Friday, September 20, 2024

ಮತ್ತೆ ತಾರಕಕ್ಕೇರುತ್ತಾ ಚಾಮರಾಜಪೇಟೆ ಮೈದಾನ ವಿವಾದದ ಕಾವು..?

ಚಾಮರಾಜಪೇಟೆ : ಹಲವು ದಿನಗಳಿಂದ ವಿವಾದಕ್ಕೆ ಈಡಾಗಿದ್ದ ಚಾಮರಾಜಪೇಟೆ ಮೈದಾನ ಈಗ ತಾರ್ಕಿಕ ಅಂತ್ಯ ಕಾಣುವ ಸ್ಥಿತಿಯಲ್ಲಿದೆ. ಯಾಕಂದ್ರೆ ದಾಖಲೆ ನೀಡಲು ಬಿಬಿಎಂಪಿ ನೀಡಿದ್ದ ಸಮಯಾವಕಾಶ ಬುಧವಾರಕ್ಕೆ ಮುಗಿದಿದೆ. ಹೀಗಾಗಿ ಪಾಲಿಕೆ ಈ ಆಸ್ತಿ ತಮ್ಮದೇ ಅಂತ ಘೋಷಿಸುವ ಚಿಂತನೆ ನಡೆಸಿದೆ‌. ಇತ್ತ ಸರ್ಕಾರದ ಸ್ವತ್ತು ಎಂದು ಘೋಷಣೆ ಆಗುವವರೆಗೆ ಹೋರಾಟ ನಿಲ್ಲಿಸೋದಿಲ್ಲ ಅಂತ ಚಾಮರಾಜಪೇಟೆ ನಾಗರಿಕರ ಒಕ್ಕೂಟ ತೊಡೆ ತಟ್ಟಿ ನಿಂತಿದೆ. ಡೆಡ್ ಲೈನ್ ಕೊಟ್ಟಿದ್ರೂ ಯಾವ ಕ್ರಮಕ್ಕೂ ಮುಂದಾಗದ ಪಾಲಿಕೆ ವಿರುದ್ಧ ಮತ್ತೊಂದು ಅಭಿಯಾನಕ್ಕೆ ಒಕ್ಕೂಟ ಮುಂದಾಗಿದೆ.

ಈ ಮೈದಾನ ವಿವಾದ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದ ಸುದ್ದಿ. ಈ ಮೊದಲು ಚಾಮರಾಜಪೇಟೆ ಮೈದಾನಕ್ಕೆ ಸಂಬಂಧಿಸಿದಂತೆ ಆಗಸ್ಟ್ 3 ರ ಒಳಗಾಗಿ ವಕ್ಫ್ ಬೋರ್ಡ್ ಅಥವಾ ಯಾರೇ ಮೈದಾನದ ದಾಖಲೆ ನೀಡಲು ಬಿಬಿಎಂಪಿ ಕಾಲವಕಾಶ ನೀಡಿತ್ತು. ಈ ಮದ್ಯೆ ಈ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಂಡು ಚಾಮರಾಜಪೇಟೆ ನಾಗರೀಕರು ಬಂದ್ ಆಚರಣೆ ಮಾಡುವ ಮಟ್ಟಕ್ಕೆ ಬೆಳೆದಿತ್ತು. ಇದೀಗ ಚಾಮರಾಜಪೇಟೆ ಮೈದಾನ ವಿವಾದ ಕೊನೆಗಾಣುವ ಲಕ್ಷಣಗಳು ಗೋಚರವಾಗಿದೆ. ಈ‌ ವಿವಾದಿತ ಮೈದಾನ ಬಿಬಿಎಂಪಿ ಆಟದ ಮೈದಾನ ಎಂದು ಘೋಷಿಸುವಂತೆ ಹೋರಾಟಕ್ಕೆ ಇಳಿದಿದ್ದೇ ಚಾಮರಾಜಪೇಟೆ ನಾಗರೀಕ ಒಕ್ಕೂಟ ವೇದಿಕೆ. ಇವರು ಈಗ ಆಗಸ್ಟ್ 15ಕ್ಕೆ ಧ್ವಜಾರೋಹಣ ಮಾಡಲು ಅನುಮತಿ ಕೋರಿ ಮನವಿ ಸಲ್ಲಿಸಿದ್ದಾರೆ‌. ಬಿಬಿಎಂಪಿ, ಬೆಂಗಳೂರು ನಗರ ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರಿಗೂ ಮನವಿ ನೀಡಲಾಗಿದೆಯಾದರೂ ಈವರೆಗೂ ಅನುಮತಿ ಸಿಗಲಿಲ್ಲ. ಆದ್ರೆ, ಇದಕ್ಕೆ ಯಾರ ಅಪ್ಪಣೆ ಬೇಕಿಲ್ಲ, ನಾವು ಧ್ವಜಾರೋಹಣ ಮಾಡ್ತೀವಿ ಅಂತ ಹಿಂದೂಪರ ಸಂಘಟನೆಗಳು ಮುಂದಾಗಿವೆ.

