Sunday, May 19, 2024

ನಮ್ಮ ನಾಡು ನಮ್ಮ ಹೆಮ್ಮೆ.. ಇಲ್ಲಿ ಹುಟ್ಟಿದ ನಾವೇ ಧನ್ಯರು

ನಮ್ಮ ರಾಜ್ಯದ ಬಗ್ಗೆ ನಮಗೆ ತೀರಾ ಹೆಮ್ಮೆಯಾಗುವ ಸಂಗತಿಗಳು ಸಾಕಷ್ಟಿವೆ. ಜಾಗತಿಕ ಮಟ್ಟದಲ್ಲಿ ತನ್ನ ತನವನ್ನು ಉಳಿಸಿಕೊಳ್ಳುವಲ್ಲಿ ಈ ಕರುನಾಡು ಸಾಕಷ್ಟು ಕೊಡುಗೆ ನೀಡುತ್ತಲೇ ಬಂದಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ತನ್ನ ಕೊಡುಗೆಯನ್ನು ನೀಡುತ್ತ ಬರುವಲ್ಲಿ ಕರ್ನಾಟಕ ಸೈ ಎನಿಸಿಕೊಂಡಿದೆ.ಅದರಲ್ಲೂ ಮಾಹಿತಿ ತಂತ್ರಜ್ಞಾನದಲ್ಲಿ ರಾಜಧಾನಿ ಬೆಂಗಳೂರು ತನ್ನದೇ ಆದ ಕುರುಹು ಉಳಿಸಿಕೊಂಡಿದೆ. ಪ್ರವಾಸಿ ತಾಣಗಳ ಕಣಜವನ್ನೆ ತನ್ನ ಒಡಲಲ್ಲಿ ಇಟ್ಟುಕೊಂಡಿದೆ ಈ ನಮ್ಮ ಕರ್ನಾಟಕ. ಸಮತಟ್ಟು ಸಮುದ್ರ ಕಿನಾರೆಯ ಮೂಲಕ ಕಡಲು ತನ್ನ ಮಕ್ಕಳ ಅನ್ನದ ಕಣಜವಾಗಿದೆ. ನಿತ್ಯವೂ ಹಸಿರಿನಿಂದ ಕಂಗೊಳಿಪ ಪಶ್ಚಿಮ ಘಟ್ಟಗಳು ಅಪಾರ ಜೀವ ರಾಶಿಯ ಸಂಪತ್ತು ತನ್ನ ಮಡಿಲಲ್ಲಿ ಇರಿಸಿಕೊಂಡಿದೆ. ರಾಜ್ಯದಲ್ಲಿ ಅನೇಕ ನದಿ ತೋರೆಗಳು ಹುಟ್ಟಿವೆ ಸಮರ್ಥವಾಗಿ ತನ್ನ ಕರ್ತವ್ಯ ನಿಭಾಯಿಸುತ್ತವೇಯೇನೋ ಎನ್ನುವಂತೆ ಪೂರ್ವಾಭಿಮುಖ ಹಾಗೂ ಪಶ್ಚಿಮಾಭಿಮುಕವಾಗಿ ಹರಿದು ನೆಲವನ್ನು ಸಮೃದ್ಧವಾಗಿರಿಸಿವೆ.

