ಬೆಂಗಳೂರು; ರಾಜ್ಯದಲ್ಲಿ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ ಅಳವಡಿಸಲು ಸೆಪ್ಟೆಂಬರ್ 15ರವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ರಾಜ್ಯ ಸರಕಾರ ಹೈಕೋರ್ಟ್ಗೆ ತಿಳಿಸಿದೆ. ಎಚ್ಎಸ್ಆರ್ಪಿ ಜಾರಿಗೆ ತಡೆ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ – ಏಕಸದಸ್ಯ ನ್ಯಾಯಪೀಠದ ತೀರ್ಪು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಗಳು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾ ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಿದ್ದವು.
ಈ ವೇಳೆ ಹೆಚ್ಚುವರಿ ಅಡ್ವಕೇಟ್ ಜನರಲ್ ವಿಕ್ರಮ್ ಹುಯಿಲಗೋಳ ನ್ಯಾಯಪೀಠದ ಮುಂದೆ, ಎಚ್ಎಸ್ಆರ್ಪಿ ಅಳವಡಿಸಿಕೊಳ್ಳಲು ನಿಗದಿಪಡಿಸಲಾಗಿದ್ದ ಅವಧಿಯನ್ನು ಸೆ. 15ರವರೆಗೆ ರಾಜ್ಯ ಸರ್ಕಾರ ವಿಸ್ತರಿಸಿದೆ ಎಂದು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.
ಇದನ್ನು ಓದಿ; ಡ್ರೈವರ್ ಹೆಸರು ನೋಡಿ ರೈಡ್ ಕ್ಯಾನ್ಸಲ್ ಮಾಡಿದ OLA ಪ್ರಯಾಣಿಕ!
ಆಗ ನ್ಯಾಯಾಲಯ ನೀಡಿರುವ ಮಧ್ಯಾಂತರ ಆದೇಶದ ವಿಚಾರವಾಗಿ ನಮ್ಮ ವಾದ ಮಂಡಿಸಬೇಕಿದೆ ಎಂದು ಮೇಲ್ಮನವಿದಾರ ಕಂಪನಿಗಳ ಪರ ವಕೀಲರು ಕೋರಿದರು. ಅದಕ್ಕೆ, ಸರಕಾರ ಅವಧಿಯನ್ನು ಸೆ. 15ರ ವರೆಗೆ ವಿಸ್ತರಿಸಿದೆ. ಆದರೆ ಮೇಲ್ಮನವಿದಾರರ ವಾದ ಆಲಿಸಬೇಕಿದೆ ಎಂದು ಹೇಳಿದ ನ್ಯಾಯಪೀಠ ಅರ್ಜಿಯ ವಿಚಾರಣೆಯನ್ನು ಜುಲೈ 25ಕ್ಕೆ ಮುಂದೂಡಿತು.