Monday, May 20, 2024

ಹುಬ್ಬಳ್ಳಿ-ಧಾರವಾಡ ಮೇಯರ್‌ ಆಯ್ಕೆಗೆ ಗ್ರಹಣ

ಧಾರವಾಡ ಮಹಾನಗರ ಪಾಲಿಕೆಗೆ ಚುನಾವಣೆಯಾಗಿ ಫಲಿತಾಂಶ ಹೊರಬಿದ್ದು ಮೂರು ತಿಂಗಳೇ ಕಳೆದಿದೆ. ಆದರೆ, ಉಪಮೇಯರ್ ಆಯ್ಕೆ ಮಾತ್ರ ಇನ್ನೂ ಆಗಿಲ್ಲ. ಇಷ್ಟು ವಿಳಂಬ ಯಾಕೆ ಎಂಬುದು ಜನತೆಯ ಪ್ರಶ್ನೆಯಾಗಿದೆ. ಪಾಲಿಕೆಗೆ ಆಯ್ಕೆಯಾದ್ರೂ ಅಧಿಕಾರ ಸಿಕ್ಕಿಲ್ಲ ಅಂತ ಚುನಾಯಿತರ ಅಳಲು ಒಂದೆಡೆಯಾದ್ರೆ, ಮತ್ತೊಂದೆಡೆ ಅಭಿವೃದ್ದಿ ಕಾಮಗಾರಿಗಳು ಕುಂಠಿತಗೊಂಡಿರೋದ್ರಿಂದ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಹೆಸರನ್ನು ನಗರಾಭಿವೃದ್ಧಿ ಇಲಾಖೆಯು ಕರ್ನಾಟಕ ಗೆಜೆಟ್​ನಲ್ಲಿ ಪ್ರಕಟಿಸಿದೆ. ಇದರಿಂದ ಆಯ್ಕೆಯನ್ನು ರಾಜ್ಯ ಸರ್ಕಾರ ಅಧಿಕೃತಗೊಳಿಸಿದಂತಾಗಿದೆ. ಮೇಯರ್ ಸ್ಥಾನ ಹಿಂದುಳಿದ ವರ್ಗ ಎ ಹಾಗೂ ಉಪ ಮೇಯರ್‌ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ. ಪಾಲಿಕೆಯ 82 ಸದಸ್ಯರ ಆಯ್ಕೆಗೆ ಸೆಪ್ಟೆಂಬರ್ 3ರಂದು ಮತದಾನ ನಡೆದು 6ರಂದು ಫಲಿತಾಂಶ ಪ್ರಕಟವಾಗಿತ್ತು. ಈಗ ಬರೊಬ್ಬರಿ ಮೂರು ತಿಂಗಳು ಕಳೆದರೂ ಮೇಯರ್ ಉಪಮೇಯರ್ ಆಯ್ಕೆ ಆಗ್ದೇ ಇರೋದು ನಗರದ ಅಭಿವೃದ್ಧಿಗೆ ಮಾರಕವಾಗಿದೆ. ಹೀಗಾಗಿ ಅವಳಿ ನಗರದ ಸಾರ್ವಜನಿಕರು ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ.

ಹು-ಧಾ ಮಹಾನಗರ ಪಾಲಿಕೆಗೆ 30 ತಿಂಗಳುಗಳಿಂದ ಚುನಾವಣೆ ನಡೆದಿರಲಿಲ್ಲ. ಇದೀಗ ಚುನಾವಣೆ ನಡೆದು ಬರೋಬ್ಬರಿ ಮೂರು ತಿಂಗಳು ಕಳೆದಿವೆ. ಆದ್ರೆ, ಇನ್ನೂ ಅಧಿಕಾರ ಸಿಕ್ಕಿಲ್ಲ ಎಂಬುದು ಆಯ್ಕೆಯಾದವರ ಅಳಲಾಗಿದೆ. ಅಲ್ದೆ ಈಗಾಗಲೇ ಮೇಯರ್ ಉಪಮೇಯರ್ ಚುನಾವಣೆ ನಡೆದು ಪಾಲಿಕೆಯಲ್ಲಿ ಸದ್ಯ ಜನಪ್ರತಿನಿಧಿಗಳ ಆಡಳಿತ ಅಸ್ತಿತ್ವದಲ್ಲಿ ಇರಬೇಕಿತ್ತು. ಹುಬ್ಬಳ್ಳಿಯವರೇ ಆದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದರೂ ಈ ವಿಳಂಬ ಯಾಕೆ ಎಂಬುದು ಜನತೆಯ ಪ್ರಶ್ನೆಯಾಗಿದೆ. ಈಗಲೂ ಅಧಿಕಾರಿಗಳು ನಮ್ಮ ಮಾತು ಕೇಳುತ್ತಿಲ್ಲ ಎಂಬುದು ಪಾಲಿಕೆಗೆ ಚುನಾಯಿತರಾಗಿರುವ ಬಹುತೇಕ ಸದಸ್ಯರ ಅಭಿಪ್ರಾಯವಾಗಿದೆ. ಸ್ಥಳೀಯ ಸಮಸ್ಯೆಗಳನ್ನು ಅಧಿಕಾರಿಗಳ ಮುಂದಿಡಲು ಅಧಿಕಾರ ಇರಬೇಕು. ಈಗ ಆಯ್ಕೆಯಾಗಿಯೂ ಅಧಿಕಾರ ಇಲ್ಲದಂತಾಗಿದೆ.

ಒಟ್ಟಾರೆ, ಪಾಲಿಕೆಗೆ ಚುನಾಯಿತ ಸದಸ್ಯರಿದ್ದರೂ ಅವರಿಗೆ ಯಾವುದೇ ಅಧಿಕಾರವಿಲ್ಲದೆ ಅವಳಿ ನಗರದ ಪ್ರತಿಯೊಂದು ವಾರ್ಡ್ ಗಳಲ್ಲಿಯೂ ಅಭಿವೃದ್ದಿ ಕಾರ್ಯಗಳು ಕುಂಠಿತಗೊಂಡಿರೋದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಇನ್ನಾದ್ರೂ ಸರ್ಕಾರ ಈ ಬಗ್ಗೆ ಗಂಭೀರವಾದ ನಿರ್ಧಾರ ತೆಗೆದುಕೊಳ್ಳುತ್ತಾ ಅಂತಾ ಕಾದುನೋಡ್ಬೇಕು.

RELATED ARTICLES

Related Articles

TRENDING ARTICLES