Friday, May 17, 2024

ಅರ್ಥಪೂರ್ಣ & ಅವಿಸ್ಮರಣೀಯ ಚಿರು ಪುಣ್ಯ ಸ್ಮರಣೆ

ಚಿರು ಸರ್ಜಾ ಇಲ್ಲವಾಗಿ ಇಂದಿಗೆ ಎರಡು ವರ್ಷ. ಪುಣ್ಯ ಸ್ಮರಣೆಯನ್ನ ಬಹಳ ಅರ್ಥಪೂರ್ಣ ಹಾಗೂ ಅವಿಸ್ಮರಣೀಯವಾಗಿ ನಡೆಸಿದ ಕುಟುಂಬ, ಅವ್ರಿಗಾಗಿ ಆಲಯವನ್ನೇ ನಿರ್ಮಿಸಿದೆ. ಇಷ್ಟಕ್ಕೂ ಕಾರ್ಯಕ್ರಮ ಹೇಗಿತ್ತು..? ಸರ್ಜಾ ಹಾಗೂ ಸುಂದರ್ ರಾಜ್ ಕುಟುಂಬ ಹೇಳಿದ್ದೇನು ಅನ್ನೋದನ್ನ ನೋಡಿ.

  • ಅರ್ಥಪೂರ್ಣ & ಅವಿಸ್ಮರಣೀಯ ಚಿರು ಪುಣ್ಯ ಸ್ಮರಣೆ
  • ಇದು ಸಮಾಧಿಯಲ್ಲ ಗುಡಿ ಎಂದ ಬಹದ್ದೂರ್ ಗಂಡು

ಸ್ಯಾಂಡಲ್​​ವುಡ್​ ಇಂದಿಗೂ ಆ ಕರಾಳ ದಿನವನ್ನೂ ಮರೆಯಲು ಸಾದ್ಯವಿಲ್ಲ. ಕಲೆಯನ್ನೇ ಉಸಿರಾಗಿಸಿಕೊಂಡಿದ್ದ ನೆಚ್ಚಿನ ನಟ, ಕನ್ನಡಿಗರ ಪ್ರೀತಿಯ ಮನೆ ಮಗ ಚಿರಂಜೀವಿ ಸರ್ಜಾ ನಮ್ಮನ್ನೆಲ್ಲಾ ಅಗಲಿದ ದಿನ. ಹೃದಯಾಘಾತದಿಂದಾಗಿ ಚಿರು ಬಾರದ ಲೋಕಕ್ಕೆ ಅಂತಿಮ ಪಯಣ ಬೆಳೆಸಿದ್ರು. ಇಂತಹ ಅದ್ಭುತ ಕಲಾವಿದ ನಮ್ಮನ್ನೆಲ್ಲಾ ಅಗಲಿ ಇಂದಿಗೆ ಎರಡು ವರ್ಷಗಳಾಗಿವೆ.

ಇಡೀ ಕರುನಾಡೇ ಚಿರು ಸಾವಿಗೆ ಕಂಬನಿ ಮಿಡಿದಿತ್ತು. ಪ್ರತಿ ಮನೆಯಲ್ಲೂ ಅವರ ಸಾವಿನ ದೃಶ್ಯಗಳನ್ನು ಕಂಡು ಮಮ್ಮಲ ಮರುಗಿತ್ತು. ಇಷ್ಟು ಚಿಕ್ಕ ವಯಸ್ಸಿಗೆ ಪ್ರೀತಿಯ ಪತ್ನಿ, ಬಾಹ್ಯ ಪ್ರಪಂಚ ಕಾಣದ ಕಂದಮ್ಮ, ಕೋಟ್ಯಂತರ ಅಭಿಮಾನಿಗಳನ್ನು ಅಗಲಿ ಇಹಲೋಕ ತ್ಯಜಿಸಿದ್ರು ಚಿರು.

