Friday, April 19, 2024

ಕ್ರೀಡಾ ಸ್ಫೂರ್ತಿ ಮರೆತ ಪೂಜಾರ – ಫೈನಲ್​ಗೆ ಸೌರಾಷ್ಟ್ರ

ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸೌರಾಷ್ಟ್ರ ವಿರುದ್ಧದ ಪ್ರಸಕ್ತ ಸಾಲಿನ ರಣಜಿ ಸೆಮಿಫೈನಲ್​ ಪಂದ್ಯದಲ್ಲಿ ಕರ್ನಾಟಕ  ಮುಗ್ಗರಿಸಿದೆ. ತಂಡದ ಉತ್ತಮ ಪ್ರದರ್ಶನದ ಹೊರತಾಗಿಯೂ ಅಂಪೈರ್​ಗಳ ಯಡವಟ್ಟು, ಕ್ರೀಡಾ ಸ್ಫೂರ್ತಿ ಮರೆತ ಚೇತೇಶ್ವರ ಪೂಜಾರ ಆಟದ ಪರಿಣಾಮವಾಗಿ ತವರಿನಂಗಳದಲ್ಲಿ ಕರ್ನಾಟಕ ಸೋಲುಂಡಿತು. 5 ವಿಕೆಟ್​​ಗಳ ಅಂತರದಿಂದ ಪಂದ್ಯ ಜಯಸಿದ ಸೌರಾಷ್ಟ್ರ ಫೈನಲ್​ ಪ್ರವೇಶಿಸಿತು.
ಇಂದು ನಡೆದ ಅಂತಿಮ ದಿನದಾಟದಲ್ಲಿ ಪ್ರವಾಸಿ ತಂಡಕ್ಕೆ ಗೆಲ್ಲಲು 55 ರನ್​ಗಳ ಅವಶ್ಯಕತೆ ಇತ್ತು. ದಿನದಾಟದಲ್ಲಿ ಸೌರಾಷ್ಟ್ರ ಬ್ಯಾಟ್ಸ್​​ಮನ್​ ಜಾಕ್ಸನ್ ಶತಕ ಸಿಡಿಸಿದ್ರು. ಸೆಂಚುರಿ ಬಾರಿಸಿದ ಬೆನ್ನಲ್ಲೇ ​ಜಾಕ್ಸನ್​ ವಿನಯ್​ ಕುಮಾರ್​ಗೆ ಎಸೆತದಲ್ಲಿ ಬೌಲ್ಡ್​​​ ಆಗಿ ನಿರ್ಗಮಿಸಿದ್ರು. ಬಳಿಕ ಕಣಕ್ಕಿಳಿದ ಅರ್ಪಿತ್​​ ವಸವಾಡ ರೋನಿತ್​​ ಮೋರೆ ಎಸೆತದಲ್ಲಿ ಔಟಾದ್ರು. ಆದರೆ, ಅದಾಗಲೇ ಸೌರಾಷ್ಟ್ರ ತಂಡ ಗೆಲುವಿನ ಹೊಸ್ತಿಲಿಗೆ ಬಂದು ನಿಂತಿತ್ತು. 4ನೇ ದಿನದಾಟದಲ್ಲಿ ಶತಕ ಸಿಡಿಸಿದ್ದ ಪೂಜಾರ ಹಾಗೂ ಪ್ರೀರಕ್​ ಮಂಕಡ್ ಅಜೇಯರಾಗುಳಿದು ತಂಡವನ್ನ ಗೆಲುವಿನ ದಡ ಸೇರಿಸಿದ್ರು.​

ಕ್ರೀಡಾ ಸ್ಫೂರ್ತಿ ಮರೆತು ಬ್ಯಾಟಿಂಗ್​ ಮಾಡಿದ ಪೂಜಾರ 266 ಎಸೆತಗಳನ್ನು ಎದುರಿಸಿ 17 ಬೌಂಡರಿ ಸಹಿತ 131 ರನ್​ ಗಳಿಸಿ ಗೆಲುವಿಗೆ ಕಾರಣರಾದ್ರು. ಅಂಪೈರ್​ ನೀಡಿದ ಕೆಟ್ಟ ತೀರ್ಪುಗಳು ಕರ್ನಾಟಕದ ಗೆಲುವಿಗೆ ಮುಳುವಾದವು.
ಪಂದ್ಯದಲ್ಲಿ ಟಾಸ್​​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ್ದ ಕರ್ನಾಟಕ ಮೊದಲ ಇನ್ನಿಂಗ್ಸ್​​ನಲ್ಲಿ 275 ರನ್​ ಬಾರಿಸಿತ್ತು. ಇದಕ್ಕುತ್ತರವಾಗಿ ಸೌರಾಷ್ಟ್ರ 236 ರನ್​ಗಳಿಗೆ ಆಲೌಟ್​​ ಆಗಿ 39 ರನ್​ಗಳ ಹಿನ್ನಡೆಯಲ್ಲಿತ್ತು. ತನ್ನ ದ್ವಿತೀಯ ಇನ್ನಿಂಗ್ಸ್​​ನಲ್ಲಿ 239 ರನ್​ ಪೇರಿಸಿದ ಕರ್ನಾಟಕ 279 ರನ್​ಗಳ ಟಾರ್ಗೆಟ್​​ ನೀಡಿತ್ತು.
ಪ್ರಸಕ್ತ ಸಾಲಿನ ರಣಜಿ ಫೈನಲ್​ ಫೆಬ್ರವರಿ 3 ರಿಂದ ನಾಗ್ಪುರದಲ್ಲಿ ನಡೆಯಲಿದ್ದು, ಪ್ರಶಸ್ತಿಗಾಗಿ ವಿದರ್ಭ ಹಾಗೂ ಸೌರಾಷ್ಟ್ರ ತಂಡಗಳು  ಹೋರಾಡಲಿವೆ.

RELATED ARTICLES

Related Articles

TRENDING ARTICLES