ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಧರ್ಮ ಸಂಘರ್ಷ ತೀವ್ರಗೊಳ್ಳುತ್ತಿದೆ. ಹಿಜಾಬ್ ಹಲಾಲ್, ಮಂದಿರ- ಮಸೀದಿ ಫೈಟ್ ನಡುವೆ ಮತ್ತೊಂದು ಧರ್ಮ ದಂಗಲ್ ಶುರುವಾಗಿದೆ. ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಹಿಂದು ಕಾರ್ಯಕ್ರಮಗಳಿಗೆ ಅವಕಾಶ ನೀಡುವಂತೆ ಹಿಂದು ಪರ ಸಂಘಟನೆಗಳು ಪಟ್ಟು ಹಿಡಿದಿವೆ. ಈದ್ಗಾ ಮೈದಾನ ಕೆಲವು ಮುಸ್ಲಿಮರಿಗೆ ಮಾತ್ರ ಸೀಮಿತವಲ್ಲ. ಇಲ್ಲಿ ಹಿಂದುಗಳ ಸಭೆ ಸಮಾರಂಭಗಳಿಗೆ ಅವಕಾಶ ನೀಡಬೇಕು. ಈ ಮೈದಾನ ಪಾಲಿಕೆಗೆ ಸೇರಿದ್ದು, ಕೇವಲ ಒಂದು ಧರ್ಮಕ್ಕೆ ಸೀಮಿತ ಮಾಡಲಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ನಮಗೂ ಈ ಜಾಗದಲ್ಲಿ ಕಾರ್ಯಕ್ರಮ ನಡೆಸಲು ಅವಕಾಶ ಕೊಡಿ ಅಂತಾ ಪಟ್ಟು ಹಿಡಿದಿದ್ದಾರೆ.
ಇನ್ನು, ಚಾಮರಾಜಪೇಟೆಯ ಈದ್ಗಾ ಮೈದಾನ ವಿವಾದ ವಿಚಾರವಾಗಿ ಮಾತನಾಡಿರೋ ಮುಸ್ಲಿಂ ಮುಖಂಡ ಮೊಹಮ್ಮದ್ ಖಾಲಿಫ್, ಎಲೆಕ್ಷನ್ ಬರ್ತಿದೆ ಅಂತ ಹೀರೋ ಆಗೋಕೆ ಹೊರಟಿದ್ದಾರೆ. ಚುನಾವಣೆಗಾಗಿ ಮುಸ್ಲಿಂಮರ ಭಾವನೆಗಳ ಜೊತೆ ಆಟ ಆಡ್ತಿದ್ದಾರೆ. ದೇಶ ಕಟ್ಟುವ ಕೆಲಸದ ಬಗ್ಗೆ ಮಾತಾಡಿ, ಆಗ ನಾವೂ ಕೈಜೋಡಿಸುತ್ತೇವೆ. ಅದನ್ನ ಬಿಟ್ಟು ಮಸೀದಿ, ಮೈದಾನ, ದರ್ಗಾ ಅಂತ ಸುಮ್ಮನೆ ವಿವಾದ ಸೃಷ್ಟಿಸಬೇಡಿ ಎಂದಿದ್ದಾರೆ.
ಒಟ್ಟಿನಲ್ಲಿ ರಾಜ್ಯದಲ್ಲಿ ಎದ್ದಿರುವ ಧರ್ಮ ಸಂಘರ್ಷ ಮತ್ತೊಂದು ಸ್ವರೂಪ ಪಡೆದಿದೆ. ಬಿಬಿಎಂಪಿ ಜಾಗವನ್ನ ಅಕ್ರಮವಾಗಿ ವಶಪಡಿಸಿಕೊಂಡು ಇಲ್ಲಿ ಈಗ ಈದ್ಗಾ ಟವರ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ ಮಸೀದಿ ನಿರ್ಮಾಣ ಮಾಡೋಕೆ ಪ್ಲ್ಯಾನ್ ಮಾಡಿದ್ದಾರೆ ಅನ್ನೋದು ಹಿಂದೂ ಮುಖಂಡರ ಆರೋಪ. ಈ ವಿಚಾರದಲ್ಲಿ ಬಿಬಿಎಂಪಿ ಅಥವಾ ಸರ್ಕಾರ ಮಧ್ಯಪ್ರವೇಶಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ.