Sunday, May 19, 2024

ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಅನಾವರಣ

ಕಾಲ ಭೈರವನ ಗಿರಿ ಚಂದ, ಅಲ್ಲಿ ಕುಣಿಯುವ ನವಿಲ ನ್ಯಾಟ್ಯ ಇನ್ನೂ ಅಂದ. ಈಗಾಗಲೇ ನಾವು ಯಾವ ಕ್ಷೇತ್ರದ ಬಗ್ಗೆ ಹೇಳ್ತಿದೀವಿ ಅಂತ ಗೊತ್ತಾಗಿರ್ಬೇಕಲ್ವಾ? ಹೌದು.. ಕಾಲ ಭೈರವ ಎಂದಾಕ್ಷಣ ನೆನಪಿಗೆ ಬರೋದೆ ಶ್ರೀ ಕ್ಷೇತ್ರ ಆದಿಚುಂಚನಗಿರಿ. ಶ್ರೀ ಕ್ಷೇತ್ರದಲ್ಲಿ ಇನ್ನೆರಡು ದಿನ ಯುವ ಕಲರವ ನಡೆಯಲಿದೆ.

ಜನಪದ ಕಲಾವಿದರಿಂದ ತುಂಬಿರೋ ಚುಂಚನಗಿರಿಯ ಆರಾಧ್ಯ ದೈವ ಕಾಲಭೈರವನ ದೇವಸ್ಥಾನದ ಪಡಸಾಲೆ, ಕೇಳುಗರ ಕರ್ಣಗಳನ್ನು ತಣಿಸುತ್ತಿರುವ ತಮಟೆ, ನಗಾರಿ ವಾದ್ಯಗಳು ಕಣ್ಮನ ಸೆಳೆಯುವ ಪಟ ಕುಣಿತ, ವೀರಭದ್ರ ಕುಣಿತ, ಕಂಸಾಳೆ, ಡೊಳ್ಳು ಕುಣಿತ, ವೀರಗಾಸೆ ಹಾಗೂ ಕೊಡವ ನೃತ್ಯ.

ಚುಂಚನಗಿರಿಯಲ್ಲಿ ಯುವಜನೋತ್ಸವ ಕಲಾ ರಸಿಕರ ಕಣ್ಮನ ಸೆಳೆಯುತ್ತಿದೆ. ದೀಪ ಬೆಳಗುವ ಮೂಲಕ ಯುವಜನೋತ್ಸವಕ್ಕೆ ಚಾಲನೆ ನೀಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ದೇಶದ ಅಭಿವೃದ್ಧಿ ಕುರಿತು ಯುವಕರಿಗೆ ಕರೆ ನೀಡಿದರು. ಇನ್ನು ಯುಕ,ಯುವತಿಯರಲ್ಲಿ ಹುದುಗಿರುವ ಹತ್ತು ಹಲವು ಬಗೆಯ ಪ್ರತಿಭೆಯ ಸೃಜನಶೀಲ ಅಭಿವ್ಯಕ್ತಿಗೆ ವೇದಿಕೆ ಕಲ್ಪಿಸಲು ಹಾಗೂ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸಲು ಈ ರಾಜ್ಯ ಮಟ್ಟದ ಯುವಜನೋತ್ಸವ ಆಚರಿಸಲಾಗುತ್ತಿದೆ.

ಕಾಲ ಭೈರವ ಈ ನೆಲದ ಭೂ ಒಡೆಯ. ಜೋಗಿ ಸಂಸ್ಕೃತಿಯ ಮೂಲಕ ಒಕ್ಕಲುತನವನ್ನು ಮಂಡ್ಯದ ಮಣ್ಣಿನಲ್ಲಿ ಬಿತ್ತಿದ ದೇವ ಪುರುಷ. ಈ ಪುರುಷನ ವೇಷವೇ ಜನಪದ ವೇಷ. ಕೈಯಲ್ಲಿ ಢಮರುಗ, ತ್ರಿಶೂಲ ಸಮೇತ ಮಣ್ಣಿನ ಸಂರಕ್ಷಣೆ ಮಾಡುತ್ತಿರುವ ಭೈರವನ ಸನ್ನಿಧಿ ಇಂದು ಮೂಲ ಜನಪದ ಸೊಗಡಿನಲ್ಲಿ ಕಂಗೊಳಿಸುತ್ತಿದೆ. ಕಾಲ ಭೈರವನೇ ಧರೆಗಿಳಿದು ಬಂದಂತೆ ಭಾಸ ವಾಗುತ್ತಿದೆ. ಜನಪದ ಕಲೆ ಸೇರಿದಂತೆ ವಿವಿಧ ಭಾಗಗಳಲ್ಲಿ ಸ್ಪರ್ಧೆಗಳು ನಡೆಯುತ್ತಿವೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ 1,750ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದಾರೆ. ಯುವಜನೋತ್ಸವದ ಪ್ರಮುಖ ಆಕರ್ಷಣೆಯೇ ಜನಪದ ಕಲಾ ಮೇಳವಾಗಿದೆ.

ಯುವಜನೋತ್ಸವದಲ್ಲಿ ಹಿಂದೂಸ್ತಾನಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ, ಭರತ ನಾಟ್ಯ, ಕಥಕ್, ಒಡಿಸ್ಸಿ, ಮಣಿಪುರಿ, ಕುಚುಪುಡಿ, ಹರ್ಮೋನಿಯಂ, ಗಿಟಾರ್, ಆಶು ಭಾಷಣ, ತಬಲಾ, ಸಿತಾರ್, ವೀಣೆ, ಕೊಳಲು, ಮೃದಂಗ, ಏಕಾಂಕ ನಾಟಕ, ಜಾನಪದ ನೃತ್ಯ ಮತ್ತು ಜಾನಪದ ಗೀತೆ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯುತ್ತಿವೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಸ್ಪರ್ಧಿಗಳು ಆಗಮಿಸಿದ್ದಾರೆ. ಕೊವಿಡ್​ ನಿಯಮಗಳನ್ನ ಪಾಲಿಸುವುದರ ಜೊತೆಗೆ ಶಿಸ್ತುಬದ್ಧವಾಗಿ ಯುವಜನೋತ್ಸವ ನಡೆಯುತ್ತಿದೆ.

RELATED ARTICLES

Related Articles

TRENDING ARTICLES