Monday, May 20, 2024

ರಕ್ತದಾನದ ಕುರಿತು ಜಾಗೃತಿ 89 ನೇ ಸಲ ರಕ್ತದಾನ ಮಾಡಿದ ವ್ಯಕ್ತಿ

ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ರಕ್ತದಾನ ಶಿಬಿರ ಆಯೋಜಿಸಿದ ಸುದ್ದಿ ತಿಳಿದು ದಾವಣಗೆರೆಯಿಂದ ಆಗಮಿಸಿದ್ದ ಮಹಡಿಮನೆ ಶಿವಕುಮಾರ ಎಂಬುವರು 89 ನೇ ಬಾರಿಗೆ ರಕ್ತದಾನ ಮಾಡಿದರು.

ಇನ್ನು, ವಿಶೇಷವಾಗಿ ಕೆಂಪು ಬಣ್ಣದ ಧಿರಿಸಿನಲ್ಲಿ ಕೈಯ್ಯಲ್ಲಿ ತಾವು ದಾನ ಮಾಡಿದ ರಕ್ತದ ಪ್ಯಾಕೇಟ್ ಹಿಡಿದುಕೊಂಡು ಜನರಿಗೆ ಜಾಗೃತಿ ಮೂಡಿಸುವ ವೇಳೆ ಅವರನ್ನು ಸುದ್ದಿಗಾರರು ಮಾತನಾಡಿಸಿದಾಗ, ಈ ವಿಷಯ ತಿಳಿಸಿದರು. ತಮ್ಮ ಜೀವಿತಾವಧಿಯಲ್ಲಿ ಇದು ಕೊಡುತ್ತಿರುವ 89 ನೇ ಬಾರಿ ರಕ್ತ ಕೊಡುತ್ತಿರುವುದಾಗಿ ತಿಳಿಸಿದ ಅವರು. ರಕ್ತದಾನದಿಂದ ಅಮೂಲ್ಯ ಪ್ರಾಣ ಉಳಿಸಬಹುದಾಗಿದೆ. ನನ್ನದೇ ಜೀವನದಲ್ಲಿ ನಮ್ಮ ಸಹೋದರಿ ಬೆಂಕಿ ಅವಘಡದಲ್ಲಿ ಸುಟ್ಟುಕೊಂಡಾಗ ರಕ್ತದ ಅಗತ್ಯತೆ ಇತ್ತು. ನಾನು ರಕ್ತಕ್ಕಾಗಿ ಪರದಾಡಿದ ಘಟನೆ ನನ್ನ ಮನಸ್ಸು ಕಲುಕಿತು. ಅಂದಿನಿಂದ ರಕ್ತದಾನ ಮಾಡುವುದರಿಂದ ಸಾಮಾಜಿಕವಾಗಿ ನಾಲ್ಕಾರು ಪ್ರಾಣಗಳಿಗೆ ಜೀವ ಸಂಜೀವಿನಿಯಾಗಿರುವ ರಕ್ತವನ್ನು ದಾನ ಮಾಡುತ್ತಿದ್ದೇನೆ ಎಂದರು.

ಅದಲ್ಲದೇ, ಈ ಶಿಬಿರವನ್ನು ದಿ. ಎಸ್ ಜಿ ಪಾಟೀಲ್ ಶೃಂಗಾರಗೌಡ್ರು ಇವರ ಎರಡನೇ ಪುಣ್ಯಸ್ಮರಣೆ ನಿಮಿತ್ಯ ಆಯೋಜಿಸಿದ ಮಾಹಿತಿಯನ್ನು ಪ್ರಮುಖರಾದ ಅರುಣಕುಮಾರ ಪಾಟೀಲ್, ಸುರೇಶಗೌಡ ಪಾಟೀಲ್, ಸಚಿನ್‌ಗೌಡ ಪಾಟೀಲ್ ಅವರಿಂದ ತಿಳಿದುಕೊಂಡು ರಕ್ತದಾನ ಮಾಡಿ ಅದರ ಮಹತ್ವ ತಿಳಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು. ರಾಜ್ಯದ ಯಾವುದೇ ಮೂಲೆಯಲ್ಲಿ ರಕ್ತದಾನದ ಶಿಬಿರ ಇದೆ ಎಂಬ ಸುದ್ದಿ ತಿಳಿದರೆ ನಾನು ರಕ್ತವನ್ನು ದಾನ ಮಾಡುತ್ತೇನೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES