಿದ್ದಾನೆ. ಆಗಲೇ ಎಚ್ಚೆತ್ತುಕೊಂಡು ಶ್ರದ್ದಾ, ಆಫ್ತಾಬ್ ಸಹವಾಸ ಬಿಟ್ಟು ಹೋಗಿದ್ದಿದ್ದರೆ ಬದುಕಿ ಉಳಿಯುತ್ತಿದ್ದಳೋ ಏನೋ. ಆದರೆ, ಏನು ಮಾಡೋದು, ಪ್ರೀತಿ ಕುರುಡು. ಅಫ್ತಾಬ್​ನಲ್ಲಿ ಆದ್ಯಾವ ಆಕರ್ಷಣೆ ಇತ್ತೋ, ಯಾವ ಸಮ್ಮೋಹನಾಸ್ತ್ರಕ್ಕೆ ಬಲಿಯಾಗಿದ್ದಳೋ ಏನೋ, ಕೊನೆಗೂ ಸೈಕೋಪಾತ್​ಗೆ ಬಲಿಯಾಗಿ ಹೋಗಿದ್ದಾಳೆ.

RELATED ARTICLES

Related Articles

TRENDING ARTICLES