ಚಿರಂಜೀವಿ ಅವರ ಎರಡನೇ ವರ್ಷದ ಪುಣ್ಯಸ್ಮರಣೆಯ ಕಾರ್ಯವನ್ನು ಕನಕಪುರದ ಬೃಂದಾವನ ಫಾರಂನಲ್ಲಿ ಪೂಜೆ ವಿಧಿ ವಿಧಾನಗಳೊಂದಿಗೆ ನಡೆಸಲಾಯಿತು. ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಅರ್ಜುನ್ ಸರ್ಜಾ, ಪತ್ನಿ ಮೇಘನಾ ರಾಜ್​​​, ತಮ್ಮ,  ಧ್ರುವ ಸರ್ಜಾ ಸೇರಿ ಪುಣ್ಯತಿಥಿ ಕಾರ್ಯವನ್ನು  ಸರಳವಾಗಿ ಆಚರಿಸಲಾಯಿತು.

ಚಿರಂಜೀವಿ ಸರ್ಜಾ ಸಮಾಧಿಯು ಅಮೃತ ಶಿಲೆಗಳಿಂದ ಗುಡಿಯಂತೆ ನಿರ್ಮಾಣವಾಗಿದ್ದು, ಅರ್ಜುನ್​ ಸರ್ಜಾ ಸಮಾಧಿಗೆ ನಮಸ್ಕರಿಸಿ ಚಿರು ಬಗ್ಗೆ ನೆನಪಿಸಿಕೊಂಡು ಭಾವುಕರಾದರು. ಅವನನ್ನು ನೆನಪು ಮಾಡಿಕೊಳ್ಳದ ದಿನವಿಲ್ಲ. ಅವನಿಗೆ ಒಂದು ಬಾರಿ ಬೆಲ್ಟ್​ ನಲ್ಲಿ ಹೊಡೆದಿದ್ದೆ. ಅವನನ್ನು ಆಡಿಸಿ ಬೆಳಸಿದ್ದೇ ನಾನು ಎಂದು ಭಾವುಕರಾದ್ರು ಆ್ಯಕ್ಷನ್ ಕಿಂಗ್.

ಪ್ರೀತಿಯ ತಮ್ಮನನ್ನು ಕಳೆದುಕೊಂಡು ಅಕ್ಷರಶಃ ನಲುಗಿದ್ದ ಧ್ರುವ ಸರ್ಜಾ, ಇಂದು ತುಂಬಾ ಭಾವುಕರಾದಂತೆ ಕಂಡರು. ಚಿರು ನನಗೆ ಎಲ್ಲಾ ಆಗಿದ್ದ. ಅವನಂದ್ರೆ ನನಗೆ ಎಲ್ಲಾ. ಮನೆಯಲ್ಲಿ ಹೇಗಿದ್ದೀರಿ..? ಚೆನ್ನಾಗಿದ್ದೀರಾ ಅನ್ನೋ ಮಾತುಗಳನ್ನೇ ಆಡೋದು ಬಿಟ್ಟಿದ್ದೇವೆ. ಚಿರು ನಂಗೆ ಪ್ರಾಣ ಅಂತಾರೆ.

ಇನ್ನು ಪತ್ನಿ ಮೇಘನಾ ಮಾತನಾಡಿ ಮಗ ರಾಯನ್​ಗೂ ಸಹ ಚಿರಂಜೀವಿ ಸ್ಥಾನ ತುಂಬೋಕೆ ಸಾಧ್ಯವಿಲ್ಲ. ಫ್ಯಾಮಿಲಿಗೂ ಮರೆಯೋಕೆ ಆಗಲ್ಲ ಅವರಿಗೋಸ್ಕರ ಈ ದಿನ ಮೀಸಲು ಎಂದ್ರು.

ಕರುನಾಡಿನ ಪ್ರೀತಿಯ ಮಗನಾಗಿ ವಾಯುಪುತ್ರ ಸಿನಿಮಾ ಮೂಲಕ ಹೆಸರು ಮಾಡಿದ್ದ ಚಿರಂಜೀವಿ ಸರ್ಜಾ ಎಂದಿಗೂ ಅಜರಾಮರ. ಅವರ ನೆನಪುಗಳು ಶಾಶ್ವತವಾಗಿ ಉಳಿಯಲಿ. ಮತ್ತೆ ಹುಟ್ಟಿ ಬನ್ನಿ ಚಿರು.

ರಾಕೇಶ್​ ಅರುಂಡಿ, ಫಿಲ್ಮ್ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES