Thursday, March 28, 2024

ಬೆಂಗಳೂರು ದಕ್ಷಿಣದಿಂದ ತೇಜಸ್ವಿ ಸೂರ್ಯಗೆ ಟಿಕೆಟ್ – ಯುವನಾಯಕನಿಗೆ ಮಣೆ ಹಾಕಿದ ಕೇಸರಿ ಪಡೆ..!

ಬೆಂಗಳೂರು : ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ತನ್ನ ರಣಕಲಿಯನ್ನು ಫೈನಲ್ ಮಾಡಿದೆ. ಯುವನಾಯಕ ತೇಜಸ್ವಿ ಸೂರ್ಯ ಅವರಿಗೆ ಕೇಸರಿ ಪಡೆ ಮಣೆ ಹಾಕಿದೆ.
ಬಿಜೆಪಿ ಭದ್ರಕೋಟೆಯಾಗಿರುವ ಬೆಂಗಳೂರು ದಕ್ಷಿಣವನ್ನು ಅನಂತ್ ಕುಮಾರ್ ಅವರು ಪ್ರತಿನಿಧಿಸುತ್ತಿದ್ದರು. ಅವರ ಅಗಲಿಕೆ ಹಿನ್ನೆಲೆಯಲ್ಲಿ ಯಾರಿಗೆ ಟಿಕೆಟ್ ಸಿಗಬಹುದು ಅನ್ನೋ ಕುತೂಹಲವಿತ್ತು. ಅನಂತ್​ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್​ಕುಮಾರ್ ಅವರಿಗೆ ಟಿಕೆಟ್​ ನೀಡಲು ರಾಜ್ಯ ಬಿಜೆಪಿ ನಾಯಕರು ಮನಸ್ಸು ಮಾಡಿದ್ದರು. ಹೈಕಮಾಂಡ್​ಗೆ ತೇಜಸ್ವಿನಿ ಅವರ ಹೆಸರನ್ನೇ ಕಳುಹಿಸಿಕೊಟ್ಟಿತ್ತು. ನಂತರ ಪ್ರಧಾನಿ ನರೇಂದ್ರ ಮೋದಿ ಅವರೇ ಕಣಕ್ಕಿಳಿಯುತ್ತಾರೆ ಅನ್ನೋ ಮಾತು ಕೂಡ ಕೇಳಿಬಂದಿತ್ತು. 
ಆದರೆ ಅಂತಿಮ ಕ್ಷಣದಲ್ಲಿ ಅಚ್ಚರಿ ಆಯ್ಕೆ ಎಂಬಂತೆ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ಸಿಕ್ಕಿದೆ. ಈ ಬಗ್ಗೆ ಸಂತಸ ಹಂಚಿಕೊಂಡಿರೋ ತೇಜಸ್ವಿ ಸೂರ್ಯ, ”ನನಗೆ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. 28 ವರ್ಷದ ಯುವಕನಿಗೆ ಬೆಂಗಳೂರು ದಕ್ಷಿಣ ಪ್ರತಿನಿಧಿಸುವ ಅವಕಾಶ. ಪ್ರಧಾನಿ ಮತ್ತು ಬಿಜೆಪಿ ಅಧ್ಯಕ್ಷರು ಈ ಅವಕಾಶ ಕೊಟ್ಟಿದ್ದಾರೆ. ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ’ ಅಂತ ಟ್ವೀಟ್​ ಮಾಡಿದ್ದಾರೆ.
ಇನ್ನು ಅನಂತ್ ಕುಮಾರ್ ಅವರನ್ನು ಸ್ಮರಿಸಿರೋ ತೇಜಸ್ವಿ, ”ನನ್ನ ರಾಜಕೀಯದ ಮೊದಲ ಗುರು ಅನಂತ್​ ಕುಮಾರ್. ಶಾಲಾ ದಿನಗಳಿಂದಲೂ ನನ್ನ ಬೆಳವಣಿಗೆಯನ್ನು ಅವರು ನೋಡಿದ್ದಾರೆ . ಅವರನ್ನು ನೋಡಿ, ಅವರ ಕೆಲಸವನ್ನು ನಾನು ತುಂಬಾ ಕಲಿತಿದ್ದೇನೆ. ಅನಂತ್​ ಕುಮಾರ್ ಅವರ ಜೊತೆ ಜನ್ ಚೇತನ ಯಾತ್ರೆಗೆ ಹೋಗಿದ್ದೆ . ತೇಜಸ್ವಿನಿ ಅವರು ನನ್ನನ್ನು ಜನ್ ಚೇತನ ಯಾತ್ರೆಗೆ ಕರೆದುಕೊಂಡು ಹೋಗುವಂತೆ ಹೇಳಿದ್ದರು” ಎಂದು ಸ್ಮರಿಸಿದ್ದಾರೆ.
ಟಿಕೆಟ್​ ಕೈ ತಪ್ಪಿರುವ ಬಗ್ಗೆ ಟ್ವೀಟ್​ ಮೂಲಕ ಪ್ರತಿಕ್ರಿಯೆ ನೀಡಿರುವ ತೇಜಸ್ವಿನಿ ಅನಂತ್​ಕುಮಾರ್, ”ಟಿಕೆಟ್​ ಕೈ ತಪ್ಪಿದ್ರಿಂದ ಬೆಂಬಲಿಗರಿಗೆ ಬೇಸರವಾಗಿದೆ, ಆದರೆ ನಾವು ಬೇರೆ ಪಕ್ಷಗಳಿಗಿಂತ ವಿಭಿನ್ನ ಅಂತ ತೋರಿಸಬೇಕು”ಅಂತ ಮನವಿ ಮಾಡಿದ್ದಾರೆ. ”ನಮ್ಮ ಸಿದ್ಧಾಂತದ ಹಾದಿಯಲ್ಲಿ ಸಾಗಲು ಬದ್ಧರಾಗಿದ್ದೇವೆ. ಮತ್ತೊಮ್ಮೆ ಮೋದಿಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡೋಣ” ಎಂದು ತಮ್ಮ ಬೆಂಬಲಿಗರಿಗೆ ಮನವಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES