Tuesday, May 21, 2024

ಸುಮಲತಾ ಅಂಬರೀಶ್​ ಗಾಳಿಯಲ್ಲಿ ಗುಂಡು ಬೇಡ; ಆಣೆ ಪ್ರಮಾಣಕ್ಕೆ ಸಿದ್ಧವೆಂದ ಪುಟ್ಟರಾಜು

ಮಂಡ್ಯ: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಹೇಳಿದ ದಿನ ನಾನು ಆಣೆ ಮಾಡಲು ರೆಡಿಯಾಗಿದ್ದೇನೆ. ಜನ ಅವರನ್ನು ಆಯ್ಕೆ ಮಾಡಿರುವುದು ಕೆಲಸ ಮಾಡಲು. ಅಂಬರೀಶ್ ಅವರ ಪತ್ನಿ ಎನ್ನುವ ಕಾರಣಕ್ಕೆ ಅವರು ಗೆದ್ದಿದ್ದಾರೆ ಎಂದು ಮೇಲುಕೋಟೆ ಜೆಡಿಎಸ್ ಶಾಸಕ ಸಿಎಸ್ ಪುಟ್ಟರಾಜು ಹೇಳಿದರು.

ಇತ್ತೀಚಿಗೆ ಸುಮಲತಾ ಅಂಬರೀಶ್ ಅವರು ಮೇಲುಕೋಟೆಗೆ ಮಂಡ್ಯ ಜೆಡಿಎಸ್ ಶಾಸಕರಿಗೆ ಆಣೆ-ಪ್ರಮಾಣಕ್ಕೆ ಕರೆದಿದ್ದರು. ಈ ಬಗ್ಗೆ ಮತಾನಾಡಿದ ಅವರು, ನಮ್ಮ ಬಗ್ಗೆ ಮಾತನಾಡಿದರೆ ಹೀರೋ ಆಗುವ ಬಯಕೆ ಸುಮಲತಾ ಅವರಿಗಿದೆ. ಶಾಸಕನಾಗಿ ನಾನು ಸದನದಲ್ಲಿ ಯಾವ ರೀತಿ ಮಾತನಾಡಿದ್ದೇನೆ ಇತಿಹಾಸ ತೆಗೆದು ನೋಡಲಿ. ಮಾತನಾಡುವುದರಿಂದ ದೊಡ್ಡ ಲೀಡರ್ ಆಗುತ್ತೀನಿ ಅಂದು ಕೊಂಡಿದ್ರೆ ಬಿಡಿ. ಗೌರವದಿಂದ ರಾಜಕಾರಣ ಮಾಡಿ. ನನ್ನ ವ್ಯಕ್ತಿತ್ವ ಅಂಬರೀಶ್ ಅವರಿಗೆ ಗೊತ್ತಿತ್ತು. ನಮ್ಮ ಮನೆ ದುಡ್ಡು ಹಾಕಿ, ಅಂಬರೀಶ್ ಅವರಿಗೆ ಚುನಾವಣೆ ಮಾಡಿದ್ದೇನೆ ಎಂದರು.

ಅಂಬರೀಶ್ ಹಾಗೂ ನನ್ನ ನಡುವಿನ ಸಂಬಂಧ ಎಂತದ್ದು ಅನ್ನೋದನ್ನ ರಾಕ್ ಲೈನ್ ವೆಂಕಟೇಶ್ ಅವರನ್ನ ಕೇಳಿ ಮಾಹಿತಿ ತಿಳಿದುಕೊಳ್ಳಬೇಕು. ಅಂಬಿ ಅವರ ಕಡೇ ದೀಪಾವಳಿ ನಾನು ಅವರ ಜೊತೆ ಆಚರಿಸಿದ್ದೇನೆ. ಮಂಡ್ಯ ಭಾಗದ ಜೆಡಿಎಸ್​ ನಾಯಕರ ಹಾಗೂ ನನ್ನ ಬಗ್ಗೆ ಭ್ರಷ್ಟಾಚಾರದ ದಾಖಲೆಗಳಿದ್ರೆ ತರಲಿ, ಅವರ ವಿರುದ್ಧ ನಮ್ಮ ಬಳಿಯೂ ದಾಖಲೆಗಳಿವೆ ಅವುಗಳನ್ನ ನಾವು ಬಿಡುಗಡೆ ಮಾಡುತ್ತೇವೆ ಎಂದು ಸಿಎಎಸ್​ ಪುಟ್ಟರಾಜು ತಿಳಿಸಿದರು.

