Monday, May 20, 2024

ಭಾರತ್ ಜೋಡೋ ದುರುದ್ದೇಶದ ಯಾತ್ರೆ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಕಾಂಗ್ರೆಸ್​ ಪಕ್ಷದ ಭಾರತ್ ಜೋಡೋ ಯಾತ್ರೆ ದುರುದ್ದೇಶದ ಯಾತ್ರೆ ಆಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಂದು ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ರಾಹುಲ್ ಗಾಂಧಿ ಅವರು ರಾಜ್ಯ ಸರ್ಕಾರ ಭ್ರಷ್ಟ ಸರ್ಕಾರ ಎಂದಿದ್ದಾರೆ. ಅವರು ಗಾಂಧಿ ಜಯಂತಿಯ ಈ ಸಂದರ್ಭದಲ್ಲಿ ನಕಲಿ ಗಾಂಧಿಗಳ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ಇಡೀ ಪಕ್ಷವೇ ಜಾಮೀನಿನ ಮೇಲಿದೆ ಎಂದು ಟಾಂಗ್​ ನೀಡಿದರು.

ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ರಾಜ್ಯ ಕಾಂಗ್ರೆಸ್ ಅಧ್ಯಕ್ಷರು ಜಾಮೀನಿನ ಮೇಲಿದ್ದು, ಅದೊಂದು ಬೇಲ್ ಪಾರ್ಟಿ ಆಗಿದೆ. ಎಲ್ಲವೂ ಭ್ರಷ್ಟಾಚಾರದ ಆರೋಪದ ಮೇಲೆಯೇ ಇದೆ. ಕೆಪಿಸಿಸಿ ಅಧ್ಯಕ್ಷರು ಪಾದಯಾತ್ರೆಗೆ ಬಹಳ ಕಷ್ಟಪಡುತ್ತಿದ್ದಾರೆ. 2 ರಿಂದ 3 ವರ್ಷಗಳಿಂದ ಪ್ರಕರಣ ನಡೆಯುತ್ತಿದೆ. ಹಿಂದೆ ಅವರಿಗೆ ಕರ್ನಾಟಕ ಎ.ಟಿ.ಎಂ ಆಗಿತ್ತು. ಈಗಿಲ್ಲ ಎಂಬ ಕೊರಗಿರಬಹುದು. ಇಲ್ಲಿ 40% ಇಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಯಾರಾದರೂ, ಎಲ್ಲಾದರೂ ಹೀಗೆ ನಡೆದಿದೆ ಎಂದು ದಾಖಲೆ ನೀಡಿದರೆ ತನಿಖೆ ಮಾಡಿಸುವುದಾಗಿ ಸ್ಪಷ್ಟವಾಗಿ ಹೇಳಿದ್ದೇನೆ ಎಂದರು.

ಇನ್ನು ಚನ್ನಪಟ್ಟಣದ ಗಲಾಟೆಯ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಸರ್ಕಾರದ ಕಾರ್ಯಕ್ರಮ ಹಾಗೂ ಅಭಿವೃದ್ಧಿಯಲ್ಲಿ ರಾಜಕಾರಣ ಬೆರೆಸದೇ, ಶಿಷ್ಟಾಚಾರ, ಕಾನೂನು ಅನುಸರಿಸಬೇಕು. ನಾವೆಲ್ಲಾ ಬಹಳ ದೂರ ಬಂದಿದ್ದೇವೆ, ಪ್ರಬುದ್ಧರಾಗಿದ್ದೇವೆ. ಅದೇ ರೀತಿ ನಡೆದುಕೊಳ್ಳುವುದು ಬಹಳ ಮುಖ್ಯ ಇಲ್ಲಿ ಹಿಂಸೆಗೆ ಅವಕಾಶವಿಲ್ಲ ಎಂದರು. ಪ್ರತಿಷ್ಠೆಗಿಂತ ಅನುದಾನ ಜನರಿಗೆ ಮುಟ್ಟಬೇಕೆನ್ನುವುದು ಮುಖ್ಯ. ಪ್ರಕರಣದ ಕುರಿತು ವರದಿಯನ್ನು ತರಿಸಿಕೊಳ್ಳಲಾಗುತ್ತಿದೆ ಎಂದರು.

RELATED ARTICLES

Related Articles

TRENDING ARTICLES