Monday, May 20, 2024

ರಾಜ್ಯಸಭಾ ಚುನಾವಣೆ: ತಾಜ್ ವೀವಂತ ಹೊಟೇಲ್‌ಗೆ ಶಾಸಕರು ಶಿಫ್ಟ್..?

ಬೆಂಗಳೂರು : ರಾಜ್ಯಸಭೆ ಚುನಾವಣೆಗೆ ಇರೋದು ಎರಡು ದಿನ ಮಾತ್ರ..ಮೂರು ಪಕ್ಷಗಳ ನಾಯಕರಿಗೂ ಶುರುವಾಗಿದೆ ಜೊತೆಗೆ ಪ್ರತಿಷ್ಠೆಯ ಪ್ರಶ್ನೆಯೂ ಹೌದು. ಹೀಗಾಗಿ ತಮ್ಮ ಶಾಸಕರ ರಕ್ಷಣೆಗಾಗಿ ರೆಸಾರ್ಟ್ ರಾಜಕಾರಣಕ್ಕೆ ನಾಂದಿ ಹಾಡಿದ್ದಾರೆ..ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಅಂತಿಮ ಸರ್ಕಸ್ ನಡೆಸಿದ್ದಾರೆ.

ರಾಜ್ಯಸಭೆ ಚುನಾವಣೆ ಅಖಾಡ ಗರಿಗೆದರಿದೆ. ಮೂರೂ ಪಕ್ಷಗಳ ನಾಯಕರಿಗೆ ಇದು ಪ್ರತಿಷ್ಠೆಯ ಪ್ರಶ್ನೆಯಾಗಿದೆ.. ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳೋಕೆ ಅಂತಿಮ ಹಂತದ ಕಸರತ್ತು ಶುರುವಾಗಿದೆ. ಮೂರು ಪಕ್ಷಗಳಲ್ಲೂ ಅಡ್ಡಮತದಾನದ ಆತಂಕವೂ ಇದೆ. ತಮ್ಮ ಶಾಸಕರನ್ನು ಮೊದಲು‌ ರಕ್ಷಣೆ ಮಾಡಿಕೊಳ್ಳೋಣ. ನಂತರ ಬೇರೆ ಪಕ್ಷದ ಶಾಸಕರ ಮತಗಳನ್ನ ಕೀಳೋಣ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಹೀಗಾಗಿ ರೆಸಾರ್ಟ್ ರಾಜಕಾರಣಕ್ಕೆ ಕೈ ಹಾಕಿದ್ದಾರೆ. ಹೋಟೆಲ್ ಹಾಗೂ ರೆಸಾರ್ಟ್‌ಗಳಲ್ಲಿ‌ ತಮ್ಮ ಶಾಸಕರನ್ನ ಕೂಡಿಹಾಕೋಕೆ ತೀರ್ಮಾನಿಸಿದ್ದಾರೆ.

ತಾಜ್ ವೀವಂತ ಹೊಟೇಲ್‌ಗೆ ಶಾಸಕರು ಶಿಫ್ಟ್..? :

ಕಾಂಗ್ರೆಸ್ ಹಾಗೂ ಬಿಜೆಪಿಗಿಂತ ಜೆಡಿಎಸ್ ಶಾಸಕರು ಅಡ್ಡಮತದಾನ ಮಾಡುವ ಆತಂಕ ಜಾಸ್ತಿ ಎದುರಾಗಿದೆ. ಕೆಲವರು ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿರೋದ್ರಿಂದ ನಾಯಕರಿಗೆ ಭಯ ಶುರುವಾಗಿದೆ. ಭಿನ್ನಮತೀಯ ಶಾಸಕರನ್ನು ಮನವೊಲಿಸುವ ಪ್ರಯತ್ನ ಮುಂದುವರಿದಿದೆ. ಜೊತೆಗೆ ಮತದಾನ ನಡೆಯುವವರೆಗೆ ತಮ್ಮ ಶಾಸಕರನ್ನು ಹೊರವಲಯದ ರೆಸಾರ್ಟ್‌ಗೆ ಸಾಗಿಸುವ ನಿರ್ಧಾರ ಮಾಡಲಾಗಿದೆ. ಹೀಗಾಗಿ ರಾತ್ರಿಯೇ ಜೆಡಿಎಸ್ ಶಾಸಕರನ್ನು ಬೆಂಗಳೂರು ಹೊರವಲಯದ ತಾಜ್ ವೀವಂತ ಹೊಟೇಲ್ ಗೆ ಶಿಫ್ಟ್ ಮಾಡೋಕೆ ಪ್ರಯತ್ನ ನಡೆದಿದೆ.

ಬೆಂಗಳೂರಿನ ಜೆ.ಪಿ.ಭವನದಲ್ಲಿ ನಡೆಯಬೇಕಿದ್ದ ಶಾಸಕಾಂಗ ಪಕ್ಷದ ಸಭೆಯನ್ನೂ ಹೊಟೇಲ್‌ನಲ್ಲಿಯೇ ನಡೆಸುವ ತೀರ್ಮಾನಕ್ಕೆ ಬರಲಾಗಿದೆ.. ಜೂನ್ 10ರಂದು ಮತದಾನ ನಡೆಯಲಿದ್ದು, ಅಂದು ಬೆಳಗ್ಗೆ ಹೊಟೇಲ್‌ನಿಂದ ನೇರವಾಗಿ ವಿಧಾನಸೌಧಕ್ಕೆ ಕರೆತರಲು ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ.