ಶಿಲಾಯುಗದಿಂದಲೂ ನಮ್ಮ ನಾಡು ತನ್ನ ನೆಲೆಯನ್ನು ಸ್ಥಾಪಿಸುತ್ತಲೇ ಬಂದಿದೆ. ನಮ್ಮ ನಾಡನ್ನಾಳಿದ ಪ್ರಭುಗಳಾದ ಶಾತವಾಹನರು, ಕದಂಬರು, ಗಂಗರು, ಬಾದಾಮಿ ಚಾಲುಕ್ಯರು, ಆಲುಪರು, ರಾಷ್ಟ್ರಕೂಟರು, ಕಲ್ಯಾಣದ ಚಾಳುಕ್ಯರು, ಹೊಯ್ಸಳರು, ಸೇವುಣರು, ವಿಜಯನಗರದ ಅರಸರು, ಕಲಬುರಗಿ ಮತ್ತು ಬೀದರಿನ ಬಹಮನಿಯರು, ವಿಜಯಪುರದ ಆದಿಲ್‌ ಷಾಹಿಗಳು, ಬೀದರಿನ ಬರೀದ್ ಷಾಹಿಗಳು, ಮೈಸೂರಿನ ಒಡೆಯರು, ಕೆಳದಿ ಅರಸರು, ಚಿತ್ರದುರ್ಗ, ಮಾಗಡಿ, ಸುರಪು ಮಧುಗಿರಿ, ಬಿಜ್ಜಾವರ, ಗುಮ್ಮನಾಯಕನಹಳ್ಳಿ ಮೊದಲಾದ ಸ್ಥಳಗಳ ಪಾಳೆಪಟ್ಟುಗಳನ್ನಾಳಿದ ಪಾಳೆಯಗಾರರು ಸಾಕಷ್ಟು ಕೊಡುಗೆಗಳನ್ನು ನಮ್ಮ ನೆಲಕ್ಕೆ ನೀಡಿದ್ದಾರೆ. ಇವರೆಲ್ಲರೂ ತಮ್ಮ ತಮ್ಮ ಕಾಲದಲ್ಲಿ ಬೆರಗುಮೂಡಿಸುವ ಕೋಟೆಕೊತ್ತಲಗಳ ನಿರ್ಮಾಣ ಮಾಡಿದ್ದಾರೆ. ಕುಸುರಿ ಕೆತ್ತನೆಯ ವಾಸ್ತುಶಿಲ್ಪಗಳು, ಭವ್ಯ ಮಸೀದಿಗಳು ಹಾಗೂ ಹಿಂದೂ-ಮುಸ್ಲಿಂ ಶೈಲಿಯ ಸ್ಮಾರಕಗಳನ್ನು ನಿರ್ಮಿಸಿದ್ದಾರೆ.

ಪೋರ್ಚುಗೀಷರು ಇಂಗ್ಲೀಷರ ಆಗಮನದ ನಂತರ ಯೂರೋಪಿನ ಪುನರುತ್ಥಾನ ವಾಸ್ತುಶಿಲ್ಪವನ್ನು ನಮ್ಮ ಕರುನಾಡಿಗೆ ಪರಿಚಿತವಾಗಿದೆ. ಅದರ ಪರಿಣಾಮ ಆಕರ್ಷಕ ಚರ್ಚ್‌ಗಳು, ಆಶ್ಚರ್ಯ ಮೂಡಿಸುವ ರೀತಿಯ ಸಾರ್ವಜನಿಕ ಕಟ್ಟಡಗಳು ತಲೆಯೆತ್ತಲು ಕಾರಣವಾಗಿತ್ತು. ರಾಷ್ಟ್ರೀಯ ಉದ್ಯಾನ, ವನ್ಯಜೀವಿಪಕ್ಷಿಧಾಮಗಳಲ್ಲಿ ಆನೆ, ಹುಲಿ, ಕಾಡುಕೋಣ, ಜಿಂಕೆ, ಹಂಸ, ನವಿಲು ಮೊದಲಾದ ಕಾಡುಪ್ರಾಣಿಗಳು ನಮ್ಮ ನಾಡಿಗೆ ಸದ್ದಿಲ್ಲದೆ ಗರಿತಂದು ಕೊಟ್ಟಿವೆ. ಕರ್ನಾಟಕವು ಶ್ರೀಗಂಧದ ಸುಗಂಧಯುಕ್ತ ವೃಕ್ಷಗಳಿಗೆ, ವಿಶಾಲವಾದ ತಣ್ಣೆರಳಲನ್ನು ನೀಡುವ ಅರಳಿ, ಆಲ, ಅಶ್ವತ್ಥ ಮೊದಲಾದ ಮರಗಳಿಗೆ ಹೆಸರಾಗಿದೆ. ಆಧ್ಯಾತ್ಮಕ್ಷೇತ್ರದಲ್ಲಿ ಮನಃಶಾಂತಿ ನೀಡುವ ವಿವಿಧ ಮತಗಳ ಸಾಧು-ಸಂತರು ಇಲ್ಲಿದ್ದಾರೆ. ಪ್ರಮುಖ ಎಲ್ಲಾ ಧರ್ಮಗಳ ಬಹುತೇಕ ದರ್ಮಗುರಗಳ ಐಕ್ಯ ಸ್ಥಳವೂ ಇಲ್ಲಿದೆ.

