Saturday, September 21, 2024

ಪಡಿತರ ಜೋಳ ನಾಪತ್ತೆ ಪ್ರಕರಣ: ಟ್ರೇಡರ್ಸ್ ಸೇರಿ 16 ಜನರ ವಿರುದ್ಧ FIR

ಬಳ್ಳಾರಿ : ಬಡವರ ಹಸಿವು ನೀಗಿಸಬೇಕಾಗಿದ್ದ ಸಾವಿರಾರು ಕ್ವಿಂಟಾಲ್ ಪಡಿತರ ಜೋಳ ಅಕ್ರಮ ಪ್ರಕರಣಕ್ಕೆ ಮತ್ತಷ್ಟು ಅಧಿಕಾರಿಗಳು ಬಂಧನ ಭೀತಿ ಎದುರಿಸುವಂತಾಗಿದೆ. ಸರ್ಕಾರಿ ಗೋದಾಮು ಅಧಿಕಾರಿಗಳು, ಟ್ರೇಡರ್ಸ್ ಸೇರಿದಂತೆ ಈಗ ಹೆಚ್ಚುವರಿ 16 ಜನರ ವಿರುದ್ದ FIR ದಾಖಲಾಗಿದೆ.

ಬಳ್ಳಾರಿಯ ಸಿರುಗುಪ್ಪದ KFCSC ಗೋದಾಮಿನಲ್ಲಿ 7,282 ಕ್ವಿಂಟಾಲ್ ಹಾಗೂ ಬಳ್ಳಾರಿ ಎಸ್ ಡಬ್ಲೂಸಿ ಗೋದಾಮಿನಲ್ಲಿ 1237.42 ಜೋಳ ನಾಪತ್ತೆಯಾಗಿತ್ತು. ಈ ಸಂಬಂಧ KFCSC ಜಿಲ್ಲಾ ವ್ಯವಸ್ಥಾಪಕ ನಾರಾಯಣಸ್ವಾಮಿ ಹಾಗೂ ಖರೀದಿ ಅಧಿಕಾರಿ ಶಿವೇಗೌಡ ವಿರುದ್ದ ಪ್ರಕರಣ ದಾಖಲಾಗಿತ್ತು. ಪೊಲೀಸರು ಗೋದಾಮು ವ್ಯವಸ್ಥಾಪಕ ಬಸವರಾಜ್​​​ನನ್ನ ಬಂಧಿಸಿದ್ದಾರೆ. ಮತ್ತೊಂದೆಡೆ ನಾರಾಯಣಸ್ವಾಮಿ ಅನಾರೋಗ್ಯದ ನೆಪವೊಡ್ಡಿ ಬೆಂಗಳೂರು ಆಸ್ಪತ್ರೆಗೆ ದಾಖಲಾಗಿದ್ರೆ, ಶಿವೇಗೌಡ ನಾಪತ್ತೆಯಾಗಿದ್ದಾರೆ. ಇನ್ನೂ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು ಆಹಾರ ಇಲಾಖೆ ಅಧಿಕಾರಿಗಳು ಟ್ರೇಡರ್ಸ್ ಸೇರಿದಂತೆ 16 ಜನರ ವಿರುದ್ದ ಮತ್ತೆ FIR ದಾಖಲಿಸಿದ್ದಾರೆ. ಈಗ ಮತ್ತಷ್ಟು ಅಧಿಕಾರಿಗಳು ಕೂಡ ಜೈಲು ಸೇರುವ ಸಾಧ್ಯತೆ ಇದೆ.

ಅಧಿಕಾರಿಗಳು ಸೇರಿದಂತೆ 16 ಜನರ ವಿರುದ್ದ ಪ್ರಕರಣ ದಾಖಲಾಗುತ್ತಿಂದೆಯೇ ಎಲ್ಲರೂ ತಲೆಮರೆಯಿಸಿ ಕೊಂಡಿದ್ದಾರೆ. ಪತ್ತೆಗಾಗಿ ಮೂರು ಪೊಲೀಸ್ ತನಿಖಾ ತಂಡಗಳನ್ನ ರಚನೆ ಮಾಡಲಾಗಿದೆ. ಶೀಘ್ರದಲ್ಲಿ ಆರೋಪಿಗಳನ್ನ ಬಂಧಿಸುವ ಸಾಧ್ಯತೆ ಇದೆ. ಆದರೆ ಈ ಪ್ರಕರಣದಲ್ಲಿ ಕೆಲವು ಪ್ರಭಾವಿ ವ್ಯಕ್ತಿಗಳು ಇದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಈ ಪ್ರಕರಣ ಸಾಕಷ್ಟು ಮಹತ್ವ ಪಡೆದುಕೊಂಡಿದ್ದು,ಸಮಗ್ರ ತನಿಖೆಯಾಗಬೇಕಾಗಿದೆ.

ಪಡಿತರ ಜೋಳ ಅಕ್ರಮ ಪ್ರಕರಣ ಸದ್ಯ ಗಣಿನಾಡಿನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಒಟ್ಟಿನಲ್ಲಿ ಬಡವರಿಗೆ ಸೇರಬೇಕಿದ್ದ ಪಡಿತರ ಜೋಳದಲ್ಲೂ ಅಕ್ರಮವೆಸಗಿರುವವರ ವಿರುದ್ದ ಕಠಿಣ ಶಿಕ್ಷೆಯಾಗಬೇಕಾಗಿದೆ.ಆ ಮೂಲಕ ಇಂತಹ ಅಕ್ರಮಗಳಿಗೆ ಬ್ರೇಕ್ ಹಾಕಬೇಕಾಗಿದೆ.

-ಕ್ಯಾಮರಾಮ್ಯಾನ್ ಶಿವು ಜೊತೆ ಬಸವರಾಜ್ ಹರನಹಳ್ಳಿ ಪವರ್ ಟಿವಿ,ಬಳ್ಳಾರಿ.

RELATED ARTICLES

Related Articles

TRENDING ARTICLES