ಬೆಂಗಳೂರು : ಹತ್ತು ವರ್ಷಗಳ ಹಿಂದೆ ಜಾತಿ ಗಣತಿ ನಡೆದಿದೆ ಆದರೆ ಈಗ ಬಹಳಷ್ಟು ಬದಲಾವಣೆ ಕೂಡ ಆಗಿದೆ ಎಂದು ವಿರೋಧ ಪಕ್ಷ ನಾಯಕ ಆರ್.ಅಶೋಕ್ ಜಾತಿ ಹೇಳಿದರು.
ರಾಜ್ಯದ ಜಾತಿ ಗಣತಿ ವರದಿ ಬಿಡುಗಡೆಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಆರ್ ಅಶೋಕ್ ಅವರು, ಹಿಂದೆ ಸಿದ್ದರಾಮಯ್ಯ ಅವರದ್ದೇ ಸರ್ಕಾರ ಇತ್ತು ಮತ್ತು ಕುಮಾರಸ್ವಾಮಿ ಅವರ ಜೊತೆ ಮೈತ್ರಿ ಸರ್ಕಾರ ಕೂಡ ಇತ್ತು. ಆಗ ಜಾತಿಗಣತಿಯ ಚಕಾರ ಎತ್ತಲಿಲ್ಲ. ಸಿದ್ದರಾಮಯ್ಯ ಅವರೇ ಸಮನ್ವಯ ಸಮಿತಿ ಅಧ್ಯಕ್ಷರು ಆಗಿದ್ರು ಇದರ ಪ್ರಸ್ತಾಪ ಮಾಡಲಿಲ್ಲ ಆದರೆ ಈಗ ಮುಡಾ ಹಗರಣ ತನಿಖೆಗೆ ಬಂದಿದೆ. ಅದನ್ನ ಮರೆಮಾಚಬೇಕು ಅಂತ ಅವರ ಬೆಂಬಲಿಗರು ಐಡಿಯಾ ನೀಡಿದ್ದಾರೆ. ಇದು ಕಾಂಗ್ರೆಸ್ ಹುನ್ನಾರ ಅನ್ನೋದು ಸ್ಪಷ್ಟವಾಗಿದೆ ಎಂದು ಸಿಎಂ ಮೇಲೆ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಕೇವಲ ವಿಪಕ್ಷಗಳ ಮೇಲೆ ದಾಳಿ ಮಾಡೋ ಕೆಲಸ ಮಾಡುತ್ತಿದೆ. ಆದರೆ ವಿಪಕ್ಷ ಅದರ ಕೆಲಸ ಮಾಡುತ್ತಿದೆ. ಇವೆಲ್ಲವನ್ನು ಬಿಟ್ಟು ಸರ್ಕಾರ ಜನರ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಲಿದೆ. ಮಾತೆತ್ತಿದ್ರೆ ಸಿದ್ದರಾಮಯ್ಯ ಆತ್ಮಸಾಕ್ಷಿ ಅಂತಾರೆ. ನಿಮ್ಮಆತ್ಮ ಮುಟ್ಟಿಕೊಂಡು ಹೇಳಿ ಒಂದಾದ್ರೂ ಅಭಿವೃದ್ಧಿ ಕೆಲಸ ಮಾಡಿದ್ದೀರಾ.? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಅಧಿಕಾರದಿಂದ ಅಭಿವೃದ್ಧಿ ಮರೀಚಿಕೆ ಆಗಿದೆ. ಸರ್ಕಾರಿ ನೌಕರರಿಗೆ ಸಂಬಳ ಆಗ್ತಿಲ್ಲ. ಅಭಿವೃದ್ಧಿ ಮಾಡದೆ, ಈಗ ಮುಡಾ ಹಗರಣ ಮುಚ್ಚಿಕೊಳ್ಳಲು ಇಲ್ಲ ಸಲ್ಲದ ಕಸರತ್ತು ಮಾಡ್ತಿದ್ದೀರ. ಬಿಜೆಪಿಯವರು ನಿಮ್ಮನ್ನು ಟೀಕೆ ಮಾಡುತ್ತಿಲ್ಲ, ನಿಮ್ಮನ್ನ ನೀವೆ ಟೀಕೆ ಮಾಡಿಕೊಳ್ಳುತ್ತಿದ್ದೀರ. ಈವರೆಗೂ ಕಾಂಗ್ರೆಸ್ನಲ್ಲಿ ಸಿಎಂ ಕುರ್ಚಿಗೆ 400 ಮೀಟರ್ ಓಡ್ತಿದ್ರು, ಈಗ 100 ಮೀಟರ್ ರನ್ನಿಂಗ್ ರೇಸ್ ಆರಂಭಿಸಿದ್ದಾರೆ. ಬಂಡೆಯಂತೆ ನಿಂತು ಸಿಎಂ ಕುರ್ಚಿ ರಕ್ಷಣೆ ಮಾಡುತ್ತೀವಿ ಎಂದು ಹೇಳಿದ್ದವರು ಈಗ ನಾನು ಸಿಎಂ ಆಗುತ್ತೇನೆ ಎಂದು ಹೇಳುತ್ತಿದ್ದಾರೆ ಎಂದು ಹೇಳಿದರು.
ಸಿಎಂನನ್ನು ಕುರ್ಚಿಯಿಂದ ಇಳಿಸಲು ಅವರ ಪಕ್ಷದವರೆ ಯತ್ನಿಸುತ್ತಿದ್ದಾರೆ. ಬ್ರೇಕ್ ಫಾಸ್ಟ್ ಮೀಟಿಂಗ್, ಡಿನ್ನರ್ ಮೀಟಿಂಗ್ಗಳು ಶುರುವಾಗಿದೆ. ಸಿಎಂ ಹತ್ತು ಹದಿನೈದು ದಿನದಲ್ಲಿ ಇಳೀತಾರೆ ಅಂತ ಅವರ ಪಕ್ಷದಲ್ಲೇ ಮಾತಾಡಿಕೊಳ್ತಿದ್ದಾರೆ. ಎಂದು ಹೇಳಿದರು.
ಜನರು ಕಾಂಗ್ರೆಸ್ ಬಂದ್ರೆ ಏನೋ ಮಾಡ್ತಾರೆ ಅಂತ ತಿಳಿದುಕೊಂಡಿದ್ದರು. ಆದ್ರೆ ಯಾವುದೇ ಅಭಿವೃದ್ಧಿ ಇಲ್ಲ ಅಂತ ಹಳ್ಳಿಯಲ್ಲಿ ಜನ ಮಾತಾಡ್ತಿದ್ದಾರೆ. ಅನೇಕ ಕಡೆ ಮಳೆ ಇಲ್ಲ, ಬೆಳೆ ಒಣಗುತ್ತಿದೆ. ಯಾರಾದ್ರೂ ಸಚಿವರು, ಜಿಲ್ಲಾ ಉಸ್ತುವಾರಿಗಳು ಹಳ್ಳಿಗೆ ಹೋಗಿ ನೋಡಿದ್ದೀರಾ.? ಇನ್ನಾದ್ರೂ ಎಚ್ಚೆತ್ತುಕೊಂಡು, ಅಭಿವೃದ್ಧಿಯನ್ನ ಮಾಡಿ. ಎಂದು ಸರ್ಕಾರಕ್ಕೆ ಆರ್. ಅಶೋಕ ಎಚ್ಚರಿಕೆ ನೀಡಿದರು.