ಕಾಂಗ್ರೆಸ್‌ನಲ್ಲೂ ಇದೆ ಕ್ರಾಸ್ ವೋಟಿಂಗ್ ಆತಂಕ..? :

ಜೆಡಿಎಸ್‌ನಂತೆ ಕಾಂಗ್ರೆಸ್ ನಾಯಕರಿಗೂ ಅಡ್ಡಮತದಾನದ ಆತಂಕವಿದೆ.. ಹೆಚ್ಚು ಕಡಿಮೆ ಒಂದಿಬ್ಬರು ಬೇರೆಯವರಿಗೆ ಮತ ಹಾಕಿದ್ರೆ ಕಷ್ಟ ಅನ್ನೋ ಕಾರಣಕ್ಕೆ ತಮ್ಮ ಶಾಸಕರನ್ನ ಹೊಟೇಲ್‌ನಲ್ಲೇ ಕಾದಿಡುವ ನಿರ್ಧಾರಕ್ಕೆ ಬರಲಾಗಿದೆ.. ಗುರುವಾರ ಸಂಜೆ ಖಾಸಗಿ ಹೊಟೇಲ್‌ನಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ನಂತರ ಅದೇ ಹೊಟೇಲ್‌ನಲ್ಲಿ ಶಾಸಕರಿಗೆ ವಾಸ್ತವ್ಯ ಕಲ್ಪಿಸಲಾಗಿದೆ.. ಮಾರನೇ ದಿನ ಬೆಳಗ್ಗೆ ಹೊಟೇಲ್‌ನಿಂದಲೇ ಶಾಸಕರನ್ನು ಕರೆತಂದು ತಮ್ಮ ಅಭ್ಯರ್ಥಿಗೆ ಮತ ಹಾಕಿಸುವ ಪ್ರಯತ್ನ ನಾಯಕರು ಮಾಡಿದ್ದಾರೆ..

ಹೊಟೇಲ್‌ನಲ್ಲಿ ಶಾಸಕರನ್ನು ರಕ್ಷಿಸಲು ಮುಖಂಡರ ಚಿಂತನೆ..? :

ಮೂರನೇ ಅಭ್ಯರ್ಥಿ ಗೆಲ್ಲಿಸಿಕೊಳ್ಳೋಕೆ BJP ನಾಯಕರು ನಿರ್ಧರಿಸಿದ್ದಾರೆ.. ಸಿಎಂ ಬೊಮ್ಮಾಯಿಗೆ ಇದು ಪ್ರತಿಷ್ಠೆಯಾಗಿದೆ.. ತಮ್ಮ ಶಾಸಕರು ಕ್ರಾಸ್ ವೋಟಿಂಗ್ ಮಾಡಲ್ಲ ಅನ್ನೋ ನಂಬಿಕೆಯೂ ಇದೆ.. ಅಲ್ಲದೆ ಸೆಕೆಂಡ್ ಪ್ರಿಪರೆನ್ಸ್ ವೋಟಿಂಗ್ ನಲ್ಲಿ ಲೆಹರ್ ಸಿಂಗ್ ಗೆಲ್ಲಿಸಿಕೊಳ್ಳುವ ಅವಕಾಶವೂ ಇದೆ.. ಆದ್ರೆ, ಡಿಕೆಶಿ ಮೇಲೆ ಬಿಜೆಪಿ ನಾಯಕರಿಗೆ ಅನುಮಾನವಿದೆ.. ಹಾಗಾಗಿ ತಮ್ಮ ಒಂದಿಬ್ಬರು ಶಾಸಕರನ್ನ ಸೆಳೆದ್ರೆ ಹೇಗೆ ಅನ್ನೋ ಆಲೋಚನೆಯಿದೆ.. ಹೀಗಾಗಿ ಗುರುವಾರ ಖಾಸಗಿ ಹೊಟೇಲ್‌ನಲ್ಲೇ ವಾಸ್ತವ್ಯ ಕಲ್ಪಿಸುವ ಬಗ್ಗೆ ಚಿಂತನೆ ನಡೆದಿದೆ ಎನ್ನಲಾಗ್ತಿದೆ..

ಒಟ್ನಲ್ಲಿ ಮೂರು ಪಕ್ಷಗಳ ನಾಯಕರಲ್ಲಿ ಅಡ್ಡಮತದಾನದ ಆತಂಕವಿದೆ.. ತಮ್ಮ ಶಾಸಕರು ಎಲ್ಲಿ ಬೇರೆಯವರ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೋ ಅನ್ನೋ ಭಯವೂ ಇದೆ.. ಹೀಗಾಗಿ ತಮ್ಮ ಶಾಸಕರನ್ನು ರಕ್ಷಣೆ ಮಾಡಿಕೊಳ್ಳೋಕೆ ನೋಡ್ತಿದ್ದಾರೆ..ಹೀಗಾಗಿ ರೆಸಾರ್ಟ್ ಪಾಲಿಟಿಕ್ಸ್‌ಗೆ ಮುಂದಾಗಿದ್ದಾರೆ..

ರಾಘವೇಂದ್ರ ವಿ.ಎನ್.ಪೊಲಿಟಿಕಲ್ ಬ್ಯೂರೋ ಪವರ್ ಟಿವಿ ಬೆಂಗಳೂರು

RELATED ARTICLES

Related Articles

TRENDING ARTICLES