ಇನ್ನೂ,, ವಕ್ಫ್ ಬೋರ್ಡ್ ಈವರೆಗೆ ಸುಪ್ರೀಂಕೋರ್ಟ್ ತೀರ್ಪಿನ ಪ್ರತಿ ಹಾಗೂ ಹಲವು ವರ್ಷಗಳ ಹಿಂದಿನ ತೆರಿಗೆ ಕಟ್ಟಿರುವ ಬಿಲ್ ಮಾತ್ರ ಹಾಜರುಪಡಿಸಿದೆ.‌ ಇದರ ಹೊರತಾಗಿ ಬೇರೆ ಯಾವುದೇ ದಾಖಲೆ ವಕ್ಫ್ ಬೋರ್ಡ್ ನಿಂದ ಸಲ್ಲಿಕೆಯಾಗಿಲ್ಲ. ಈ ವಿಚಾರ ಬಿಬಿಎಂಪಿ ಇನ್ ಹೌಸ್ ಪ್ರೊಸೀಡಿಂಗ್ಸ್ ಕೂಡ ನಡೀತಿದ್ದು, ಸಮರ್ಪಕ ದಾಖಲೆ ಸಲ್ಲಿಕೆಯಾಗಿಲ್ಲ. ಹೀಗಾಗಿ ಚಾಮರಾಜಪೇಟೆ ಮೈದಾನ ಬಿಬಿಎಂಪಿಯದ್ದೇ ಎಂದು ಬಹುತೇಕ ಸಾಬೀತು ಆಗಿದೆ. ಇದೇ ವಿಚಾರ ಮುಂದಿಟ್ಟುಕೊಂಡು ಆಸ್ತಿ ಪಾಲಿಕೆಯದ್ದು ಎಂದು ಘೋಷಿಸಲು ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಚೀಫ್ ಕಮಿಷನರ್ ತುಷಾರ್ ಗಿರಿನಾಥ್, ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ವಲಯ ಜಂಟಿ ಆಯುಕ್ತರು ಸಂಪೂರ್ಣ ಸ್ವತಂತ್ರರು ಎನ್ನುವ ಮೂಲಕ ಇದು ಪಾಲಿಕೆಯದ್ದೇ ಆಸ್ತಿ ಎಂದು ಘೋಷಿಸುವ ಮುನ್ಸೂಚನೆ ನೀಡಿದ್ದಾರೆ.

ಬಿಬಿಎಂಪಿ ಚೀಫ್ ಕಮಿಷನರ್ ‌ಕೂಡ ಈ ಬಗ್ಗೆ ವಲಯ ಜಂಟಿ ಆಯುಕ್ತರು ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರರು ಎಂದಿರುವುದು ಈ ಪ್ರಕರಣ ಬಹುತೇಕ ಅಂತ್ಯಕ್ಕೆ ತಲುಪಿದೆ ಎಂಬ ನಿದರ್ಶನ ಎನ್ನಲಾಗಿದೆ. ಆದಷ್ಟು ಬೇಗ ಬಿಬಿಎಂಪಿ ಅಧಿಕಾರಿಗಳು ಈ ಬಗ್ಗೆ ಒಂದು ಸ್ಪಷ್ಟತೆ ಕಂಡುಕೊಂಡು ಈ ವಿವಾದಕ್ಕೆ ಇತಿಶ್ರೀ ಹಾಡಲಿ ಎಂಬುವುದೇ ಎಲ್ಲರ ಆಶಯ.

ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು

RELATED ARTICLES

Related Articles

TRENDING ARTICLES