Sunday, May 19, 2024

ಡಿಸಿ ಕಚೇರಿ ಆವರಣದಲ್ಲೇ ಅಂತ್ಯಕ್ರಿಯೆಗೆ ಮುಂದಾದ ಗ್ರಾಮಸ್ಥರು

ಬೆಳಗಾವಿ: ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಬೆಳ್ಳಂ ಬೆಳಿಗ್ಗೆ ಡೆಡ್ ಬಾಡಿ ಪ್ರತ್ಯಕ್ಷವಾಗಿದೆ. ಗುದ್ದಲಿ-ಸಣಕಿ ಹಿಡಿದು, ಡೆಡ್ ಬಾಡಿ ಜೊತೆ ಬಂದ ಗ್ರಾಮಸ್ಥರನ್ನ ನೋಡಿ ಪೋಲಿಸರು ಹೌಹಾರಿದ್ರೆ, ಸುದ್ದಿ ತಿಳಿದ ಜಿಲ್ಲಾಧಿಕಾರಿಗಳು ಓಡೋಡಿ ಬಂದಿದ್ದಾರೆ. ಅಷ್ಟಕ್ಕೂ ಇಂತಹ ವಿಚಿತ್ರ ಘಟನೆ ನಡೆದಿದ್ದೇಕೆ, ಈ ಸ್ಟೋರಿ ಓದಿ.

ಇಂತಹದೊಂದು ವಿಚಿತ್ರ ಘಟನೆಗೆ ಸಾಕ್ಷಿಯಾಗಿದ್ದು ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ, ಹೌದು ಇಂದು ಬೆಳ್ಳಂ ಬೆಳಿಗ್ಗೆ ಬೆಳಗಾವಿ ಡಿಸಿ ಆವರಣಕ್ಕೆ 30 ರಿಂದ 40 ಜನ ಬಂದಿದ್ರು, ಅವರಷ್ಟೇ ಬಂದಿದ್ರೆ ಓಕೆ, ಆದ್ರೆ ಅವರು ಸ್ಮಶಾನಕ್ಕೆ ತೆಗೆದುಕೊಂಡು ಹೋಗಬೇಕಾಡ ಹೆಣವನ್ನ ಹೊತ್ತುಕೊಂಡು ಬಂದಿದ್ರು. ಹೀಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಡೆಡ್ ಬಾಡಿ ಸಮೇತ ಬಂದವರು ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಏಣಗಿ ಗ್ರಾಮಸ್ಥರು.

ಸ್ಮಶಾನಕ್ಕೆ ಹೋಗಲು ದಾರಿ ಇಲ್ಲದ್ದರಿಂದ ಸಿಡಿದೆದ್ದ ಸವದತ್ತಿ ತಾಲೂಕಿನ ಏಣಗಿ ಗ್ರಾಮಸ್ಥರು 90 ಕಿಮೀ ದೂರದಿಂದ ಶವ ತೆಗೆದುಕೊಂಡು ಬೆಳಗಾವಿ ಡಿಸಿ ಕಚೇರಿಗೆ ಬಂದು ಪ್ರತಿಭಟನೆ ನಡೆಸಿದ್ದಾರೆ. ಏಣಗಿ ಗ್ರಾಮದಲ್ಲಿ ಅಬ್ದುಲ್ ಖಾದರ್ ಮಿಶ್ರಿಕೋಟಿ ಎಂಬುವವರು ಸಾವನ್ನಪ್ಪಿದ್ದರು, ಆದ್ರೆ ಗ್ರಾಮದ ಹಿಂದೂ-ಮುಸ್ಲಿಂ ಸ್ಮಶಾನಗಳಿಗೆ ಹೋಗಲು ದಾರಿಯೇ ಇಲ್ಲದಂತಾಗಿದೆ. ಹಲವು ಭಾರಿ ಜಿಲ್ಲಾಧಿಕಾರಿ ಹಾಗೂ ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸಿದ್ರು ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರ ರೈತ ಮುಖಂಡರ ಬೆಂಬಲದೊಂದಿಗೆ ಅಬ್ದುಲ್ ಖಾದರ್ ಶವವನ್ನು ಬೆಳಗಾವಿ ಡಿಸಿ ಕಚೇರಿ ಆವರಣಕ್ಕೆ ತಂದು ಪ್ರತಿಭಟನೆ ನಡೆಸಿದ್ದಲ್ಲದೇ, ಇಲ್ಲಿಯೇ ಅಂತ್ಯಕ್ರಿಯೆ ಮಾಡ್ತಿವಿ ಎಂದು ಪಟ್ಟು ಹಿಡಿದಿದ್ದಾರೆ.

