Monday, May 20, 2024

ರಥದ ಚಕ್ರ ಮುರಿದು ತೇರು ಪಲ್ಟಿ, ತಪ್ಪಿದ ಭಾರೀ ಅನಾಹುತ

ಚಾಮರಾಜನಗರ; ಚೋಳರ ಕಾಲದ ಪುರಾತನ ದೇವಸ್ಥಾನವಾದ ಚಾಮರಾಜನಗರ ಜಿಲ್ಲೆ ವೀರಭದ್ರಸ್ವಾಮಿ ದೇವಸ್ಥಾನದ ತೇರು ಏಕಾಏಕಿ ಮುರಿದು ಬಿದ್ದು, ಸಣ್ಣಪುಟ್ಟ ಗಾಯಗಳಷ್ಟಕ್ಕೆ ಸೀಮಿತವಾಗಿ ಯಾರಿಗೂ ಪ್ರಾಣಪಾಯವಾಗದೇ ಆಶ್ಚರ್ಯಕರ ರೀತಿಯಲ್ಲಿ ಭಾರೀ ಅನಾಹುತ ತಪ್ಪಿದಂತ್ತಾಗಿದೆ.

ಚಾಮರಾಜನಗರ ತಾಲ್ಲೂಕಿನ ಚನ್ನಪ್ಪನಪುರ ಗ್ರಾಮದ ಬೆಟ್ಟದಲ್ಲಿರುವ ಪುರಾಣ ಪ್ರಸಿದ್ದ ಚೋಳ ಕಾಲದ ಹದಿನೈದು ಅಡಿ ಎತ್ತರದ ಮೂರ್ತಿಯನ್ನ ಹೊಂದಿರುವ ವೀರಭದ್ರಸ್ವಾಮಿ ದೇವಸ್ಥಾನದ ರಥೋತ್ಸವ ಕಳೆದ ನಾಲ್ಕೈದು ವರ್ಷಗಳಿಂದ ನಿಂತ್ತಿದ್ದು, ಇಂದು ರಥೋತ್ಸವ ನಡೆಯುವ ವೇಳೆ ಚಕ್ರ ಮುರಿದು ಏಕಾಏಕಿ ತೇರು ನೆಲಕುರುಳುವ ಮೂಲಕ ರಥೋತ್ಸವ ಇಂದು ಅರ್ಥದಲ್ಲೇ ನಿಂತ್ತಾತ್ತಾಗಿದೆ.

ಈ ದೇವಸ್ಥಾನದಲ್ಲಿ ಹತ್ತು ಕೈಗಳನ್ನು ಹೊಂದಿರುವ ವೀರಭದ್ರಸ್ವಾಮಿ ಮೂರ್ತಿಯು ಇದ್ದು, ಈ ಭಾಗದಲ್ಲಿ ಇದೇ ದೊಡ್ಡ ಮೂರ್ತಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಕರೋನಾ ಸೇರಿದಂತೆ ಹಲವು ಕಾರಣಗಳಿಂದ ಕಳೆದ ನಾಲ್ಕೈದು ವರ್ಷಗಳಿಂದ ನಿಂತ್ತಿದ್ದ ರಥೋತ್ಸವ ಈ ಬಾರಿ ಮಾಡಲು ಭಕ್ತಾಧಿಗಳು ಮುಂದಾಗಿ ಸಕಲ ಸಿದ್ದತೆಗಳೊಂದಿಗೆ ರಥೋತ್ಸವ ‌ನಡೆಸಿದ್ದರು. ಸುತ್ತ ಹತ್ತಾರು ಗ್ರಾಮಗಳಷ್ಟೇ ಅಲ್ಲದೇ ಪಕ್ಕದ ತಮಿಳುನಾಡಿನಿಂದಲ್ಲೂ ಈ ದೇವಸ್ಥಾನಕ್ಕೆ ಭಕ್ತರಿದ್ದು, ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ರಥ ಎಳೆಯುವಾಗ ವೇಳೆ ರಥದ ಬಲ ಭಾಗದ ಚಕ್ರ‌ಮುರಿದ ಪರಿಣಾಮ ತೇರು ಏಕಾಏಕಿ ದೇವಸ್ಥಾನದ ಹೊರಗೋಡೆಗೆ ತಗುಲಿ ನಂತರ ನಿಧಾನವಾಗಿ ನೆಲಕ್ಕೆ ಉರುಳಿತು. ಇನ್ನೂ ರಥ ಎಳೆಯಲು ಹಾಗೂ ನೋಡಲು ಬಂದಿದ್ದ ಸಾಕಷ್ಟು ಜನ ತೇರು ನಿಧಾನವಾಗಿ ನೆಲಕುರುಳುವಷ್ಟರಲ್ಲಿ ತಪ್ಪಿಸಿಕೊಂಡು ಸಣ್ಣಪುಟ್ಟ ಗಾಯಗಳಿಗಳಷ್ಟೇ ಸೀಮಿತವಾಗಿ ಪ್ರಾಣಪಾಯದಿಂದ ಪಾರಾಗಿದ್ದಾರೆ. ರಥದ ಚಕ್ರ ಹಾಗೂ ರಥ ಕಟ್ಟುವಾಗ ಸರಿಯಾದ ಕ್ರಮವಹಿಸಿದರೇ ಈ ರೀತಿ ಅನಾಹುತವಾಗುತ್ತಿರಲ್ಲಿಲ್ಲ ಎಂಬುದು ಭಕ್ತರ ವಾದವಾಗಿದೆ.

