ಕೊಪ್ಪಳ: ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ರಾ ಅನ್ನೋ ಅನುಮಾನ ವ್ಯಕ್ತವಾಗಿದೆ. ಇದಕ್ಕೆ ಕಾರಣವಾಗಿರೋದು ಅವರ ಫೋಟೋ ಬಿಜೆಪಿ ನಾಯಕರ ಫ್ಲೆಕ್ಸ್ನಲ್ಲಿ ರಾರಾಜಿಸುತ್ತಿರುವುದು..!
ರಮೇಶ್ ಜಾರಕಿಹೊಳಿ ಮೈತ್ರಿ ಸರ್ಕಾರದ ವಿರುದ್ಧ ಬಂಡಾಯವೆದ್ದು ರಾಜೀನಾಮೆ ನೀಡುವ ಮೂಲಕ ಸರ್ಕಾರದ ಪತನಕ್ಕೆ ಮುಹೂರ್ತ ಇಟ್ಟಿದ್ದರು. ಅವರ ಈ ವರ್ತನೆ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು. ಮೈತ್ರಿ ಪತನದ ಬೆನ್ನಲ್ಲೇ ರಾಜೀನಾಮೆ ಅರ್ಜಿಯ ವಿಚಾರಣೆ ನಡೆಸಿದ್ದ ಅಂದಿನ ಸ್ಪೀಕರ್ ರಮೇಶ್ ಕುಮಾರ್ ಅವರು ಜಾರಕಿಹೊಳಿಯವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದರು.
ಈ ಎಲ್ಲಾ ಬೆಳವಣಿಗೆಗಳ ನಡುವೆ ರಮೇಶ್ ಜಾರಕಿಹೊಳಿ ಬಿಜೆಪಿ ಸೇರ್ತಾರೆ ಎಂಬ ಮಾತು ಕೇಳಿ ಬರ್ತಿತ್ತು. ಇದೀಗ ಅದಕ್ಕೆ ಪುಷ್ಠಿ ನೀಡುವಂತೆ ರಮೇಶ್ ಜಾರಕಿಹೊಳಿಯವರ ಭಾವಚಿತ್ರ ಬಿಜೆಪಿ ನಾಯಕರ ಭಾವಚಿತ್ರದೊಂದಿಗೆ ಒಂದೇ ಫ್ಲೆಕ್ಸ್ನಲ್ಲಿ ರಾರಾಜಿಸುತ್ತಿದೆ. ಕೊಪ್ಪಳದ ಬಿಜೆಪಿ ಯುವ ಮುಖಂಡ ಹಾಲೇಶ್ ಕಂದಾರಿ ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಅಭಿನಂದನೆ ಸಲ್ಲಿಸಲು ಹಾಕಿರುವ ಫ್ಲೆಕ್ಸ್ ನಲ್ಲಿ ರಮೇಶ್ ಜಾರಕಿಹೊಳಿ ಫೋಟೋ ಕೂಡ ಇದೆ. ಈ ಹಿನ್ನೆಲೆಯಲ್ಲಿ ಜಾರಕಿಹೊಳಿ ಬಿಜೆಪಿ ಸೇರಿದ್ರಾ ಅನ್ನೋ ಪ್ರಶ್ನೆ ಸಾರ್ವಜನಿಕವಲಯದಲ್ಲಿ ಮೂಡಿದೆ.