ಸುದ್ದಿ ತಿಳಿದ ಪೋಲಿಸರು ಓಡೋಡಿ ಬಂದ್ರು, ಅಪರ ಜಿಲ್ಲಾಧಿಕಾರಿಗಳು ಕೂಡ ಸ್ಥಳಕ್ಕೆ ಬಂದು ಗ್ರಾಮಸ್ಥರ ಮನವೊಲಿಸಲು ಎಷ್ಟೇ ಪ್ರಯತ್ನಿಸಿದ್ರು ಗ್ರಾಮಸ್ಥರು ಜಗ್ಗದ್ದರಿಂದ ಸ್ವತಃ ಸ್ಥಳಕ್ಕೆ ಖುದ್ದು ಬೆಳಗಾವಿ ಡಿಸಿ ನಿತೇಶ್ ಪಾಟೀಲ್ ಓಡೋಡಿ ಬಂದ್ರು, ಡಿಸಿ-ಗ್ರಾಮಸ್ಥರ ನಡುವೆ ಸಾಕಷ್ಟು ಹಗ್ಗ ಜಗ್ಗಾಟ ನಡೆದ ಬಳಿಕ ಕೊನೆಗೂ ಗ್ರಾಮಸ್ಥರ ಮನವೊಲಿಸುವಲ್ಲಿ ಡಿಸಿ ನಿತೇಶ್ ಪಾಟೀಲ್ ಯಶಸ್ವಿಯಾಗಿದ್ದಾರೆ. ಎಸಿ, ತಹಶೀಲ್ದಾರ ಸಮ್ಮುಖದಲ್ಲಿ ಅಂತ್ಯಕ್ರಿಯೆ ಮಾಡುವ ಭರವಸೆ ನೀಡಿರುವ ಜಿಲ್ಲಾಧಿಕಾರಿಗಳು ಶೀಘ್ರದಲ್ಲೇ ಸ್ಮಶಾನಕ್ಕೆ ಹೋಗುವ ದಾರಿಯನ್ನು ಭೂ ಸ್ವಾಧೀನ ಪಡಿಸಿಕೊಂಡು ದಾರಿ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ ಮೇಲೆ ಗ್ರಾಮಸ್ಥರು ಶವ ತೆಗೆದುಕೊಂಡು ಅಂತ್ಯಕ್ರಿಯೆಗಾಗಿ ಏಣಗಿ ಗ್ರಾಮಕ್ಕೆ ತೆರಳಿದ್ರು.

ಒಟ್ಟಿನಲ್ಲಿ ಬೆಳಗಾವಿ ಜಿಲ್ಲಾಧಿಕಾರಿಗಳ ಕಛೇರಿ ಗೆ ದಿಢೀರ್ ಬಂದ ಡೆಡ್ ಬಾಡಿ ಕೆಲ ಕಾಲ ಗೊಂದಲ ಸೃಷ್ಟಿಸಿದ್ದು ಜಿಲ್ಲಾಡಳಿತ ಕೂಡ ಅಷ್ಟೇ ತಾಳ್ಮೆ ಯಿಂದ ಪ್ರಕರಣವನ್ನು ಅಂತ್ಯಗೊಳಿಸಿದೆ.

RELATED ARTICLES

Related Articles

TRENDING ARTICLES