Sunday, September 8, 2024

ಅಂಬೇಡ್ಕರ್ ಕನಸು ನನಸು ಮಾಡುವ ಕೆಲಸ ಆಗುತ್ತಿದೆ; ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ವಿಧಾನಸೌಧದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾತನಾಡಿದರು.

ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಕ್ರಾಂತಿಗೆ ಸಂಕಲ್ಪ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎಂಬ ಆಶಯವನ್ನು ಸಾಕಾರಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ವಿಧಾನಸೌಧದಿಂದ ಹೊರಡುವ ಪ್ರತಿಯೊಂದು ಆದೇಶವೂ ಸಾಮಾಜಿಕ ನ್ಯಾಯ, ಸಮಾನ ಅವಕಾಶಗಳಿಂದ ಕೂಡಿದ್ದು ತಳಸಮುದಾಯ ಏಳಿಗೆಗೆ ಪೂರಕವಾಗಿರಲಿವೆ.

ಎಲ್ಲ ವರ್ಗದವರೂ ಸಮಾಜದಲ್ಲಿ ಅಣ್ಣತಮ್ಮಂದಿರಂತೆ ಬಾಳುವ ಮೂಲಕ ಮಹರ್ಷಿ ವಾಲ್ಮೀಕಿಯವರಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಎಲ್ಲರಿಗೂ ಸಮಾನ ಅವಕಾಶ ನೀಡುವುದೇ ರಾಮರಾಜ್ಯ. ವಾಲ್ಮೀಕಿ ಸೇರಿದಂತೆ ಬುದ್ಧ, ಬಸವ ಹಾಗೂ ಸಂವಿಧಾನದಲ್ಲಿಯೂ ಸಮಾನತೆಯನ್ನು ಪ್ರತಿಪಾದಿಸಲಾಗಿದೆ. ಹೆಜ್ಜೆ ಮುಂದಿಟ್ಟಾಗ ಮಾತ್ರ ಯಶಸ್ಸು ದೊರೆಯುತ್ತದೆ. ಇಚ್ಛಾಶಕ್ತಿಯಿಂದ ಮುನ್ನಡೆದಾಗ ಯಶಸ್ಸು ನಮ್ಮದಾಗುತ್ತದೆ. ಎಸ್ ಸಿ ಎಸ್ ಟಿ ಜನಾಂಗಗಳಿಗೆ ನ್ಯಾಯ ದೊರೆಯುವಂತಾಗಬೇಕು. ವ್ಯವಸ್ಥೆಯಲ್ಲಿ ಸಮಾನದ ಅವಕಾಶ ನೀಡಬೇಕು ಎಂದು ಸಿಎಂ ತಿಳಿಸಿದರು.

ಮಠಮಾನ್ಯಗಳ ಶ್ರೀಗಳು ತುಳಿತಕ್ಕೊಳಗಾದ ಜನಾಂಗಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. 101 ಡಾ.ಬಿ.ಆರ್. ಅಂಬೇಡ್ಕರ್ ಹಾಸ್ಟೆಲ್ ಗಳನ್ನು ಹಾಗೂ 5 ಮೆಗಾ ಹಾಸ್ಟೆಲ್ಗಳನ್ನು ನಿರ್ಮಿಸಲಾಗುತ್ತಿದೆ. 28000 ಕೋಟಿ ಎಸ್ಸಿ, ಎಸ್​ಟಿ ಕಾರ್ಯಕ್ರಮಗಳಿಗೆ ನೀಡಲಾಗಿದ್ದು, 6000 ಕೋಟಿ ರೂ. ಎಸ್​ಸಿ, ಎಸ್​ಟಿ ಇಲಾಖೆಗಳಿಗೆ ನೀಡಲಾಗಿದೆ.

ಎಸ್​ಸಿ, ಎಸ್​ಟಿ ಸಮುದಾಯಗಳು ಭೂಮಿ ಪಡೆಯಲು 20 ಲಕ್ಷ ರೂ, ಮನೆ ನಿರ್ಮಾಣಕ್ಕೆ 2ಲಕ್ಷ ರೂ. ಬಡ ಪರಿಶಿಷ್ಟ ಜಾತಿ, ಪಂಗಡದವರಿಗೆ 75 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಪ್ರತಿ ಕ್ಷೇತ್ರದಲ್ಲಿ ನೂರು ಯುವಕರಿಗೆ 10 ಲಕ್ಷ ರೂ ಸ್ವಯಂ ಉದ್ಯೋಗಕ್ಕಾಗಿ ಒದಗಿಸಲಾಗುತ್ತಿದ್ದು, ಬಾಬು ಜಗಜೀವನರಾಮ್ ಹೆಸರಿನಲ್ಲಿ ಅನುದಾನ ನೀಡಲಾಗುತ್ತಿದೆ. ಅಂಬೇಡ್ಕರ್ ಅವರ ಕನಸನ್ನು ನನಸು ಮಾಡುವ ಕೆಲಸ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಿಮ್ಮ‌ ಪರ ಕೆಲಸ ಮಾಡಲು ನಿಮ್ಮ ಆಶೀರ್ವಾದ ಬೇಕು ಎಂದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಹೆಚ್ಚಿಸುವ ತೀರ್ಮಾನ ಕೈಗೊಳ್ಳಲು ನಿಮ್ಮ ಸಮುದಾಯದ ಪ್ರೀತಿ, ವಿಶ್ವಾಸ, ನನಗೆ ಪ್ರೇರಣೆಯಾಗಿದೆ. ಅಂತೆಯೇ ಬುದ್ದ, ಬಸವ, ಅಂಬೇಡ್ಕರ್, ವಾಲ್ಮೀಕಿ, ನನಗೆ ಸ್ಪೂರ್ತಿಯಾಗಿದ್ದಾರೆ. ಕಠಿಣ ಪರಿಶ್ರಮ ನಡೆಸುವವರ ಬದುಕನ್ನು ಹತ್ತಿರದಿಂದ ಕಂಡಿದ್ದೇನೆ.ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ನ್ಯಾಯ ದೊರಕಿಸಬೇಕು. ನ್ಯಾಯಮೂರ್ತಿಗಳಾದ ನಾಗಮೋಹನ್ ದಾಸ್ ಹಾಗೂ ಅಡಿ ಯವರಿಗೆ ಅಭಿನಂದನೆ ಸಲ್ಲಿಸಬೇಕು. ಸಮಷ್ಟಿಯ ಒಳಿತಿಗೆ ಈ ನಿರ್ಣಯ ಕೈಗೊಳ್ಳಲಾಗಿದೆ. ಸರ್ವ ಪಕ್ಷದ ನಾಯಕರೂ ಈ ನಿರ್ಣಯಕ್ಕೆ ಒಕ್ಕೊರಲಿನ ಬೆಂಬಲ ಸೂಚಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಮಾರ್ಗದರ್ಶನ ಪಡೆಯಲಾಗಿದೆ ಎಂದರು.

