Friday, March 29, 2024

ಯುಪಿಎಸ್​ಸಿ ರ್‍ಯಾಂಕ್ ಲಿಸ್ಟ್​​ನಲ್ಲಿ ಕರ್ನಾಟಕದ 23 ಜನ

ಬೆಂಗಳೂರು: ಯುಪಿಎಸ್​ಸಿ ಪರೀಕ್ಷೆ ಫಲಿತಾಂಶ ‌ಪ್ರಕಟವಾಗಿದ್ದು. ಕರ್ನಾಟಕದಲ್ಲಿ 23 ಜನ ವಿದ್ಯಾರ್ಥಿಗಳು ರ್‍ಯಾಂಕ್ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಹುಬ್ಬಳ್ಳಿ ಹುಡುಗ ಸಾಧನೆ ಮಾಡಿದ್ದಾರೆ. ದೇಶಕ್ಕೆ17ನೇ ರ್‍ಯಾಂಕ್​ ಪಡೆಯುವ ಮೂಲಕ ರಾಜ್ಯ ಹಾಗೂ ವಾಣಿಜ್ಯ ‌ನಗರಿ‌ಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ವಿದ್ಯಾನಗರದ ಬೃಂದಾವನ ಕಾಲೋನಿ ನಿವಾಸಿ ರಾಹುಲ್ ಸಂಕನೂರು ಈ ಸಾಧನೆ ಮಾಡಿದ್ದಾರೆ. ರಾಹುಲ್ ಸಾಧನೆಗೆ ಕುಟುಂಬಸ್ಥರು, ಸ್ನೇಹಿತರು ಸಂತಸ ವ್ಯಕ್ತಪಡಿಸಿದ್ದಾರೆ. ಎಂಜಿನಿಯರಿಂಗ್ ಮುಗಿಸಿ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದ ರಾಹುಲ್ ಸಂಕನೂರು ಅವರು ಮೂರನೆಯ ಪ್ರಯತ್ನದಲ್ಲಿ 17ನೇ ರ್‍ಯಾಂಕ್​ ಪಡೆದು ಸಾಧನೆ ಮಾಡಿದ್ದಾರೆ.

ಬಳ್ಳಾರಿ: ಜಿಲ್ಲಾಧಿಕಾರಿಯೊಬ್ಬರು ಬಡವರಿಗೆ ಸೂರನ್ನು ಕಲ್ಪಿಸಿರುವುದನ್ನು ನೋಡಿ ಪ್ರೇರಣೆಗೊಂಡು ತಾನು ಕೂಡ  ಜಿಲ್ಲಾಧಿಕಾರಿಯಾಗಬೇಕೆನ್ನುವ ಮಹದಾಸೆ ಹೊತ್ತ ಯುವತಿ ಇದೀಗ ಯುಪಿಎಸ್​ಸಿಯಲ್ಲಿ  423ನೇ ರ್‍ಯಾಂಕ್​ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಬಳ್ಳಾರಿ ತಾಲೂಕಿನ ಸಂಗನಕಲ್ ನಿವಾಸಿಗಳಾದ ವೆಂಕಟರಮಣಪ್ಪ ಮತ್ತು ಸುಮಾ ದಂಪತಿಗಳ ಮಗಳಾದ ಅಶ್ವೀಜಾ ಈ ಸಾಧನೆಗೈದಿದ್ದಾರೆ. ಅಶ್ವಿಜಾ ಬಳ್ಳಾರಿಯಲ್ಲಿ ಪಿಯುಸಿವರೆಗೂ ವ್ಯಾಸಂಗ ಮಾಡಿ, 2014-15ನೇ ಸಾಲಲ್ಲಿ ಬೆಂಗಳೂರಿನಲ್ಲಿ ಎಂಜಿನಿಯರಿಂಗ್​ ಪದವಿ ಪಡೆದಿದ್ರು. ನಂತರ ನಿರಂತರ ಅಧ್ಯಯನ ಮಾಡುವ ಮೂಲಕ ಇದೀಗ ಯುಪಿಎಸ್​ಸಿ ಯಲ್ಲಿ ರಾಜ್ಯಕ್ಕೆ 14ನೇ ಮತ್ತು ಒಟ್ಟಾರೆ 423ನೇ​ ಪಡೆದು ಬಳ್ಳಾರಿಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ದಾವಣಗೆರೆ: ಮಿರ್ಜಾ ಖಾದರ್ ಬೇಗ್ ಐಎಎಸ್ ನಲ್ಲಿ 336ನೇ ರ್‍ಯಾಂಕ್ ಪಡೆದು ಜಿಲ್ಲೆಗೆ ಹೆಸರು ತಂದುಕೊಟ್ಟಿದ್ದಾರೆ. ದಾವಣಗೆರೆಯ  ಹಿರಿಯ ನ್ಯಾಯವಾದಿಗಳಾದ ಮಿರ್ಜಾ ಇಸ್ಮಾಯಿಲ್ ಮೊದಲನೇ ಮಗ ಮಿರ್ಜಾ ಖಾದರ್ ಬೇಗ್ ಎರಡನೇ ಪ್ರಯತ್ನದಲ್ಲಿಯೇ ಐಎಎಸ್ ಪಾಸ್ ಮಾಡಿ 336 ನೇ ರ್‍ಯಾಂಕ್​ ಪಡೆದಿದ್ದಾರೆ.

ವಿಜಯಪುರ: ರೈತಾಪಿ ಕುಟುಂಬದಲ್ಲಿ ಹುಟ್ಟಿದ ಸಾಮಾನ್ಯ ಯುವಕನೊಬ್ಬ ಯುಪಿಎಸ್​ಸಿ ಪರೀಕ್ಷೆಯಲ್ಲಿ 307ನೇ ರ್‍ಯಾಂಕ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ವಿಜಯಪುರ ಜಿಲ್ಲೆಯ ನಾಗಠಾಣ ಗ್ರಾಮದ ಗಿರೀಶ್​​​ ಧರ್ಮರಾಜ್ ಕಲಗೊಂಡ ಯುಪಿಎಸ್​ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಸಾಧನೆ ಮಾಡಿದ್ದಾರೆ. ಯುಪಿಎಸ್​​ಸಿ ಪರೀಕ್ಷೆಗಾಗಿಯೇ ಖಾಸಗಿ ಕಂಪನಿಯಲ್ಲಿ ನೌಕರಿಗೆ ರಾಜೀನಾಮೆ ನೀಡಿದ್ದ ಗಿರೀಶ ಬೆಂಗಳೂರಿನಲ್ಲಿ ಇದ್ದುಕೊಂಡು ಪರೀಕ್ಷೆಗೆ ತಯಾರಿ ನಡೆಸಿದ್ದರು. 4ನೇ ಪ್ರಯತ್ನದಲ್ಲಿ 307 ರ್‍ಯಾಂಕ್ ಪಡೆಯುವ ಮೂಲಕ ವಿಜಯಪುರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

RELATED ARTICLES

Related Articles

TRENDING ARTICLES