Sunday, May 19, 2024

ಭಟ್ರ ಸಾಹಿತ್ಯದ ಗೋಲ್ಡನ್ ಸಾಂಗ್ಸ್ ಲಿಸ್ಟ್​​ನತ್ತ ಗಾಳಿಪಟ- 2

ಸ್ಯಾಂಡಲ್​ವುಡ್ ಅಂಗಳದಲ್ಲಿ ಎಲ್ಲಾ ನಿರ್ದೇಶಕರದ್ದೂ ಒಂದೊಂದು ಯುನಿಕ್ ಸ್ಟೈಲ್ ಇದೆ. ಅದ್ರಲ್ಲೂ ವಿಕಟಕವಿ ಯೋಗರಾಜ್ ಭಟ್ ಆ ಸಾಲಿನಲ್ಲಿ ನಿಲ್ಲೋ ಮೊದಲಿಗರಾಗ್ತಾರೆ. ಸಾಹಿತ್ಯದ ಬಳಕೆಯಲ್ಲೇ ಮ್ಯಾಜಿಕ್ ಮಾಡೋ ಜಾದುಗಾರ ಈತ. ಗೋಲ್ಡನ್ ಗಾಳಿಪಟ ಹಾರಿಸೋಕೆ ಸಜ್ಜಾಗಿರೋ ಭಟ್ರು, ಗ್ಲಾಮರ್​ಗಾಗಿ ಗ್ರಾಮರ್ ಪಾಠ ಮಾಡ್ತಿರೋ ಕಲರ್​ಫುಲ್ ಕಹಾನಿ ಒಮ್ಮೆ ನೀವೇ ಓದಿ.

  • ಹೀಲೋಸ್​ ಜೊತೆ ಭಟ್ಲು.. ಗಾಳಿಪಟದಲ್ಲಿ ಲ ಆಗಿದ್ಯಾಕೆ ರ..?
  • ಎಲ್ಲೆಲ್ಲೂ ದೇವ್ಲೆ ದೇವ್ಲೆ  ಹಾಡಿನ ಗುಂಗು.. ಜನ್ಯಾ ಝೇಂಕಾರ
  • ಗೋಲ್ಡನ್ ಸ್ಟಾರ್ ಗಣಿ ಜೊತೆ ಪವನ್, ದಿಗಂತ್ ಮೋಡಿ..!

ಗಾಳಿಪಟ ಚಿತ್ರದಂತೆ ಅದ್ರ ಸೀಕ್ವೆಲ್ ಸಿನಿಮಾ ಕೂಡ ಹಾಡುಗಳಿಂದಲೇ ಪ್ರತೀ ದಿನ ಹಂಗಾಮ ಮಾಡ್ತಿದೆ. ಯೆಸ್.. ವಿಕಟಕವಿ ಯೋಗರಾಜ್ ಭಟ್ ನಿರ್ದೇಶನದ ಹಾಗೂ  ಗೋಲ್ಡನ್ ಸ್ಟಾರ್ ಗಣೇಶ್ ಮುಖ್ಯಭೂಮಿಕೆಯ ಈ ಸಿನಿಮಾ ದಿನದಿಂದ ದಿನಕ್ಕೆ ನಿರೀಕ್ಷೆಯನ್ನ ಹೆಚ್ಚಿಸುತ್ತಿದೆ. ಗಣಿ ಜೊತೆ ಈ ಬಾರಿ ದಿಗಂತ್ ಹಾಗೂ ಲೂಸಿಯಾ ಪವನ್ ಕುಮಾರ್ ಕಾಣಸಿಗಲಿದ್ದು, ದೊಡ್ಡ ಪರದೆ ಮೇಲೆ ಮೋಡಿ ಮಾಡೋ ಮನ್ಸೂಚನೆ ನೀಡಿದ್ದಾರೆ.

ದೇವ್ಲೆ ದೇವ್ಲೆ ಅನ್ನೋ ಈ  ಹಾಡು ಆನಂದ್ ಆಡಿಯೋ ಮೂಲಕ ರೀಸೆಂಟ್ ಆಗಿ ಲಾಂಚ್ ಆಯ್ತು. ಯೋಗರಾಜ್ ಭಟ್ ಬರೆದಿರುವ ಈ ಹಾಡನ್ನ ವಿಜಯ್ ಪ್ರಕಾಶ್ ಹಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಇತ್ತೀಚೆಗೆ ಈ ಹಾಡಿನ ಬಿಡುಗಡೆ ಸಮಾರಂಭ ನಡೆಯಿತು. ಈ ಹಾಡನ್ನು ಬರೆದು ಅರ್ಜುನ್ ಜನ್ಯ ಅವರಿಗೆ ಕಳುಹಿಸಿದೆ. ಮೊದಲು ಈ ಹಾಡನ್ನು “ದೇವ್ರೆ ದೇವ್ರೆ” ಎಂದು ಬರೆದಿದ್ದು. ಆನಂತರ ಇದು ಕಾಮನ್ ಆಯ್ತು. ಏನಾದ್ರೂ ಬದಲಾವಣೆ ಮಾಡಿ ಅಂದ್ರು ಅರ್ಜುನ್ ಜನ್ಯ. ಆಗ ರ ಕಾರ ತೆಗೆದು ಲ‌ ಕಾರ ಹಾಕಿದೆ. ಆಗ ಎಲ್ಲರಿಗೂ ಹಿಡಿಸಿತು ಅಂತಾರೆ ಭಟ್ರು.

ವಿಜಯ್ ಪ್ರಕಾಶ್ ಸುಶ್ರಾವ್ಯವಾಗಿ ಹಾಡಿದ್ದಾರೆ. ನನ್ನ , ವಿಜಯ್ ಪ್ರಕಾಶ್ ಹಾಗೂ ಅರ್ಜುನ್ ಜನ್ಯರ ಕಾಂಬಿನೇಶನ್ ನಲ್ಲಿ ಸಾಕಷ್ಟು ಎಣ್ಣೆ ಹಾಡುಗಳು ಗೆದ್ದಿವೆ. ಇದು ಕೂಡ ಗೆಲುತ್ತದೆ ಎಂಬ ಭರವಸೆಯಿದೆ. ಕೊರೋನಾ ತನ್ನ ಅಟ್ಟಹಾಸ ಮೆರೆಯುತ್ತಿದ್ದ ಸಮಯದಲ್ಲಿ ಚಿತ್ರೀಕರಣವಾದ ಹಾಡು ಅಂತಾರೆ ಡೈರೆಕ್ಟರ್.

ಕೋವಿಡ್ ಸಮಯದಲ್ಲಿ ಕಜಾಕಿಸ್ತಾನಕ್ಕೆ ಹುಷಾರಾಗಿ ಕರೆದುಕೊಂಡು ಹೋಗಿ ಬಂದ ನಿರ್ಮಾಪಕರಿಗೆ ಧನ್ಯವಾದ. ಇನ್ನು ಈ ಹಾಡಿನ ಬಗ್ಗೆ ಹೇಳಬೇಕೆಂದರೆ ಯೋಗರಾಜ್ ಸರ್ ಈ ಹಾಡನ್ನು ನನಗೆ ಕಳುಹಿಸಿದಾಗ, ಇದೇನ್ ಸರ್ ಹೀಗಿದೆ? ಈ ಹಾಡು ಕೇಳಿದವರು ನಿಮ್ಮ ಬಗ್ಗೆ ಏನಾದರೂ ಅಂದುಕೊಳ್ಳುತ್ತಾರೆ ಅಂದೆ. ಆನಂತರ ಇಲ್ಲ ಗಣಪ ಇನ್ನೊಂದು ಸಲ ಕೇಳು ಅಂದ್ರು. ಕೇಳುತ್ತಾ, ಕೇಳುತ್ತಾ ನಾನೇ ಸದಾ ಗುನುಗುವಂತಾಯ್ತು. ಅಂದು ಇದ್ದ  ಆತಂಕ ಈಗ ಇಲ್ಲ. ಜನ “ದೇವ್ಲೆ ದೇವ್ಲೆ” ಹಾಡನ್ನ ಒಪ್ಪಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ವಿಜಯ್ ಪ್ರಕಾಶ್ ಗಾಯನ, ಪಾತಾಜೆ ಅವರ ಛಾಯಾಗ್ರಹಣ,  ಧನು ಮಾಸ್ಟರ್  ನೃತ್ಯ ನಿರ್ದೇಶನ ಹಾಗೂ ಎಲ್ಲರ ಅಭಿನಯ ಈ ಹಾಡನ್ನು  ಶ್ರೀಮಂತಗೊಳಿಸಿದೆ ಅಂತಾರೆ ಗೋಲ್ಡನ್ ಸ್ಟಾರ್.

