Tuesday, May 14, 2024

ಮಾರ್ಕ್ಸ್ ಕಮ್ಮಿಯಾಯ್ತೆಂದು ಮನೆ ಬಿಟ್ಟು ಹೋದ ಹುಡುಗಿ

ಮಂಗಳೂರು : ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಿವಾಸಿಯಾಗಿರುವ ಈಕೆ ಭಾರ್ಗವಿ, ಎಂಟನೇ ಕ್ಲಾಸ್ ಓದ್ತಾ ಇದ್ದಳು. ಮೊನ್ನೆ ಅ.17ರಂದು ಸಂಜೆ ಟ್ಯೂಶನ್‌ಗೆಂದು ಹೋಗಿದ್ದವಳು ಮನೆಗೆ ಮರಳಿಲ್ಲ. ಸ್ಕೂಲಲ್ಲಿ ಮಾರ್ಕ್ಸು ಕಡಿಮೆ ಬಂದಿದೆಯೆಂದು ಹುಡುಗಿ ಮನೆಯನ್ನೇ ಬಿಟ್ಟು ಹೋಗಿದ್ದಾಳೆ. ಇತ್ತ ಹೆತ್ತವರು ಗಾಬರಿಗೊಂಡಿದ್ದು, ಮಗಳನ್ನು ಹುಡುಕಿ ಕೊಡುವಂತೆ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ.

ಈ ನಡುವೆ, ಮಂಗಳವಾರ ಬೆಳಗ್ಗೆ ಭಾರ್ಗವಿ ಮಂಗಳೂರಿನ ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಪ್ರತ್ಯಕ್ಷ ಆಗಿದ್ದಳು. ನಸುಕಿನ 3 ಗಂಟೆಗೆ ಬೆಂಗಳೂರು ಬಸ್ಸಿನಲ್ಲಿ ಬಂದಿದ್ದ ಹುಡುಗಿ ಅಲ್ಲಿಂದ ಮುಕ್ಕ ಬೀಚ್‌ನತ್ತ ಆಟೋದಲ್ಲಿ ತೆರಳಿದ್ದಾಳೆ. ಈಕೆ ಬಸ್ ನಿಲ್ದಾಣಕ್ಕೆ ಬಂದಿರುವುದು ಮತ್ತು ಆಟೋದಲ್ಲಿ ತೆರಳಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಆನಂತರ, ಬೀಚ್‌ನಿಂದ ಮರಳಿ ಬಸ್ ನಿಲ್ದಾಣಕ್ಕೆ ಬಂದಿದ್ದ ಹುಡುಗಿ ಆನಂತರ ಎಲ್ಲಿ ಹೋಗಿದ್ದಾಳೆ ಅನ್ನುವುದು ಗೊತ್ತಾಗಿಲ್ಲ. ಕೆಲವರು ಆಕೆ ಮೈಸೂರು ಬಸ್ ಹತ್ತಿದ್ದಾಳೆ, ಕೆಲವರು ಬೆಂಗಳೂರಿಗೆ ರಿಟರ್ನ್ ಹೋಗಿದ್ದಾಳೆ ಅಂತ ಹೇಳುತ್ತಿದ್ದಾರೆ. ಈ ಬಗ್ಗೆ ಮಂಗಳೂರಿನ ಪೊಲೀಸರು ಕೂಡ ಹುಡುಕಾಟ ನಡೆಸಿದ್ದಾರೆ.

ಹುಡುಗಿ ನಾಪತ್ತೆ ಆಗಿರುವ ಬಗ್ಗೆ ಹೆತ್ತವರು ನಂದಿನಿ ಲೇಔಟ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಲ್ಲಿನ ಪೊಲೀಸರು ಇನ್ನೂ ಹುಡುಗಿ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ. ತಾತನ ಜೊತೆಗೆ ಟ್ಯೂಶನ್‌ಗೆಂದು ಹೋಗಿದ್ದ ಹುಡುಗಿ, ತಾತನ ಬಳಿ 5 ಸಾವಿರ ರೂಪಾಯಿ ಕೇಳಿ ಪಡೆದುಕೊಂಡಿದ್ದಳಂತೆ. ಆನಂತರ, ಮನೆಯಿಂದ ಬ್ಯಾಗ್ ಹಿಡ್ಕೊಂಡು ನಾಪತ್ತೆ ಆಗಿದ್ದಾಳೆ. ಮಂಗಳೂರಿಗೆ ತೆರಳಿದಾಕೆ, ಅಲ್ಲಿಂದ ಬೆಂಗಳೂರಿಗೆ ಬರ್ತಿದ್ದೀನಿ ಅಂತ ತನ್ನ ಸ್ನೇಹಿತೆಗೆ ಕರೆ ಮಾಡಿ ತಿಳಿಸಿದ್ದಾಳೆ ಎನ್ನಲಾಗುತ್ತಿದೆ. ಈ ಕರೆಯ ಜಾಡು ಹಿಡಿದು ಬೆಂಗಳೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದೇನಿದ್ದರೂ, 14 ವರ್ಷದ ಹುಡುಗಿ ಒಬ್ಬಂಟಿಯಾಗಿಯೇ ಮಂಗಳೂರು- ಬೆಂಗಳೂರು ಸುತ್ತಾಡಿದ್ದು ಹೆತ್ತವರ ಜೊತೆಗೆ ಸಾರ್ವಜನಿಕರನ್ನೂ ಗಾಬರಿಪಡಿಸಿದೆ.

ಗಿರಿಧರ್ ಶೆಟ್ಟಿ ಪವರ್ ಟಿವಿ ಮಂಗಳೂರು

RELATED ARTICLES

Related Articles

TRENDING ARTICLES