ದೇಶದ ಅತೀ ಎತ್ತರದ ಜೋಗ ಜಲಪಾತ ಸೇರಿದಂತೆ ಇನ್ನೂ ನೂರಾರು ಜಲಪಾತಗಳು ನಮ್ಮಲ್ಲಿವೆ. ಗಗನಚುಕ್ಕಿ ಮತ್ತು ಭರಚುಕ್ಕಿ, ಅಬ್ಬಿ ಇರ್ಪು, ಹೆಬೆ,ಮಾಣಿಕ್ಯಧಾರಾ, ಮಾಗೋಡು,ಛಾಯಾಭಗವತಿ, ಎತ್ತಿಪೋತಜಲಪಾತ, ಗುರುಮಿಠಕಲ್ ಬಳಿಯಜಲಪಾತ, ಕೋಟಿಕಲ್ ಜಲಪಾತ, ಕಬ್ಬರಗಿ ಜಲಪಾತ, ಮುಂತಾದವು ಉಲ್ಲೇಖಾರ್ಹವಾಗಿವೆ. ಇನ್ನೂ ಕಲ್ಲತ್ತಿ ಜಲಪಾತ, ಚುಂಚನಕಟ್ಟೆ ಜಲಪಾತ, ಉಂಚಳ್ಳಿ ಜಲಪಾತಕೆಪ್ಪ ಜೋಗ, ಉಂಚಳ್ಳಿ , ಗೋಕಾಕ ಜಲಪಾತ, ವಜ್ರಪೋಹ ಜಲಪಾತ, ದೂಧ್‌ಸಾಗರ್ ಜಲಪಾತ, ಮುತ್ಯಾಲಮಡು ಜಲಪಾತ ಇತ್ಯಾದಿ ಜಲಪಾತಗಳು ನಮ್ಮ ಹೆಮ್ಮೆಯ ಪ್ರವಾಸಿ ತಾಣಗಳಾಗಿವೆ.

ನಮ್ಮ ಕರ್ನಾಟಕದಲ್ಲಿ ತಂಪಾದ ಅನೇಕ ಗಿರಿಧಾಮಗಳಿದ್ದು ಅವುಗಳಲ್ಲಿ ಪ್ರಮುಖವಾಗಿದ್ದು ಕುದುರೆಮುಖ, ಬಿಳಿಗಿರಿ ರಂಗನ ಬೆಟ್ಟ, ಹಿಮವತ್ ಗೋಪಾಲಸ್ವಾಮಿಬೆಟ್ಟ, ನಂದಿದುರ್ಗ, ಆಗುಂಬೆ, ಸಿದ್ಧರ ಬೆಟ್ಟ, ರಾಮದುರ್ಗ, ಜೋಗಿಮಟ್ಟಿ ಪ್ರಮುಖವಾಗಿವೆ.

