Saturday, October 26, 2024

ಕಾಂಗ್ರೆಸ್ ನಾಶಕ್ಕೆ ಡಿಕೆಶಿ, ಸಿದ್ದರಾಮಯ್ಯ, ಜಮೀರ್ ಮೂರು ಜನ ಸಾಕು : ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ : ಡಿಕೆಶಿ ಅವರಿಗೆ ತಾಕತ್ ಇದ್ದರೆ ನನ್ನ ವಿಚಾರವನ್ನು ಹೈಕೋರ್ಟ್, ಸುಪ್ರೀಂಕೋರ್ಟ್ ಎಲ್ಲಿಗಾದ್ರೂ ತೆಗೆದುಕೊಂಡು ಹೋಗಿ ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸವಾಲು ಹಾಕಿದ್ದಾರೆ.

ಈಶ್ವರಪ್ಪ ಅವರ ಪ್ರಕರಣವನ್ನು ಒಂದೇ ದಿನದಲ್ಲಿ ಮುಚ್ಚಿ ಹಾಕಿದ್ರು, ಡಿಕೆಶಿ ಆರೋಪ ವಿಚಾರವಾಗಿ ಮಾತನಾಡಿದ ಅವರು, ಡಿಕೆಶಿ ಅವರಿಗೆ ತಾಕತ್ ಇದ್ದರೆ ನನ್ನ ವಿಚಾರವನ್ನು ಹೈಕೋರ್ಟ್, ಸುಪ್ರೀಂಕೋರ್ಟ್ ಎಲ್ಲಿಗಾದ್ರೂ ತೆಗೆದುಕೊಂಡು ಹೋಗಿ. ಅಲ್ಲಿ ನೀವು ಯಶಸ್ವಿಯಾಗಿ ಬಂದ್ರೆ ಅವರು ಹೇಳಿದಾಗೆ ನಾನು ಕೇಳ್ತೀನಿ. ಸುಮ್ಮನೆ ಹುಚ್ಚು ಹುಚ್ಚಾಗಿ ಎಲ್ಲಾದಕ್ಕೂ ಟೀಕೆ ಮಾಡೋದ್ರಲ್ಲಿ ಅರ್ಥ ಇಲ್ಲ ಎಂದರು.

ಇನ್ನು, ಆ ಪ್ರಕರಣದ ಬಗ್ಗೆ ನಾನು ಮಾತನಾಡಲು ಇಷ್ಟಪಡಲ್ಲ. ಯಾಕಂದ್ರೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ನಾನು ನೋಡಿಯೇ ಇಲ್ಲ. ಡಿಕೆಶಿ ಅವರ ಹೆಸರು ಬರೆದಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡು ಇದಕ್ಕೆ ಡಿಕೆಶಿ ಕಾರಣ ಅಂದ್ರೆ ಡಿಕೆಶಿ ಕಾರಣ ಆಗ್ತಾರಾ.? ಕೆಪಿಸಿಸಿ ಅಧ್ಯಕ್ಷನಾಗಿ ಈ ರೀತಿ ಮೈ ಮೇಲೆ ಜ್ಞಾನ ಇಲ್ಲದಾಗೆ ಮಾತನಾಡಬಾರದು ಎಂದು ಹೇಳಿದರು.

ಇಡಿ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ಮೌನ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಅವರ ಆಪಾದನೆ ಬಗ್ಗೆ ವಿಚಾರಣೆಯೇ ಮಾಡಬಾರದು. ಬಿಜೆಪಿ ಅವರ ಮೇಲೆ ಕ್ಲೀನ್ ಚಿಟ್ ಬಂದ್ರೆ ಕಾನೂನು ಬಾಹಿರ. ಇದು ಕಾಂಗ್ರೆಸ್ ಧೋರಣೆ. ಈ ರೀತಿ ಕುತಂತ್ರ ರಾಜಕಾರಣ ರಾಜ್ಯದಲ್ಲಿ ನಡೆಯುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮವಾಗಲು ಡಿಕೆಶಿ, ಸಿದ್ದರಾಮಯ್ಯ, ಜಮೀರ್ ಮೂರು ಜನ ಸಾಕು. ಪ್ರತಿಭಟನೆ ಮಾಡಿದ್ರೆ ವಿಪಕ್ಷ ಬದುಕಿದೆ ಅಂತಾ ಗೊತ್ತಾಗುತ್ತದೆ. ಪ್ರತಿಭಟನೆ ಮಾಡಲಿಲ್ಲ ಅಂದ್ರೆ ವಿಪಕ್ಷ ಸತ್ತು ಹೋಗಿದೆ ಅಂದುಕೊಳ್ಳುತ್ತಾರೆ. ಬೀದಿಗೆ ಇಳಿಯಲಿ, ಹೋರಾಟ ಮಾಡಲಿ ವಿಪಕ್ಷ ಇದೆ ಅಂತಾ ಗೊತ್ತಾಗುತ್ತದೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES