ಬೆಂಗಳೂರು: ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಮತ್ತೆ ಐವರು ಶಾಸಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಅತೃಪ್ತ ಶಾಸಕರ ಈ ನಿರ್ಧಾರ ದೋಸ್ತಿಗಳಿಗೆ ಶಾಕ್ ನೀಡಿದೆ.
ಕಳೆದ ಕೆಲದಿನಗಳಿಂದ ರಾಜ್ಯ ರಾಜಕೀಯದಲ್ಲಿ ಹಲವು ಹೈಡ್ರಾಮಗಳು ನಡೆಯುತ್ತಿವೆ. ಮೈತ್ರಿ ಪಕ್ಷದ 17 ಶಾಸಕರು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದು, ಮೈತ್ರಿ ಸರ್ಕಾರ ಆತಂಕದಲ್ಲಿದೆ. ದೋಸ್ತಿ ಪಕ್ಷಗಳ ನಾಯಕರು ಅತೃಪ್ತ ಶಾಸಕರನ್ನು ಮನವೊಲಿಸಿ ಸರ್ಕಾರ ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ.
ಈ ಹಿಂದೆ ರಾಜೀನಾಮೆಯನ್ನು ಅಂಗೀಕರಿಸದ ಸ್ಪೀಕರ್ ವಿರುದ್ಧ 10 ಜನ ಅತೃಪ್ತ ಶಾಸಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅದರ ಬೆನ್ನಲ್ಲೇ ಸ್ಪೀಕರ್ ಹಾಗೂ ಸರ್ಕಾರ ಕೂಡ ಸುಪ್ರೀಂಗೆ ಅರ್ಜಿಸಲ್ಲಿಸಿದ್ದರು. ಶುಕ್ರವಾರ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠ ಮಂಗಳವಾರದವರೆಗೆ ಯಥಾಸ್ಥಿತಿ ಕಾಪಾಡುವಂತೆ, ಅಂದರೆ ಅತೃಪ್ತರ ರಾಜೀನಾಮೆಯನ್ನು ಅಂಗೀಕರಿಸುವಂತಿಲ್ಲ, ಅನರ್ಹಗೊಳಿಸುವಂತೆಯೂ ಇಲ್ಲ ಅಂತ ಆದೇಶಿಸಿದೆ.
ಇದೀಗ ಮತ್ತೆ ಐವರು ಶಾಸಕರು ಸ್ಪೀಕರ್ ರಾಜೀನಾಮೆ ಅಂಗೀಕರಿಸಲು ವಿಳಂಬ ಮಾಡುತ್ತಿದ್ದಾರೆ ಎಂದು ಸುಪ್ರೀಂ ಮೊರೆ ಹೋಗಿದ್ದಾರೆ. ಎಂಟಿಬಿ ನಾಗರಾಜ್ , ರೋಷನ್ ಬೇಗ್ , ಡಾ. ಸುಧಾಕರ್, ಮುನ್ನಿರತ್ನ ಮತ್ತು ಆನಂದ್ ಸಿಂಗ್ ಸ್ಪೀಕರ್ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಶಾಸಕರಾಗಿದ್ದಾರೆ. ಜುಲೈ 17 ರಂದು ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಮಾಡಲಿದ್ದಾರೆ. ಹೀಗಾಗಿ ಅತೃಪ್ತ ಶಾಸಕರನ್ನು ಮನವೊಲಿಸಲು ಹರಸಾಹಸ ಪಡ್ತಿದ್ದ ಮೈತ್ರಿ ನಾಯಕರಿಗೆ ಐವರು ರೆಬೆಲ್ ಶಾಸಕರ ಈ ನಿರ್ಧಾರ ಬಿಗ್ ಶಾಕ್ ನೀಡಿದೆ.