ಬೆಂಗಳೂರು: ಶಿಕ್ಷಣ ಸಚಿವರ ಮನೆ ಮುಂದೆ ಆರ್ಎಸ್ಎಸ್ನ ಚಡ್ಡಿ ಸುಡುವ ಮೂಲಕ ಯುವ ಕಾಂಗ್ರೆಸ್ ಪ್ರತಿಭಟಿಸಿತ್ತು. ಇದನ್ನ ಗಂಭೀರವಾಗಿ ಪರಿಗಣಿಸಿದ ಸರ್ಕಾರ ಪ್ರತಿಭಟನಾಕಾರರನ್ನು ಬಂಧಿಸಿ ಕೇಸ್ ಹಾಕಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಚಡ್ಡಿ ಪ್ರತಿಭಟನೆಯನ್ನು ಕೇವಲ ಶಿಕ್ಷಣ ಸಚಿವರ ಮನೆ ಮುಂದೆ ಮಾತ್ರ ಅಲ್ಲ. ಸರ್ಕಾರ ಈಗ ಏನೋ ರೋಹಿತ್ ಚಕ್ರತೀರ್ಥ ಸಮಿತಿಯನ್ನು ಕೈಬಿಟ್ಟಿದೆ. ಆದ್ರೆ, ಪಠ್ಯ ಪರಿಷ್ಕರಣೆ ಕೈಬಿಡೋವರೆಗೂ ಹೋರಾಟ ನಡೆಸೋದಾಗಿ ಕಾಂಗ್ರೆಸ್ ನಾಯಕರು ಗುಡುಗಿದ್ದಾರೆ. ಹಾಗೇ ಚಡ್ಡಿ ಹೋರಾಟ ಮುಂದುವರಿಸಿ ಎಲ್ಲಾ ಜಿಲ್ಲಾ ಕೇಂದ್ರದಲ್ಲೂ ಹೋರಾಟ ನಡೆಸೋದಾಗಿ ಕಾಂಗ್ರೆಸ್ ನಿರ್ಧಾರ ಮಾಡಿದೆ. ಅಲ್ಲದೇ, ಪಠ್ಯ ಪರಿಷ್ಕರಣೆ ಬಗ್ಗೆ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದು, ನೀವು ನಾರಾಯಣಗುರು, ಅಂಬೇಡ್ಕರ್, ಕುವೆಂಪು ಪಠ್ಯವನ್ನು ಕಡೆಗಣಿಸಲಾಗಿದೆ. ಪ್ರತಿಭಟನೆ ನಡೆಸುತ್ತಿರೋರು ಅನ್ಯಧರ್ಮಿಯರಲ್ಲ. ಹಿಂದೂಗಳಾಗಿದ್ದಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಚಡ್ಡಿ ವಿರುದ್ದದ ಹೋರಾಟವನ್ನು ಕಾಂಗ್ರೆಸ್ ಚುರುಕುಗೊಳ್ಳಲು ನಿರ್ಧರಿಸಿದೆ. ಆದ್ರೆ ಬಿಜೆಪಿ ಈ ಹೋರಾಟವನ್ನು ಬೇರೆಯದೇ ರೀತಿಯಲ್ಲಿ ವ್ಯಾಖ್ಯಾನಿಸುತ್ತಿದೆ. ಹೀಗೆ ಆರ್ಎಸ್ ಎಸ್ ವಿರುದ್ಧ ಹೋರಾಟ ಮಾಡಿದ್ದವರೆಲ್ಲ ಮನೆ ಸುಟ್ಟುಕೊಂಡಿದ್ದಾರೆ. ಆರ್ಎಸ್ಎಸ್ ತಂಟೆಗೆ ಬಂದ್ರೆ ಕಾಂಗ್ರೆಸ್ಗೆ ಡ್ಯಾಮೇಜ್ ಆಗಲಿದೆ. ಈ ಮೂಲಕ ಆರ್ ಎಸ್ ಎಸ್ ಟೀಕಿಸಿ ಕಾಂಗ್ರೆಸ್ ತನ್ನ ಹಳ್ಳವನ್ನು ತಾನೇ ತೋಡಿಕೊಳ್ಳುತ್ತಿದೆ ಅಂತ ಬಿಜೆಪಿ ಲೆಕ್ಕಾಚಾರ ಹಾಕುತ್ತಿದೆ. ಈ ಕುರಿತು ಮಾತನಾಡಿದ ಸಚಿವ ಅಶೋಕ್ ನೀವೆಲ್ಲಾ ಚುನಾವಣೆಗೆ ಹೋಗ್ತಿದ್ದಿರಿ. ಹುಷಾರಾಗಿರಿ. ಆರ್ ಎಸ್ ಎಸ್ ಟೀಕೆ ಮಾಡಿದ್ರೆ ಹುಷಾರ್, ಬಾದಾಮಿಯಲ್ಲಿ ಸ್ವಲ್ಪ ಅಂತರದಲ್ಲಿ ಗೆದ್ದಿದ್ದಿರಿ. ಮುಂದೆ ಅದನ್ನು ಕಳೆದುಕೊಳ್ತೀರಿ ಎಂದು ಸಿದ್ದರಾಮಯ್ಯಗೆ ಎಚ್ಚರಿಕೆ ರವಾನಿಸಿದ್ದಾರೆ.
ಕಾಂಗ್ರೆಸ್ನಿಂದ RSS ಸಮವಸ್ತ್ರ ಸುಡುವ ಅಭಿಯಾನದ ಬಗ್ಗೆ ಅರುಣ್ ಸಿಂಗ್, ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಗೊಂದಲಗೊಂಡಿದೆ. ಕಾಂಗ್ರೆಸ್ ನವ್ರಿಗೆ ಬುದ್ಧಿ ಭ್ರಮಣೆ ಆಗಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಕಿಡಿಕಾರಿದ್ರು. RSS ಒಂದು ಪವಿತ್ರ ಸಂಸ್ಥೆ. ಇಂತಹ ಪವಿತ್ರ ಸಂಸ್ಥೆಯ ಅಪಮಾನ ಮಾಡುವ ಕೆಲಸ ಕಾಂಗ್ರೆಸ್ ಮಾಡ್ತಿದೆ. ಹೀಗಾಗಿಯೇ ದೇಶದಲ್ಲಿ ಕಾಂಗ್ರೆಸ್ ಮುಳುಗ್ತಿದೆ. ಇಂಥ ಪವಿತ್ರ ಸಂಸ್ಥೆಗೆ ಅವ್ರು ಅಪಮಾನ ಮಾಡಿದ್ರೆ, ಜನ ಕಾಂಗ್ರೆಸ್ಗೆ ಅಪಮಾನ ಮಾಡ್ತಾರೆ. ರಾಜ್ಯಸಭೆ ಚುನಾವಣೆಯಲ್ಲಿ ನಾವು ಮೂರೂ ಸ್ಥಾನ ಗೆಲ್ತೇವೆ. ರಾಜ್ಯದಲ್ಲಿ ಬೊಮ್ಮಾಯಿ ನೇತೃತ್ವದಲ್ಲಿ ಸರ್ಕಾರ ಉತ್ತಮ ಕೆಲಸ ಮಾಡ್ತಿದೆ ಎಂದರು.
ಕಾಂಗ್ರೆಸ್ ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಲು ಮುಂದಾಗಿದೆ. ಹೀಗಾಗಿ ರಾಜ್ಯಾದ್ಯಂತ ಹೋರಾಟಕ್ಕೆ ಮುಂದಾಗಿ ಜನಾಭಿಪ್ರಾಯ ಮೂಡಿಸಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ. ಇದಕ್ಕೆ ಸ್ವಾಮೀಜಿಗಳು, ಸಮುದಾಯ ಮುಖಂಡರು ಬೆಂಬಲಿಸಿದ್ದು ಹೋರಾಟ ಎಲ್ಲಿಗೆ ಹೋಗಿ ನಿಲ್ಲುತ್ತದೆ ನೋಡ ಬೇಕಾಗಿದೆ.