Friday, October 18, 2024

ಜಮೀರ್ ಪುತ್ರ ಇಂಡಸ್ಟ್ರಿಗೆ ಎಂಟ್ರಿ ; ಅಭಿ, ಟೈಸನ್ ಸಾಥ್

ವೈರಾಗ್ಯಕ್ಕೆ ಕೇರ್ ಆಫ್ ಅಡ್ರೆಸ್ ಆಗಿರೋ ಕಾಶಿಯಲ್ಲಿ ಪ್ರೀತಿಯ ಚಿಗುರು ಮೂಡಿದೆ. ಜೀವನೋತ್ಸಾಹದ ಪಲ್ಲಕ್ಕಿ ಸಾಗಿದೆ. ಮಾಯಾವಿ ಜೋಡಿಯೊಂದಕ್ಕೆ ಮಾಯಗಂಗೆ ಸಾಕ್ಷಿಯಾಗೋ ಮೂಲಕ ಮಧುರ ಪ್ರೇಮ ದೃಶ್ಯಕಾವ್ಯ ಅರಳಿದೆ. ಹಿಂದೂ, ಕ್ರೈಸ್ತ, ಮುಸಲ್ಮಾನರನ್ನ ಬೆಸೆಯೋ ಆ ಪ್ರೇಮದೂರಿನ ಪ್ರೇಮಯಾನದ ಒಂದು ಅವಿಸ್ಮರಣೀಯ ನೋಟ ನಿಮಗಾಗಿ ಕಾಯ್ತಿದೆ.

ಮಾಯಗಂಗೆಯ ಮಡಿಲಲ್ಲಿ ಝೈದ್ ಪ್ರೇಮ್ ಕಹಾನಿ

ಜಮೀರ್ ಪುತ್ರ ಇಂಡಸ್ಟ್ರಿ ಎಂಟ್ರಿ.. ಅಭಿ, ಟೈಸನ್ ಸಾಥ್

ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ.. ಅಜನೀಶ್ ಟ್ಯೂನ್

ಬನಾರಸ್​​ನಲ್ಲಿ ಸೋನಾಲ್- ಝೈದ್ ಪ್ರೇಮ ಪಲ್ಲಕ್ಕಿ..!

ಇದು ಬನಾರಸ್ ಚಿತ್ರದ ಚೊಚ್ಚಲ ವಿಡಿಯೋ ಸಾಂಗ್ ಝಲಕ್. ಮಾಯಗಂಗೆ ಅನ್ನೋ ಈ ಹಾಡಿಗೆ ಕವಿರತ್ನ ಡಾ. ವಿ ನಾಗೇಂದ್ರ ಪ್ರಸಾದ್ ಪದಪುಂಜ ಪೋಣಿಸಿದ್ದು, ಮೆಲೋಡಿ ಹಾಡುಗಳ ಮಾಂತ್ರಿಕನಾಗಿ ಬದಲಾಗಿರೋ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಅರ್ಮಾನ್ ಮಲಿಕ್ ಕಂಠದಲ್ಲಿ ಅದ್ರ ಅಂದಚೆಂದವನ್ನು ಹೆಚ್ಚಿಸಿರೋದು ಅದ್ವೈತ್ ಗುರುಮೂರ್ತಿ ಸಿನಿಮಾಟೋಗ್ರಫಿ.

ಕಾಶಿ, ವಾರಣಾಸಿ ಅಂದಾಕ್ಷಣ ವೈರಾಗ್ಯಕ್ಕೆ ಕೇರ್ ಆಫ್ ಅಡ್ರೆಸ್ ಅನಿಸುತ್ತೆ. ಆದ್ರೆ ಆ ವೈರಾಗ್ಯದ ಮಧ್ಯೆಯೂ ಆಶಾದಾಯಕ ಪ್ರೀತಿಯೊಂದು ಕವಲೊಡೆಯೋದು ಈ ಹಾಡಿನ ಹಾಗೂ ಈ ಚಿತ್ರದ ವಿಶೇಷ ಅನ್ನೋದು ಇದ್ರಿಂದ ಗೊತ್ತಾಗ್ತಿದೆ. ಒಲವೇ ಮಂದಾರ, ಬೆಲ್​ಬಾಟಂ ಚಿತ್ರದ ನಿರ್ದೇಶಕ ಜಯತೀರ್ಥ ಇಂಥದ್ದೊಂದು ವಿಭಿನ್ನ ಪ್ರಯತ್ನವನ್ನು ಕಾಶಿ, ವಾರಣಾಸಿ ಹೆಸ್ರುಗಳನ್ನ ತೆಗೆದುಕೊಳ್ಳದೆ ಬನಾರಸ್ ಅನ್ನೋ ಕಲರ್​ಫುಲ್ ಟೈಟಲ್​ನಿಂದ ಅಷ್ಟೇ ಬ್ಯೂಟಿಫುಲ್ ಕಥೆ ಹೆಣೆದು, ಅದನ್ನ ತೆರೆಗೆ ತರೋ ಪ್ರಯತ್ನ ಮಾಡಿದ್ದಾರೆ.