ವಾಲ್ಮೀಕಿ ಶ್ರೇಷ್ಠ ಮಾನವತಾವಾದಿ. ಪರಿವರ್ತನೆಯ ಸಂಕೇತವಾಗಿರುವ ಅವರು ತಮ್ಮ ಹಿಂದಿನ ಬದುಕು ಪರಿವರ್ತನೆ ಮಾಡಿಕೊಂಡು ಇಡೀ ವಿಶ್ವಕ್ಕೇ ಪರಿವರ್ತನೆಯ ಸಂದೇಶ ಸಾರಿದರು. ಅವರು ರಚಿಸಿದ ರಾಮಾಯಣ ಮನಮುಟ್ಟುವಂತೆ ಬರೆದಿದ್ದಾರೆ. ವಿಶ್ವದ ಶ್ರೇಷ್ಠ 10 ಗ್ರಂಥಗಳಲ್ಲಿಯೇ ಅತ್ಯಂತ ಶ್ರೇಷ್ಠ ಗ್ರಂಥ. ಶ್ರೀರಾಮ ಅಂದ್ರೆ ನ್ಯಾಯ, ನೀತಿ, ಧರ್ಮ, ಎಲ್ಲ ಗುಣಗಳ ಸಂಕೇತ .ರಾಮನಿಗೆ ಸರಿಸಾಟಿ ಯಾರೂ ಇಲ್ಲ. ತಂದೆ ಮಗನ ಸಂಬಂಧ, ಅಣ್ಣ ತಮ್ಮಂದಿರ ಸಂಬಂಧ, ಪತಿ ಪತ್ನಿ ಸಂಬಂಧ, ಗುರು ಶಿಷ್ಯರ ರಾಮ ಆಂಜನೇಯನ ಸಂಬಂಧ ಗಳನ್ನು ತಿಳಿಯಬೇಕೆಂದರೆ ರಾಮಾಯಣ ಓದಬೇಕು. ಆದರ್ಶಗಳು ಕೂಡಿರುವ ಧರ್ಮ ಗ್ರಂಥ ವಾಲ್ಮೀಕಿ ರಾಮಾಯಣ ಎಂದು ತಿಳಿಸಿದರು.

ವಾಲ್ಮೀಕಿ ಸಮುದಾಯದವರು ಯಾರಿಗೂ ಕಡಿಮೆ ಇಲ್ಲ, ವಿದ್ಯೆ, ಬುದ್ದಿ, ಶಕ್ತಿ ,ಸಾಹಸದಲ್ಲಿ ಯಾವುದರಲ್ಲಿಯೂ ಕಡಿಮೆ ಇಲ್ಲ. ಬೇಡರ ಕಣ್ಣಪ್ಪನಂತ ಭಕ್ತ ಯಾರಿದ್ದಾರೆ. ದೇವರಿಗೆ ತನ್ನ ಕಣ್ಣು ಅರ್ಪಿಸಿ ದೇವರನ್ನೇ ತನ್ನ ಕಡೆಗೆ ಸೆಳೆದುಕೊಂಡ ವಾಲ್ಮೀಕಿ ಸಮುದಾಯ ಅಂದರೆ ಸ್ವಾಭಿಮಾನಿಗಳು, ನೀವು ಯಾರಿಗೂ ಗುಲಾಮರಾಗುವುದು ಬೇಡ. ರಾಜ್ಯವಾಳಿದ ಮದಕರಿ ನಾಯಕನ ಶೌರ್ಯ,ಒನಕೆ ಓಬವ್ವ, ಸುರಪುರದ ರಾಜಾ ವೆಂಕಟಪ್ಪ ನಾಯಕರು ಅವರ ಸಾಧನೆಗಳು ಅಪಾರ. ವಾಲ್ಮೀಕಿ ಜನಾಂಗದ ಪ್ರೀತಿ, ವಿಶ್ವಾಸ, ನಂಬಿಕೆ, ನಿಮ್ಮ ಪ್ರೀತಿಗೆ ನಾನು ಸೋತಿದ್ದೇನೆ‌. ಇದು ನಿಮ್ಮ ಹೊರಾಟದ ಗೆಲುವು‌‌ ಎಂದು ಸಿಎಂ ತಿಳಿಸಿದರು.

RELATED ARTICLES

Related Articles

TRENDING ARTICLES