ಹರಿದು ಹಾಳಾಗುವ ನೀರನ್ನು ಹಿಡಿದಿಟ್ಟುಕೊಳ್ಳುವ ಸಕಷ್ಟು ಆಣೆಕಟ್ಟೆಗಳು ನಮ್ಮ ನಾಡಿನಲ್ಲಿವೆ. ಕೃಷ್ಣ ರಾಜ ಸಾಗರ (ಕನ್ನಂಬಾಡಿ ಕಟ್ಟೆ ಮಂಡ್ಯಜಿಲ್ಲೆ), ನಾರಾಯಣಪುರ ಹಾಗೂ ಆಲಮಟ್ಟಿ (ವಿಜಯಪುರಜಿಲ್ಲೆ), ತುಂಗಭದ್ರ ಜಲಾಶಯ ಹೊಸಪೇಟೆ, ಚಂದ್ರಪಳ್ಳಿ (ಕಲಬುರಗಿ ಜಿಲ್ಲೆ), ನವಿಲು ತೀರ್ಥ (ಬೆಳಗಾವಿಜಿಲ್ಲೆ), , ಲಕ್ಕವಳ್ಳಿ, ಬೀಚನಹಳ್ಳಿ,ಮಾರಿಕಣಿವೆ,ಗಾಜನೂರು, ಹಿಡಕಲ್, ವಾರಂಜಾ, ವಾರಾಹಿ, ಸೂಫಾ, ಕದ್ರಾ, ಕೊಡಸಳ್ಳಿ ಮುಂತಾದವು ರಾಜ್ಯದಲ್ಲಿರುವ ಪ್ರಮುಖ ಅಣೆಕಟ್ಟೆಗಳಾಗಿದ್ದು,ಪ್ರವಾಸಿಗರಿಗೆ ಮುದ ನೀಡುತ್ತದೆ.ಇನ್ನೂ ಪ್ರಕೃತಿಯೇ ನಿರ್ಮಿಸಿದ ಕಡಲ ಕಿನಾರೆಗಳು ನಮ್ಮ ರಾಜ್ಯಕ್ಕೆ ಹೆಮ್ಮೆತರುವಂತಹದ್ದಾಗಿದೆ. ಮಂಗಳೂರು ಬಳಿಯ ಒಂದು ದ್ವೀಪದಂತಿರುವ ಬೆಂಗ್ರೆಮತ್ತು ಉಲ್ಲಾಳ ಬಿಚ್ಗಳು, ಮಂಗಳೂರಿನಿಂದ ಅನತಿ ದೂರದಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ಟೆಕ್ನಾಲಜಿ (ಸೂರತ್ಕಲ್ ರೀಜನಲ್ಎಂಜಿನಿಯರಿಂಗ್)ಕಾಲೇಜಿನ ಬಳಿಯ ಲೈಟ್‌ಹೌಸ್ ತೀರ, ತಣ್ಣೀರುಬಾವಿಯಕಡಲತೀರ, ಉಡುಪಿಯ ಬಳಿಯ ಮಲ್ಪೆಗಳಲ್ಲಿ ನೀಡಿದಾದಕಡಲಕಿನಾರೆಯಿದೆ, ಸಮೀಪವೇ ದ್ವೀಪವೂ ಇದೆ. ಕುಂದಾಪುರ ತಾಲೂಕಿನ ಮರವಂತೆ ಒಂದು ಕಡೆ ಸುಂದರ ಕಡಲಂಚನ್ನು ಇನ್ನೊಂದು ಕಡೆ ನದಿಯನ್ನು ಹೊಂದಿದೆ. ಉತ್ತರ ಕನ್ನಡದ ಪಾವನಕ್ಷೇತ್ರ ಗೋಕರ್ಣವೂ ಸಹ ಉದ್ದನೆಯಕಡಲ ತೀರವನ್ನು ಹೊಂದಿದೆ. ಕಾರವಾರವು ತನ್ನ ಸುತ್ತ ಅನೇಕ ಕಿನಾರೆಗಳನ್ನು ಹೊಂದಿದ್ದು ರವೀಂದ್ರನಾಥ ಠಾಗೋರರುಕಾರವಾರದ ಕಡಲ ಕಿನಾರೆ ಇದೆ. ಇವು ಪ್ರವಾಸಿಗಳಿಗೆ ಸಮುದ್ರದನಂಟನ್ನು ಒದಗಿಸುವುದರ ಜೊತೆಗೆ ಸಮುದ್ರ ಆಹಾರದ ರುಚಿನೋಡುವ ಅವಕಾಶವನ್ನೂ ಒದಗಿಸುತ್ತವೆ.

ಕಡಲನಲ್ಲಿ ಮನಮೋಹಕವಾದ ಕೆಲವುದ್ವೀಪಗಳನ್ನು ಹೊಂದಿದೆ. ಅವುಗಳಲ್ಲಿ ಮಲ್ಪೆ ಬಳಿಯ ಸೇಂಟ್ಮೇರಿ ದ್ವೀಪ ಅಥವಾ ತೊನ್ಸೆಪಾರು ವಿಶಿಷ್ಟವಾದ ಕಂಬಮಾದರಿಯ ಸ್ತಂಭಾಕೃತಿಯ ಸಂದುಗಳು ನಿಸರ್ಗದತ್ತವಾದ ಶಿಲಾರಚನೆಯಾಗಿವೆ. ಮುರುಡೇಶ್ವರದ ಬಳಿಯ ನೇತ್ರಾಣಿ ದ್ವೀಪಮತ್ತೊಂದು ಆಕರ್ಷಕ ಸ್ಥಳ. ಹೊನ್ನಾವರದ ಬಳಿಯ ಬಸವರಾಜದುರ್ಗ. ಕಾರವಾರದ ಬಳಿ ದೇವಗಡ ಮತ್ತು ಕೂರ್ಮಗಡ ಎಂಬ ಎರಡು ದ್ವೀಪಗಳಿವೆ.

ಕೋಟೆಗಳಪ್ರಾಚೀನತೆಯನ್ನು ನೂತನ ಶಿಲಾಯುಗ-ಬೃಹತ್ ಶಿಲಾಯುಗ ಸಂಸ್ಕೃತಿಯಷ್ಟೇ ಹಿಂದಕ್ಕೆ ಗುರುತಿಸಬಹುದಾದರೂ, ಚಾರಿತ್ರಿಕವಾಗಿಸನ್ನತಿಯು ಅತ್ಯಂತ ಪ್ರಾಚೀನ ಕೋಟೆಯ ಕುರುಹನ್ನುಹೊಂದಿದ್ದರೆ, ಮೈಸೂರಿನ ಕೋಟೆ ಅರ್ವಾಚಿನ ಕಾಲದನಿರ್ಮಾಣವಾಗಿದೆ. ಸಮೀಕ್ಷೆಯೊಂದರ ಪ್ರಕಾರ ಕರ್ನಾಟಕದಲ್ಲಿಸುಮಾರು ೫೦೦ ಕೋಟೆಗಳಿವೆಯೆಂದು ಅಂದಾಜಿಸಲಾಗಿದೆ.ಪ್ರಾಚೀನ ರಾಜಧಾನಿಗಳಾದ ಬನವಾಸಿ, ಬಾದಾಮಿ, ಐಹೊಳೆ,ತಲಕಾಡು, ಮಳಕೇಡ, ಮಧ್ಯಕಾಲೀನ ರಾಜಧಾನಿಗಳಾದಬಸವಕಲ್ಯಾಣ, ವಿಜಯನಗರ(ಹಂಪೆ), ಕಲಬುರಗಿ, ಬೀದರ್,ವಿಜಯಪುರ, ಶ್ರೀರಂಗಪಟ್ಟಣ, ಕೆಳದಿ, ಚಿತ್ರದುರ್ಗ, ಮೈಸೂರುಇತ್ಯಾದಿ ಸ್ಥಳಗಳಲ್ಲಿ ಕೋಟೆಗಳಿವೆ.ಆಯಕಟ್ಟಾದ ಸ್ಥಳಗಳಲ್ಲಿಕೋಟೆಗಳನ್ನು ನಿರ್ಮಿಸಲಾಗುತ್ತಿದ್ದು, ಗಿರಿದುರ್ಗ, ವನದುರ್ಗ,ಜಲದುರ್ಗ, ನೆಲದುರ್ಗ ಮುಂತಾದ ಕೋಟೆಗಳನ್ನು ವಿದ್ವಾಂಸರುಈಗಾಗಲೇ ನಾನಾ ರೀತಿಯಲ್ಲಿ ವರ್ಗೀಕರಿಸಿದ್ದಾರೆ. ನಂದಿಬೆಟ್ಟ (ಚಿಕ್ಕಬಳ್ಳಾಪುರ ಜಿಲ್ಲೆ), ಸಾವನದುರ್ಗ (ರಾಮನಗರ ಜಿಲ್ಲೆ ಹೀಗೆ ಇನ್ನೂ ಅನೇಕ ಗಿರಿಧಾಮಗಳು ನಮ್ಮ ರಾಜ್ಯದಲ್ಲಿ ಇದೆ.

ನಾಡಿನ ಹೆಜ್ಜೆ ಹೆಜ್ಜೆಗಳಲ್ಲಿ ಒಂದಿಲ್ಲೊಂದು ವಿಶೇಷತೆ ಇದ್ದೇಇದೆ. ಅದು ನಮ್ಮ ಹೆಮ್ಮೆಯೇ ಹೌದು. ಇದು ಅಧ್ಯಯನ ಮಾಡುವವರಿಂದ ಆದಿ ಯಾಗಿ ಪ್ರವಾಸಿಗರ ವರೆಗೆ ಆಕರ್ಶಿಸುತ್ತದೆ. ಇಲ್ಲಿನ ಕಣ ಕಣದಲ್ಲಿ ಕನ್ನಡ ಕಂಪು ಮನೆ ಮಾಡಿರುವದರಿಂದ ಇದೊಂದು ಕನ್ನಡದ ಕಣಜವೂ ಹೌದು. ಇಂಥಹ ಹೆಮ್ಮೆಯ ಕನ್ನಡ ನಾಡಿನಲ್ಲಿ ಜನಿಸದ ನಾವೇ ಧನ್ಯರಲ್ಲವೇ..

ಶ್ರೀನಾಥ್ ಜೋಶಿ ಪವರ್ ಟಿವಿ.

RELATED ARTICLES

Related Articles

TRENDING ARTICLES