Sunday, May 19, 2024

ನಾಲ್ಕೇ ದಿನಕ್ಕೆ ಕಲಾಪ ಖಾಲಿ ಖಾಲಿ..!

ಬಜೆಟ್ ಅಧಿವೇಶನ ಶುರುವಾಗಿ ಇನ್ನೂ ನಾಲ್ಕು ದಿನ ಕಳೆದಿಲ್ಲ. ಆಗ್ಲೇ ಶಾಸಕರ ನಿರಾಸಕ್ತಿ ಎದ್ದು ಕಾಣ್ತಿದೆ. ಬಹುತೇಕ ಶಾಸಕರು ಸದನಕ್ಕೆ ಗೈರಾಗ್ತಿದ್ದಾರೆ. ಮತ್ತೊಂದು ಕಡೆ ಸರ್ಕಾರ ಲೋಪದೋಷ ಎತ್ತಿ ಹಿಡಿಯಬೇಕಾದ ಪ್ರತಿಪಕ್ಷ ನಾಯಕರು, ಇವತ್ತು ಕೈ ಕೊಟ್ಟಿದ್ದಾರೆ. ಎರಡು ದಿನ ಗೈರಾಗಿದ್ದ ಹೆಚ್‌ಡಿಕೆ ಇಂದು ನೀರಾವರಿ ಯೋಜನೆಗಳ ಬಗ್ಗೆ ಗಂಭೀರವಾಗಿ ಭಾಷಣ ಮಾಡಿದ್ರು. ಸರ್ಕಾರಕ್ಕಿಂತ ವಿರೋಧ ಪಕ್ಷದ ವಿರುದ್ಧವೇ ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ರು.

ಇನ್ನು ಬಜೆಟ್ ಅಧಿವೇಶನ ಪ್ರಾರಂಭವಾಗಿ ನಾಲ್ಕು ದಿನಗಳಾಗಿಲ್ಲ. ಆಗಲೇ ಶಾಸಕರ ನಿರಾಸಕ್ತಿ ಎದ್ದು ಕಾಣ್ತಿದೆ. ಕಲಾಪಕ್ಕೆ ಬಹುತೇಕ ಶಾಸಕರು, ಸಚಿವರು ಗೈರಾಗಿದ್ರು. ಗಮನಾರ್ಹ ಎಂಬಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಡಿಕೆಶಿಯೂ ಗೈರಾಗಿದ್ರು. ಸಚಿವರು,ಅಧಿಕಾರಿಗಳ ಗೈರಿಗೆ ಸ್ವಪಕ್ಷೀಯ ನಾಯಕರೇ ಗರಂ ಆದ್ರು. ಮಂತ್ರಿಗಳಾಗಬೇಕಾದ್ರೆ ಲಾಬಿ ಮಾಡ್ತಾರೆ. ಅವರಿವರ ಮನೆಗೆ ಸುತ್ತುತ್ತಾರೆ. ಆದ್ಮೇಲೆ ಸದನಕ್ಕೇ ಬರುವುದಿಲ್ಲ. ಇಂತವರನ್ನ ಮುಂದುವರಿಸೋದು ಎಷ್ಟು ಸರಿ ಅಂತ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ಹೊರ ಹಾಕಿದ್ರು. ಪ್ರಶ್ನೋತ್ತರದ ವೇಳೆ ಸಚಿವರು ಕಡ್ಡಾಯ ಹಾಜರಿರಬೇಕು. ಅಧಿವೇಶನಕ್ಕಿಂತ ಬೇರೆ ಕಾರ್ಯಕ್ರಮವೇ ಅವರಿಗೆ ಮುಖ್ಯವಾಯ್ತೇ ಅಂತ ಸ್ಪೀಕರ್ ಕಾಗೇರಿ ಕೂಡ ಅಸಮಾಧಾನಗೊಂಡ್ರು.

ಇನ್ನು ಬಜೆಟ್ ಚರ್ಚೆ ವೇಳೆ ಪದೇ ಪದೇ ಕುಮಾರಸ್ವಾಮಿ ಸಿದ್ರಾಮಯ್ಯನವರ ಹೆಸರನ್ನ ಎಳೆದು ತರ್ತಿದ್ರು. ಇದಕ್ಕೆ ಆಕ್ಷೇಪಿಸಿದ ಪ್ರತಿಪಕ್ಷ ಉಪನಾಯಕ ಖಾದರ್ ನೀವು ಸರ್ಕಾರದ ಬಜೆಟ್ ಮೇಲೆ ಚರ್ಚೆ ಮಾಡ್ತಿದ್ದಿರೋ, ಇಲ್ಲ ಪ್ರತಿಪಕ್ಷ ನಾಯಕರ ಬಗ್ಗೆ ಚರ್ಚೆ ಮಾಡ್ತಿದ್ದೀರೋ ಎಂದು ಕಾಲೆಳೆದ್ರು. ಈ ವೇಳೆ ಬಿಜೆಪಿ ಶಾಸಕರು ಹೆಚ್ಡಿಕೆ ಪರ ನಿಂತ್ರು. ಬಿಜೆಪಿ ಶಾಸಕರ ಬೆಂಬಲದ ಬಗ್ಗೆ ಕಿಡಿ ಕಾರಿದ ಖಾದರ್, ನೋಡಿ ಜೆಡಿಎಸ್ ಬಿಜೆಪಿ ಬಿ.ಟೀಮ್ ಅನ್ನೋದು ಇದ್ರಿಂದ ಸಾಬೀತಾಗ್ತಿದೆ ಎಂದು ಮೂದಲಿಸಿದ್ರು. ಈ ವೇಳೆ ಸದನದಲ್ಲಿ ಭಾರಿ ಸದ್ದುಗದ್ದಲವೇ ನಡೆದು ಹೋಯ್ತು.

