ಬೆಂಗಳೂರು : ಅನರ್ಹಗೊಂಡ ಶಾಸಕರಲ್ಲಿ ಐವರು ನಿನ್ನೆ ಮಧ್ಯರಾತ್ರಿ ಮುಂಬೈನಿಂದ ಬೆಂಗಳೂರಿಗೆ ವಾಪಸ್ ಬಂದಿದ್ದಾರೆ.
ಮಧ್ಯರಾತ್ರಿ 12.20ರ ಸುಮಾರಿಗೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬೈರತಿ ಬಸವರಾಜ್, ಮುನಿರತ್ನ, ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್ ಹಾಗೂ ಎಂಟಿಬಿ ನಾಗರಾಜ್ ಆಗಮಿಸಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಎಂಟಿಬಿ ನಾಗರಾಜ್, ‘ಸ್ಪೀಕರ್ ನಮ್ಮನ್ನು ಅನರ್ಹಗೊಳಿಸಿದ್ದಾರೆ. ಹಾಗಾಗಿ ನಾವು ಬೆಂಗಳೂರಿಗೆ ಬಂದಿದ್ದೇವೆ. ಕೆಲವು ಅನರ್ಹಗೊಂಡ ಶಾಸಕರು ಮುಂಬೈನಲ್ಲೇ ಇದ್ದಾರೆ. ಕೆಲವರು ಬೆಂಗಳೂರಿಗೆ ಬರ್ತಾರೆ. ಮತ್ತೆ ಕೆಲವರು ದೆಹಲಿಗೆ ಹೋಗುತ್ತಾರೆ ಎಂದರು.
ಅನರ್ಹತೆ ಪ್ರಶ್ನಿಸಿ ಎಲ್ಲರ ಪರವಾಗಿ ಬಿ.ಸಿ.ಪಾಟೀಲ್ ದೆಹಲಿಗೆ ತೆರಳಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಿದ್ದಾರೆ. ಮುಂದೆ ಏನಾಗುತ್ತದೆಯೋ ಕಾದು ನೋಡಬೇಕು ಎಂದು ಹೇಳಿದ ಅವರು, ಡಾ. ಸುಧಾಕರ್ ಈಗಾಗಲೇ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಬಿಜೆಪಿಯವರ ಜೊತೆ ನಾವಿನ್ನೂ ಯಾವುದೇ ಚರ್ಚೆ ನಡೆಸಿಲ್ಲ ಅಂತ ಸ್ಪಷ್ಟಪಡಿಸಿದ್ರು.