ಚೆಲುವನಾರಾಯಣನ ಸನ್ನಿಧಿಯಲ್ಲಿ ನಿಂತು ಆಣೆ ಮಾಡಿ ಮಾತನಾಡುತ್ತಿದ್ದೇನೆ. ಅಜಾತ ಶತ್ರು ಅಂಬರೀಶ್ ಅಣ್ಣನ ನೆನೆದು ಸುಮಲತಾ ಕೆಲಸ ಮಾಡಲಿ. ಲಘು ಮಾತು ಅವರಿಗೆ ಶೋಭೆ ತರುವುದಿಲ್ಲ. ನಾನು ದುಡಿದ ದುಡ್ಡಿನಿಂದ ನನ್ನ ಕ್ಷೇತ್ರದಲ್ಲಿ ಜನಪರ ಕೆಲಸ ಮಾಡಿದ್ದೇನೆ. ರಾಜಕೀಯದಲ್ಲಿ ಸಂಪಾದನೆಗಿಂತ ನಾನು ಜನರ ಜತೆ ಕಳೆದಿದ್ದೆ ಹೆಚ್ಚು. ಅವರ ಬಳಿ ದಾಖಲೆಗಳಿದ್ರೆ ತಂದು ದಿನಾಂಕ ನಿಗಧಿ ಮಾಡಲಿ. ನಾನು ಚರ್ಚೆಗೆ ಸಿದ್ಧನಿದ್ದೇನೆ.

ನಾನು ಅಧಿಕಾರಕ್ಕೆ, ಕಮಿಷನ್‌ಗೆ ಆಸೆ ಪಟ್ಟಿದ್ದರೆ ಕ್ಷೇತ್ರದಲ್ಲಿ ಉಳಿಯಲು ಸಾಧ್ಯವಿರಲಿಲ್ಲ. ಕೆಆರ್​ಎಸ್ ಡ್ಯಾಮ್​ ಬಿರುಕು ಚರ್ಚೆ ಬಂದಾಗ ಅಕ್ರಮ ಗಣಿಗಾರಿಕೆ ನಿಲ್ಲಿಸಿದ್ದು ಮೊದಲು ನಾನು. ಯಾರ‌್ಯಾರ ಬಂಡವಾಳ ಏನೇನು ಅನ್ನೋದು ಗೊತ್ತಿದೆ. ಚೆಲುವನಾರಾಯಣನಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದ್ದೇನೆ. ಪರಮಾತ್ಮ ಸುಮಲತಾ ಅವರಿಗೆ ಒಳ್ಳೆ ಬುದ್ದಿ ನೀಡಲಿ. ದೇವರು ಎಲ್ಲವನ್ನು ಸರಿಪಡಿಸುತ್ತಾನೆ, ಅವರನ್ನು ಸರಿಪಡಿಸಲಿ ಎಂದರು.

ಇನ್ನು ಸುಮಲತಾ ಅವರು ಗಾಳಿಯಲ್ಲಿ ಗುಂಡು ಹೊಡೆಯುವುದಲ್ಲ, ಎದೆಗೆ ಗುಂಡು ಹೊಡೆಯಲಿ. ದಾಖಲೆಗಳಿದ್ರೆ ತೆಗೆದುಕೊಂಡು ಬರಲಿ. ಗುತ್ತಿಗೆದಾರರಿದ್ದರೆ ಜೊತೆಗೆ ತರಲಿ. ಇಲ್ಲವಾದರೆ ಹಾದಿ ಬೀದಿಯಲ್ಲಿ ಮಾತನಾಡುವುದು ಬಿಡಲಿ. ನನ್ನದು ನಿಷ್ಪಕ್ಷಪಾತ ರಾಜಕಾರಣವಾಗಿದೆ. ನನ್ನ ಮನೆ ದುಡ್ಡು ತಂದು ರಾಜಕಾರಣ ಮಾಡಿರುವುದು. ನನಗೆ ಯಾವುದೇ ಕೆಟ್ಟ ಚಟಗಳಿಲ್ಲ. ನಾನು ಇಸ್ಪೀಟ್ ಆಡಲ್ಲ, ಜೂಜಾಡಲ್ಲ. ನನಗೆ ಜನಸೇವೆ ಒಂದೆ ಗೊತ್ತಿರೋದು. ನಿಮ್ಮ ಬಳಿ ದಾಖಲೆಗಳಿದ್ರೆ ತಂದು ಬಿಡುಗಡೆ ಮಾಡಿ, ನೀವು ದಿನಾಂಕ ನಿಗಧಿ ಮಾಡಿದ ದಿನ ಬರಲು ನಾವು ರೆಡಿ ಎಂದು ಸಿಎಸ್ ಪುಟ್ಟರಾಜು ಅವರು ಸುಮಲತಾ ಅಂಬರೀಶ್​ ಅವರ ಸವಾಲು ಸ್ವೀಕರಿಸಿದರು.

RELATED ARTICLES

Related Articles

TRENDING ARTICLES