ಅಂದಹಾಗೆ ಬನಾಸರ್ ಸಿನಿಮಾ ಕನ್ನಡದ ಜೊತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ತಯಾರಾಗ್ತಿರೋ ಪ್ಯಾನ್ ಇಂಡಿಯಾ ಮೂವಿ. ಲವ್ ಅನ್ನೋದು ಯೂನಿವರ್ಸಲ್ ಸಬ್ಜೆಕ್ಟ್ ಆಗಿರೋದ್ರಿಂದ ಜಯತೀರ್ಥ ಈ ಸಿನಿಮಾನ ಬಹುಭಾಷಾ ಚಿತ್ರವಾಗಿಸ್ತಿದ್ದಾರೆ. ಅಲ್ಲದೆ, ನಾಯಕನಟನಾಗಿ ರಾಜಕಾರಣಿ ಜಮೀರ್ ಖಾನ್ ಪುತ್ರ ಝೈದ್ ಖಾನ್​ರನ್ನ ಚಿತ್ರರಂಗಕ್ಕೆ ಇಂಟ್ರಡ್ಯೂಸ್ ಮಾಡ್ತಿದ್ದಾರೆ.

ಇಲ್ಲಿ ಜೂನಿಯರ್ ರಣ್​ಬೀರ್ ಕಪೂರ್ ರೀತಿ ಮಿಂಚ್ತಿರೋ ಈ ಹಾಲುಗಲ್ಲದ ಪೋರ ಜಮೀರ್ ಪುತ್ರ ಝೈದ್. ಅವ್ರಿಗೆ ಸೋನಾಲ್ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಚಿತ್ರದ ಸೊಬಗನ್ನ ಮತ್ತಷ್ಟು ಹೆಚ್ಚಿಸಿದ್ದಾರೆ. ಸುಜಯ್ ಶಾಸ್ತ್ರಿ ಕೂಡ ಸಿನಿಮಾದ ಜೊತೆ ಜೊತೆಗೆ ಹಾಡಿನ ಭಾಗವಾಗಿರೋದು ಇಂಟರೆಸ್ಟಿಂಗ್.

ನ್ಯಾಷನಲ್ ಖಾನ್ಸ್ ಪ್ರೊಡಕ್ಷನ್ ಬ್ಯಾನರ್​ನಡಿ ಮುಂಬೈನಲ್ಲಿ ಸೆಟಲ್ ಆಗಿರೋ ಜಮೀರ್ ಕುಚಿಕು ಗೆಳೆಯ ತಿಲಕ್​ರಾಜ್ ಬಲ್ಲಾಳ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅನುಪಮ್ ಖೇರ್ ಸ್ಟುಡಿಯೋದಲ್ಲಿ ಝೈದ್​ಗೆ ನಟನಾ ತರಬೇತಿ ಕೊಡಿಸಿ, ನಂತ್ರ ಬನಾರಸ್ ಮೂಲಕ ಇಂಟ್ರಡ್ಯೂಸ್ ಮಾಡೋ ಮೂಲಕ ಝೈದ್​ಗೆ ಗಾಡ್​ಫಾದರ್ ಆಗಿದ್ದಾರೆ ತಿಲಕ್​ರಾಜ್ ಬಲ್ಲಾಳ್.

ವಿಶೇಷ ಅಂದ್ರೆ ಝೈದ್ ನಾಯಕನಟನಾಗೋದು ಅವ್ರ ತಂದೆ ಜಮೀರ್​ಗೆ ಇಷ್ಟವಿಲ್ಲ. ಹಾಗಾಗಿಯೇ ಅವ್ರ ಅನುಪಸ್ಥಿತಿಯಲ್ಲೇ ಕನ್ನಡ ಹಾಗೂ ಮಲಯಾಳಂ ವರ್ಷನ್​ನ ಮೊದಲ ಸಾಂಗ್ ಲಾಂಚ್ ಕಾರ್ಯಕ್ರಮ ನೆರವೇರಿತು. ಜಿಟಿ ಮಾಲ್​ನ ಪಿವಿಆರ್​ನಲ್ಲಿ ನಡೆದ ಫಂಕ್ಷನ್​ಗೆ ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್, ಟೈಸನ್ ವಿನೋದ್ ಪ್ರಭಾಕರ್, ನಿರ್ಮಾಪಕಿ ಶೈಲಜಾ ನಾಗ್ ಸಾಕ್ಷಿ ಆದ್ರು.

ಇನ್ನು ಚಿತ್ರರಂಗದ ಎಂಟ್ರಿ ಹಾಗೂ ಮಾಯಗಂಗೆ ಹಾಡಿನ ಕುರಿತು ನಮ್ಮ ಫಿಲ್ಮ್ ಬ್ಯೂರೋ ಹೆಡ್ ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ ಜೊತೆ ಝೈದ್ ಖಾನ್ ಎಕ್ಸ್​ಕ್ಲೂಸಿವ್ ಆಗಿ ಮಾತನಾಡಿದ್ರು.

ಅದೇನೇ ಇರಲಿ.. ಸದಾ ಭಿನ್ನ ಅಲೆಯ ಸಿನಿಮಾಗಳಿಂದ ಗಮನ ಸೆಳೆಯೋ ಜಯತೀರ್ಥ, ಈ ಬಾರಿ ಝೈದ್​ನ ಇಂಟ್ರಡ್ಯೂಸ್ ಮಾಡೋ ಮೂಲಕ ಮತ್ತೊಂದು ಬೆಸ್ಟ್ ಫಿಲ್ಮ್ ಕೊಡೋ ಮನ್ಸೂಚನೆ ನೀಡಿದ್ದಾರೆ. ಝೈದ್ ಕೂಡ ಸಖತ್ ಪ್ರಾಮಿಸಿಂಗ್ ಆಗಿದ್ದು, ಭವಿಷ್ಯದ ಸೂಪರ್ ಸ್ಟಾರ್ ಆಗೋ ಲಕ್ಷಣ ತೋರಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES