Tuesday, May 21, 2024

ಹೊಂಬಾಳೆ, KRG ಕಡೆ ಒಲವು.. ರಮ್ಯಾ ಗುಡ್ ನ್ಯೂಸ್.?

ಬೆಂಗಳೂರು: ಸಿನಿಮಾ ಬಿಟ್ಟು ರಾಜಕಾರಣದ ಕಡೆ ವಾಲಿದ್ದ ನಟಿ ರಮ್ಯಾ, ಇದೀಗ ಕಂಪ್ಲೀಟ್ ಆಗಿ ತಮ್ಮ ವರಸೆ ಬದಲಿಸಿಬಿಟ್ಟಿದ್ದಾರೆ. ನಿದ್ದೆಯಲ್ಲೂ ಸಿನಿಮಾನೇ ಕನಸು ಕಾಣೋಕೆ ಮುಂದಾಗಿದ್ದಾರೆ. ಕಾಂತಾರ ಈ ವಾರ ತೆರೆಗಪ್ಪಳಿಸುತ್ತಿದ್ದು, ಪ್ರೀಮಿಯರ್ ಶೋ ನೋಡೋಕೆ ಕಾತರಳಾಗಿದ್ದೇನೆ ಎಂದಿದ್ದಾರೆ.

ಸ್ಯಾಂಡಲ್​ವುಡ್ ಕ್ವೀನ್, ಮಾಜಿ ಸಂಸದೆ ರಮ್ಯಾ ಅವರು ಚಿತ್ರರಂಗದ ಮೇಲೆ ಎಲ್ಲಿಲ್ಲದ ಪ್ರೀತಿ, ಪ್ರೇಮ ಉಕ್ಕಿ ಹರಿಯುತ್ತಿದೆ. ಒಂದಷ್ಟು ದಿನ ಸಿನಿಮಾನೇ ಬೇಡ ಅಂತ ರಾಜಕಾರಣದತ್ತ ಹೊರಳಿದ್ದ ರಮ್ಯಾ, ಇದೀಗ ರಾಜಕೀಯ ಸಹವಾಸವೇ ಬೇಡ ಅಂತ ಮತ್ತೆ ಬಣ್ಣದಲೋಕದತ್ತ ಮುಖ ಮಾಡಿದ್ದಾರೆ.

ಆ್ಯಪಲ್ ಬಾಕ್ಸ್ ಹೊತ್ತು ನಿರ್ಮಾಪಕಿಯಾಗಿ ಬರುತ್ತಿರುವ ಕ್ವೀನ್​ ನಟಿ ರಮ್ಯಾ, ಕೆಆರ್​ಜಿ ಸ್ಟುಡಿಯೋಸ್ ಬ್ಯಾನರ್​ನಡಿ ತಯಾರಾಗ್ತಿರೋ ಹೊಯ್ಸಳ ಸಿನಿಮಾದ ಶೂಟಿಂಗ್ ಸೆಟ್​ಗೆ ತೆರಳಿದರು. ಡಾಲಿ ಹಾಗೂ ತಂಡಕ್ಕೆ ಶುಭಹಾರೈಸಿ ಬಂದಿದ್ದರು. ಅಲ್ಲದೆ, ಹೊಂಬಾಳೆ ಫಿಲಂಸ್, ಕೆಆರ್​ಜಿ ಕಡೆ ಹೆಚ್ಚು ಒಲವು ತೋರಿರೋ ರಮ್ಯಾ ಸದ್ಯದಲ್ಲೇ ನಾಯಕಿಯಾಗಿ ಬಣ್ಣ ಹಚ್ಚೋ ಗುಡ್ ನ್ಯೂಸ್ ಕೊಡ್ತಾರಾ ಅನ್ನೋ ಕ್ಯೂರಿಯಾಸಿಟಿ ಅಭಿಮಾನಿಗಳಲ್ಲಿ ಹೆಚ್ಚಿದೆ.

ಇದೀಗ ಅದೇ ಕೆಆರ್​ಜಿ ವಿತರಿಸುತ್ತಿರೋ ಬಹುನಿರೀಕ್ಷಿತ ಸಿನಿಮಾ ಕಾಂತಾರ ನೊಡಲು ಸ್ಯಾಂಡಲ್​ವುಡ್​ನ ಮೋಹಕತಾರೆ ರಮ್ಯಾ ಬಹಳ ಕಾತರರಾಗಿದ್ದಾರೆ. ಹೀಗಂತ ಅವ್ರೇ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಶುಕ್ರವಾರ ಸಿನಿಮಾ ರಿಲೀಸ್​ಗೂ ಮುನ್ನ ಗುರುವಾರ(ಸೆ.29) ಸಂಜೆ 6.30ಕ್ಕೆ ಸ್ಪೆಷಲ್ ಪ್ರೀಮಿಯರ್ ಶೋನ ವೀಕ್ಷಿಸಲು ರೆಡಿಯಾಗಿದ್ದೇನೆ ಎಂದು ಹೇಳಿದ್ದಾರೆ.

ಅಂದಹಾಗೆ ಕಾಂತಾರ ಕನ್ನಡ ಚಿತ್ರರಂಗದ ಮಟ್ಟಿಗೆ ಒಂದು ಹೊಸ ಪ್ರಯೋಗವೇ ಸರಿ. ಸದಾ ದಂತಕಥೆಗಳನ್ನೇ ಹೇಳುವ ರಿಷಬ್ ಶೆಟ್ಟಿ, ಈ ಬಾರಿ ಕರಾವಳಿ ಭಾಗದ ಮಣ್ಣಿನ ಕಥೆಯನ್ನ ನಾಡಿಗೆ ಸಾರೋಕೆ ಮುಂದಾಗಿದ್ದಾರೆ. ಅವ್ರೇ ಬರೆದು, ನಟಿಸಿ, ನಿರ್ದೇಶಿಸಿರೋ ಕಾಂತಾರ ಹತ್ತು ಹಲವು ವಿಶೇಷತೆಗಳಿಂದ ಎಲ್ಲರ ಹುಬ್ಬೇರಿಸಿದೆ. ಅಲ್ಲದೆ, ಹೊಂಬಾಳೆ ಫಿಲಂಸ್ ನಿರ್ಮಾಣದ ಚಿತ್ರವಾದ್ದರಿಂದ ಸಹಜವಾಗಿಯೇ ನಿರೀಕ್ಷೆಗಳು ಗರಿಗೆದರಿವೆ.

ಇದೇ ಸೆಪ್ಟೆಂಬರ್ 30ಕ್ಕೆ ‘ಕಾಂತಾರ’ ಚಿತ್ರ ವರ್ಲ್ಡ್​ ವೈಡ್ ರಿಲೀಸ್ ಆಗ್ತಿದ್ದು, ಅದಕ್ಕೂ ಮುನ್ನ ಗುರುವಾರ ಸಂಜೆ ಸುಮಾರು 50ಕ್ಕೂ ಅಧಿಕ ಪ್ರೀಮಿಯರ್ ಶೋಗಳು ಕರ್ನಾಟಕದಲ್ಲೇ ನಡೆಯುತ್ತಿವೆ. ರೆಸ್ಟ್ ಆಫ್ ಕರ್ನಾಟಕ 25ಕ್ಕೂ ಅಧಿಕ ಪ್ರದರ್ಶನಗಳು ನಡೆಯಲಿದ್ದು, ಇದು ಕನ್ನಡದಲ್ಲೇ ಈ ಬಾರಿ ಕರಾವಳಿ ಸಂಸ್ಕೃತಿಯನ್ನ ಜಗಜ್ಜಾಹೀರು ಮಾಡೋಕೆ ಸಜ್ಜಾಗಿದೆ.

ಕೆಜಿಎಫ್​ನಿಂದ ಡಿಸ್ಟ್ರಿಬ್ಯೂಷನ್​ನ ನಾಡಿಮಿಡಿತ ಅರಿತಿರೋ ಕೆಆರ್​ಜಿ, ವಿಶ್ವದ ಸುಮಾರು 40ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಕಾಂತಾರನ ತೆರೆಗೆ ತರ್ತಿದೆ. ಯುಎಸ್, ಆಸ್ಟ್ರೇಲಿಯಾ, ಯುಎಇ ಸೇರಿದಂತೆ ಒಂದಷ್ಟು ರಾಷ್ಟ್ರಗಳಲ್ಲಿನ ಥಿಯೇಟರ್ ಲಿಸ್ಟ್ ಕೂಡ ಅನೌನ್ಸ್ ಮಾಡಿರುವ ಚಿತ್ರತಂಡ, ಈ ಬಾರಿ ಕೂಡ ಬಾಕ್ಸ್ ಆಫೀಸ್ ಕಮಾಲ್ ಮಾಡೋದ್ರಲ್ಲಿ ಯಾವುದೇ ಡೌಟ್ ಇಲ್ಲ ಎಂದು ಸಿನಿ ಪಂಡಿತರ ಲೆಕ್ಕಾಚಾರ.

ರಿಷಬ್ ಜೊತೆ ಖಡಕ್ ಖಳನಾಯಕನಾಗಿ ಕಿಶೋರ್ ಮಿಂಚು ಹರಿಸಿದ್ದಾರೆ. ಇವರಿಬ್ಬರ ಮಾತುಕತೆಯ ವಿಡಿಯೋ ಸಖತ್ ವೈರಲ್ ಆಗ್ತಿದೆ. ಅಲ್ಲದೆ, ರಿಷಬ್​ಗೆ ಜೋಡಿಯಾಗಿ ಸಿಂಗಾರ ಸಿರಿ ಸಪ್ತಮಿ ಗೌಡ ಸಾಥ್ ನೀಡಿದ್ದಾರೆ. ಒಟ್ಟಾರೆ ಇದೊಂದು ದೃಶ್ಯಕಾವ್ಯವಾಗಿ ಹೊರಹೊಮ್ಮಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES