ಬೆಂಗಳೂರು; ವಾಲ್ಮೀಕಿ ನಿಗಮದ 187 ಕೋಟಿ ರೂ. ಹಗರಣದ ಬಳಿಕ ಮುಡಾ ಸ್ಕ್ಯಾಮ್ ಸರ್ಕಾರಕ್ಕೆ ಬಿಸಿ ತುಪ್ಪವಾಗಿದೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ 50:50 ಅನುಪಾತದಲ್ಲಿ ಮುಡಾದಿಂದ ಬದಲಿ ನಿವೇಶನ ಹಂಚಿಕೆಯಾಗಿರುವುದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ. ಸದ್ಯ ಈ ವಿಚಾರವಾಗಿ ಮಾತನಾಡಿರುವ ಬಿಜೆಪಿ ಸಂಸದ ಜಗದೀಶ್ ಶೆಟ್ಟರ್, ಮುಡಾ ಹಗರಣದಲ್ಲಿ ಸಿಎಂ ನೇರವಾಗಿ ಭಾಗಿಯಾಗಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಅತೀ ಹೆಚ್ಚು ದುರುಪಯೋಗ ಮುಡಾದಲ್ಲಿ ಆಗಿದೆ. ಸಿಬಿಐಗೆ ಕೊಟ್ಟರೆ ಸಾವಿರಾರು ಕೋಟಿ ರೂ. ಹಗರಣ ಹೊರಬೀಳುತ್ತೆ ಎಂದು ಹೇಳಿದ್ದಾರೆ.
ಇದನ್ನು ಓದಿ; ಗೃಹಲಕ್ಷ್ಮಿ ಹಣ ತಡವಾದರೂ ನಿಯಮಿತವಾಗಿ ತಲುಪುತ್ತಿದೆ- ಲಕ್ಷ್ಮಿ ಹೆಬ್ಬಾಳ್ಕರ್
ಒಮ್ಮೆ ನೋಟಿಫೈ ಮಾಡಿ ನಂತರ ಡಿನೋಟಿಫೈ ಮಾಡಿದ್ದಾರೆ. ಲೇಔಟ್ ಆದ ನಂತರ 50:50 ಕೊಡಿ ಎಂದು ಕೇಳಿದ್ದಾರೆ. ಆ ರೂಲ್ಸ್ ಎಲ್ಲಿಯೂ ಇಲ್ಲ. ಲೇಔಟ್ ಮಾಡುವಾಗ ಏಕೆ ಅಧಿಕಾರಿಗಳು ಬಿಟ್ಟು ಕೊಟ್ಟರು. ಆವಾಗಲೇ ತಡಿ ಹಿಡಿಯಬಹುದಿತ್ತು ಆದರೆ ಅಧಿಕಾರಿಗಳು ಸುಮ್ಮನೆ ಕುಳಿತರು ಎಂದು ಕಿಡಿಕಾರಿದ್ದಾರೆ.
ನಾಳೆ ಮಹದಾಯಿ ಜಲಾನಯನ ಪ್ರದೇಶಕ್ಕೆ ಕೇಂದ್ರ ಪ್ರವಾಹ್ ತಂಡ ಭೇಟಿ ನೀಡುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಅವರ ಕೆಲಸ ಅವರು ಮಾಡಲಿ ಬಂದು ನೋಡಿಕೊಂಡು ಹೋಗಲಿ. ಈಗಾಗಲೇ ನಾವು ಕಾನೂನು ರೀತಿ ಮೇಲುಗೈ ಸಾಧಿಸಿದ್ದೆವೆ. ವನ್ಯಜೀವಿ ಟೈಗರ್ ಕಾರಿಡಾರ್ನಿಂದ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದ್ದಾರೆ.