ಇನ್ನು ಈ ಪುರಾತನ ದೇವಾಲಯದ ಬಗ್ಗೆ ಕಳೆದ ತಿಂಗಳಲ್ಲಿ ನಮ್ಮ ಪವರ್ ಟಿವಿಯಲ್ಲಿ ದೇವಸ್ಥಾನ ಶಿಥಿಲ ವ್ಯವಸ್ಥೆಯ ಬಗ್ಗೆ ವರದಿ ಮಾಡಲಾಗಿತ್ತು. ದೇವಸ್ಥಾನದ ರಸ್ತೆ ಹಾಗೂ ಸುತ್ತ ಮುತ್ತ ಗಿಡಗಳು ಬೆಳೆದುಕೊಂಡು ದೇವಸ್ಥಾನದ ಬಳಿಗೆ ತೆರಳು ಸಹ ಭಯ ಪಡುವ ಸ್ಥಿತಿ ನಿರ್ಮಾಣವಾಗಿದ್ದ ಬಗ್ಗೆ ಹಾಗೂ ಅಲ್ಲಿಗೆ ತೆರಳು ರಸ್ತೆಯೂ ಹದಗೆಟ್ಟಿರುವ ಬಗ್ಗೆ ಸುದ್ದಿ ಮಾಡಲಾಗಿತ್ತು.

ಇದನ್ನು ಅರಿತ ಅಧಿಕಾರಿಗಳು ಹಾಗೂ ಭಕ್ತಾದಿಗಳು ಸೇರಿ ದೇವಸ್ಥಾನದ ಅವರಣ ಹಾಗೂ ರಸ್ತೆ ಸೇರಿದಂತೆ ದೇವಸ್ಥಾನಕ್ಕೆ ಸುಣ್ಣಬಣ್ಣ ಬಳಿದು ನಾಲ್ಕೈದು ವರ್ಷಗಳಿಂದ ನಿಂತ್ತಿದ್ದ ರಥೋತ್ಸವ ನಡೆಸಲು ಮುಂದಾಗಿದ್ದರು.ಆದರೆ ದುರದೃಷ್ಟವಶಾತ್ ತೇರೆ ಮುರಿದು ಬೀಳುವ ಮೂಲಕ ಅರ್ಧಕ್ಕೆ ರಥ ನಿಂತು ಉತ್ಸವ ಮೂರ್ತಿಗೆ ಪೂಜೆ‌ ಸಲ್ಲಿಸುವ ಮೂಲಕ ಗರ್ಭಗುಡಿ ತಲುಪಿಸಲಾಯಿತು.

ಮುಜರಾಯಿ ಇಲಾಖೆಯವರು ಮೊದಲೇ ರಥದ ಬಗ್ಗೆ ಸರಿಯಾದ ಕ್ರಮವಹಿಸಿದ್ದರೆ, ಈ ರೀತಿಯ ಘಟನೆಯನ್ನು ತಪ್ಪಿಸಬಹುದಿತ್ತು ಎಂಬುದು ಭಕ್ತರ ವಾದವಾಗಿದೆ.

ಶ್ರೀನಿವಾಸ್ ನಾಯಕ ಪವರ್ ಟಿವಿ ಚಾಮರಾಜನಗರ

RELATED ARTICLES

Related Articles

TRENDING ARTICLES