ಯೋಗರಾಜ್ ಭಟ್ ಹಾಗೂ ಗಣೇಶ್ ಅವರ ಮೂಲಕ ನನ್ನ ಗಾಯನದ ಜರ್ನಿ ಗಾಳಿಪಟ ಮೊದಲ ಭಾಗದಲ್ಲಿ ಆರಂಭವಾಯಿತು. ಕವಿತೆ ಕವಿತೆ‘” ಹಾಡಿನ ಮೂಲಕ. ಈಗ ಗಾಳಿಪಟ 2 ಚಿತ್ರದಲ್ಲೂ ಹಾಡಿದ್ದೇನೆ. ಲ ಕಾರದಲ್ಲಿ ಈ ಹಾಡನ್ನು ಹಾಡುವುದು ಕಷ್ಟ ಅಂದುಕೊಂಡೆ. ಪ್ರಾಕ್ಟೀಸ್ ಮಾಡಿ, ಅರ್ಧ ಗಂಟೆಯಲ್ಲಿ “ದೇವ್ಲೆ ದೇವ್ಲೆ” ಹಾಡು ಹಾಡಿದೆ ಅಂದ್ರು ಗಾಯಕ ವಿಜಯ್ ಪ್ರಕಾಶ್.

ಈ ಹಾಡು ಮಾಡಿದಾಗ ಲ ಕಾರ ಇರಲಿಲ್ಲ. ಮೊದಲು ರ ಕಾರ ಇತ್ತು. ರ ಕಾರದ ಹಾಡು ಅಷ್ಟು ಮಜಾ ಇಲ್ಲ ಅಂದೆ. ಆಗ ಯೋಗರಾಜ್ ಸರ್, ರ ಕಾರಗಳನ್ನು ತೆಗೆದು ಲ ಕಾರ ಮಾಡು ಅಂದರು. ಹಾಗೆ ಮಾಡಿದಾಗ ಈ ಹಾಡು ತುಂಬಾ ಹಿಡಿಸಿತು. ವಿಜಯ್ ಪ್ರಕಾಶ್ ಅವರು ಇಂಪಾಗಿ ಹಾಡಿದ್ದಾರೆ. ನಾನು ಪದೇಪದೇ ಕೇಳುವ ಸಾಂಗ್ಸ್ ಅಂದ್ರೆ, ಅದು ಗಾಳಿಪಟ ೨ ಆಲ್ಬಮ್ ಅಂತ ತಮ್ಮ ಹಾಡುಗಳ ಬಗ್ಗೆ ತಾವೇ ಹೆಮ್ಮೆಯಿಂದ ಮಾತಾಡಿದ್ರು ಅರ್ಜುನ್ ಜನ್ಯ.

ಈ ಹಾಡಿನ‌ ಚಿತ್ರೀಕರಣ ನೋಡಲು ಕಜಾಕಿಸ್ತಾನಕ್ಕೆ ಹೋಗಿದ್ದೆ. ಅದೇ ಮೊದಲ ಬಾರಿಗೆ ನಾನು  ಅಂತರರಾಷ್ಟ್ರೀಯ ವಿಮಾನ ಹತ್ತಿದ್ದು, ಅಂತಹ ಚಳಿಯಲ್ಲಿ ಕೆಲಸ ಮಾಡಿದ್ದ ಚಿತ್ರ ತಂಡಕ್ಕೆ ಧನ್ಯವಾದ ಅಂತ ಒಳ್ಳೆಯ ಸಿನಿಮಾ ಕಟ್ಟಿಕೊಡ್ತಿರೋ ನಿರ್ಮಾಪಕ ರಮೇಶ್ ರೆಡ್ಡಿ ಅಂತಾರೆ.

ಒಟ್ಟಾರೆ, ಆಗಸ್ಟ್ 12ಕ್ಕೆ ತೆರೆಗೆ ಬರೋಕೆ ಸಜ್ಜಾಗಿರೋ ಗಾಳಿಪಟ 2 ಸಿನಿಮಾ ಈಗಾಗ್ಲೇ ಎಕ್ಸಾಮ್ ಸಾಂಗ್ ಹಾಗೂ ನಾನಾಡದ ಮಾತೆಲ್ಲವ ಸಾಂಗ್ಸ್​ನಿಂದ ಪ್ರೇಕ್ಷಕರ ನಾಡಿಮಿಡಿತ ಹೆಚ್ಚಿಸಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES