Friday, March 29, 2024

ನಾವೇನ್​ ಪಾಕಿಸ್ತಾನದಿಂದ ಬಂದಿದ್ದೀವಾ..? : ಮಂಡ್ಯದಲ್ಲಿ ರಾಕಿಂಗ್ ಸ್ಟಾರ್ ಯಶ್​​ ಘರ್ಜನೆ..!

ಮಂಡ್ಯ : ‘ನಾವೇನು ಅಂಟಾರ್ಟಿಕದಿಂದ ಬಂದಿದ್ದೀವಾ? ಪಾಕಿಸ್ತಾನದಿಂದ ಬಂದಿದ್ದೀವಾ? ನಾವು ಇದೇ ಮೈಸೂರಿನಿಂದ ಮಂಡ್ಯ ರೋಡ್ ದಾಟ್ಕೊಂಡು ಬೆಂಗಳೂರಿಗೆ ಹೋಗಿ ಬದುಕ್ತಾ ಇರೋರು, ಜೀವನ ಕಟ್ಕೊಂಡವ್ರು’..!
ಇದು ರಾಕಿಂಗ್ ಸ್ಟಾರ್ ಯಶ್ ಮಂಡ್ಯದಲ್ಲಿ ಘರ್ಜಿಸದ ಪರಿ, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಪರ ರಣಕಹಳೆ ಊದಿದ ರೀತಿ..!
ಹೌದು, ಇಂದು ಮಂಡ್ಯ ಅಕ್ಷರಶಃ ಸುಮಲತಾ ಸುನಾಮಿಗೆ ಸಾಕ್ಷಿಯಾಗಿತ್ತು… ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿರುವ ಸುಮಲತಾ ಅಂಬರೀಶ್ ನಾಮಪತ್ರ ಸಲ್ಲಿಕೆ ಮಾಡಿದ್ರು. ಬಳಿಕ ರೋಡ್​ ಶೋ ಕೂಡ ನಡೆಸಿ ಸದ್ದು ಮಾಡಿದ್ರು. ಅದಾದ ಮೇಲೆ ಸಿಲ್ವರ್ ಜ್ಯುಬಿಲಿ ಪಾರ್ಕ್​ನಲ್ಲಿ ಬೃಹತ್ ಸಮಾವೇಶ ನಡೆಸಿದ್ರು. ಈ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್ ಕೂಡ ಸಾಥ್ ನೀಡಿದ್ರು.
ಸಮಾವೇಶದಲ್ಲಿ ಮಾತನಾಡಿದ ಯಶ್, ತಾವು ಸುಮಲತಾ ಪರ ಪ್ರಚಾರಕ್ಕೆ ನಿಂತಿರೋದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವವರಿಗೆ ಖಡಕ್ ಉತ್ತರ ಕೊಟ್ರು.
‘ಸಿನಿಮಾದವ್ರು ಅಂತಾರೆ… ನಾವೇನು ಅಂಟಾರ್ಟಿಕದಿಂದ ಬಂದಿದ್ದೀವಾ? ಪಾಕಿಸ್ತಾನದಿಂದ ಬಂದಿದ್ದೀವಾ? ನಾವು ಇದೇ ಮೈಸೂರಿನಿಂದ ಮಂಡ್ಯ ರೋಡ್ ದಾಟ್ಕೊಂಡು ಬೆಂಗಳೂರಿಗೆ ಹೋಗಿ ಬದುಕ್ತಾ ಇರೋರು, ಜೀವನ ಕಟ್ಕೊಂಡವ್ರು. ಇದೇ ಪಾಳೇಹಳ್ಳಿ ಪಂಪ್​ ಹೌಸ್​ನಲ್ಲಿ ಈಜಿದ್ದೀವಿ. ಕೆಆರ್​ಎಸ್​ ಕೂಡ ಗೊತ್ತು. ಮಂಡ್ಯದ ಕಬ್ಬಿಲ ಹಾಲು ಕುಡಿದಿದ್ದೀವಿ, ಬೆಲ್ಲ ತಿಂದಿದ್ದೀವಿ. ಮಂಡ್ಯ ಜನರೇ ನಮ್ಮನ್ನು ಪ್ರೀತಿಯಿಂದ ಬೆಳೆಸಿದ್ದಾರೆ’ ಎಂದರು.
ನಾವು ಮಾಡ್ತಿರೋದು ತಪ್ಪಲ್ಲ. ಅದನ್ನು ತಪ್ಪು ಅನ್ಕೊಂಡ್ರೆ ಆ ತಪ್ಪನ್ನು ಸಾಯೋವರೆಗೂ ಮಾಡ್ತೀವಿ. ಯಾಕಂದ್ರೆ ಅಂಬರೀಶಣ್ಣ ನಮಗಾಗಿ ಅಷ್ಟೊಂದು ಪ್ರೀತಿ ಕೊಟ್ಟಿದ್ದಾರೆ ಎನ್ನುವ ಮೂಲಕ ಯಾವುದೇ ಕಾರಣಕ್ಕೂ ಪ್ರಚಾರದಿಂದ ಹಿಂದೆ ಸರಿಯಲ್ಲ.. ಸುಮಲತಾ ಅವರ ಬೆಂಬಲಕ್ಕೇ ಇದ್ದೇ ಇರ್ತೀನಿ ಅನ್ನೋದನ್ನು ಸಾರಿದ್ರು.
ಸುಮಲತಾ ಅವರು ಈ ಮನೆ ಮಗಳು. ಮಂಡ್ಯದವರು ಸ್ವಾಭಿಮಾನ ಅಂತ ಬಂದ್ರೆ ಮನೆ-ಮಠ ಬಿಟ್ಟು ನಿಲ್ತಾರೆ. ಮನೆ ಮಗಳೇ ಈಗ ಇಲ್ಲಿಗೆ ಬಂದಿರುವಾಗ ಸುಮ್ಮನೇ ಇರ್ತಾರಾ ಎಂದು ಪ್ರಶ್ನಿಸಿದ ಯಶ್, ಸುಮಲತಾ ಅಕ್ಕನನ್ನು ಗೆಲ್ಲಿಸಿದ್ರೆ ಮಂಡ್ಯದಿಂದ ದೆಹಲಿವರೆಗೂ ಸೌಂಡು ಮಾಡ್ತಾರೆ. ನಿಮ್ಮ ಕೆಲಸ ಮಾಡಿಕೊಡ್ತಾರೆ. ಸೋಲಲಿ, ಗೆಲ್ಲಲಿ ನಿಮ್ಮ ಜೊತೆಯೇ ಇದ್ದು ನಿಮ್ಮ ಪ್ರೀತಿಗಳಿಸಿಕೊಳ್ತಾರೆ ಎಂದು ಸುಮಲತಾ ಅವರನ್ನು ಗೆಲ್ಲಿಸುವಂತೆ ಕರೆಕೊಟ್ಟರು.

RELATED ARTICLES

Related Articles

TRENDING ARTICLES