ವಿಧಾನಸಭೆ ಕಲಾಪಕ್ಕಿಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗೈರಾದ್ರು. ಉಕ್ರೇನ್ ನಲ್ಲಿ ಮೃತ ಪಟ್ಟ ನವೀನ್ ನಿವಾಸಕ್ಕೆ ತೆರಳಿದ್ದ ಹಿನ್ನೆಲೆ ಸದನದ ಕಲಾಪದಲ್ಲಿ ಭಾಗಿಯಾಗಲಿಲ್ಲ. ಆದ್ರೆ ಕಳೆದ ಎರಡು ದಿನ ಹಾಜರಾಗದಿದ್ದ ಕುಮಾರಸ್ವಾಮಿ ಇಂದು ಹಾಜರಾದ್ರು. ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನ ವ್ಯಕ್ತಪಡಿಸಿದ್ರು. ಸರ್ಕಾರಕ್ಕೆ ಸಲಹೆಗಳನ್ನೂ ಕೊಟ್ರು. ವಿಷ್ಯ ಇದಲ್ಲ ಸಿದ್ರಾಮಯ್ಯ ಇದ್ರೆ ಹೆಚ್ಡಿಕೆ ಇರಲ್ಲ. ಇವರಿದ್ರೆ ಅವ್ರು ಇರಲ್ಲ. ಇದು ಕುತೂಹಲಕ್ಕೆ ಕಾರಣವಾಗಿದೆ.

ಜಿಎಸ್‌ಟಿ ವಿಚಾರದಲ್ಲಿ ರಾಜ್ಯಗಳಿಗೆ ಅನ್ಯಾಯವಾಗ್ತಿದೆ. ನಮ್ಮ ಹಕ್ಕನ್ನು ನಾವೇ ಕಳೆದುಕೊಳ್ತಿದ್ದೇವೆ. ಹಗ್ಗ, ಕುತ್ತಿಗೆಯನ್ನು ನಾವೇ ಕೇಂದ್ರಕ್ಕೆ ಕೊಟ್ಟಿದ್ದೇವೆ. ಅವರು ಯಾವಾಗ ಬೇಕಾದ್ರೂ ರಾಜ್ಯಗಳನ್ನು ನೇಣು ಹಾಕಬಹುದು ಅಂತ ಕೇಂದ್ರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ರು.

ನಾನು ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಲ್ಲ. ತಾಜ್ ವೆಸ್ಟೆಂಡ್ ವಾಸ್ತವ್ಯವೂ ಇಲ್ಲ. ನಾನು‌ ನನ್ನ ಕರ್ಮಭೂಮಿಯಲ್ಲೇ ಮುಂದೆ ಜೀವನ ಕಳೆಯುತ್ತೇನೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ರು.

ಕಳೆದ ಎರಡು ದಿನ ಸಿದ್ದರಾಮಯ್ಯ ಬಜೆಟ್ ಮೇಲೆ ಮಾತನಾಡಿದ್ರು. ಇವತ್ತು ಕುಮಾರಸ್ವಾಮಿ ಬಜೆಟ್ ಮೇಲೆ ಮಾತನಾಡಿದ್ರು ಕೆಲವು ಕಡೆ ಸರ್ಕಾರವನ್ನು ತೆಗಳಿದ್ರು. ಹಲವು ಕಡೆ ಕಾಂಗ್ರೆಸ್ ನಾಯಕರನ್ನ ಕೆಣಕಿದ್ರು. ಮಧ್ಯೆ ಮಧ್ಯೆ ಕೆಲವು ಹಾಸ್ಯಪ್ರಸಂಗಗಳ ಹಾದುಹೋದ್ವು. ಇದ್ರ ಜೊತೆ ನೀರಾವರಿ ಯೋಜನೆಗಳ ಬಗ್ಗೆ ಗಂಭೀರ ಚರ್ಚೆಗಳೂ ಇವತ್ತಿನ ವಿಧಾನಸಭೆಯಲ್ಲಿ ನಡೆದವು.

ರಾಘವೇಂದ್ರ ವಿ ಎನ್. ಪೊಲಿಟಿಕಲ್ ಬ್ಯೂರೊ ಪವರ್ ಟಿವಿ ಬೆಂಗಳೂರು

RELATED ARTICLES

Related Articles

TRENDING ARTICLES