ಬೆಂಗಳೂರು: ರೀಲ್ಸ್ ಮಾಡಿ ಫೇಮಸ್ ಆಗುವ ತವಕದಲ್ಲಿದ್ದ ಅರುಣ್ ಕಟಾರೆ ಇತ್ತೀಚೆಗೆ ಅರೆಸ್ಟ್ ಆಗಿದ್ದಾರೆ. ಸಾರ್ವಜನಿಕವಾಗಿ ರೀಲ್ಸ್ ಮಾಡಲು ಡಮ್ಮಿ ಗನ್ ಬಳಸಿ ಅವರು ಬೆಂಗಳೂರಿನ ಕೊತ್ತನೂರು ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ. ಬೀದಿಬೀದಿಯಲ್ಲಿ ಗನ್ ಹಿಡಿದು ಓಡಾಡಿದ್ದನ್ನು ಕಂಡು ಜನ ಆತಂಕಕ್ಕೊಳಗಾಗಿದ್ದರು. ಈ ಕಾರಣದಿಂದಲೇ ಅರುಣ್ ಅರೆಸ್ಟ್ ಆಗಿದ್ದರು. ಈಗ ಅರುಣ್ ಮಾಡಿದ ತಪ್ಪಿನಿಂದ ಸ್ಯಾಂಡಲ್ವುಡ್ಗೆ ಸಂಕಷ್ಟ ಎದುರಾಗಿದೆ. ಕನ್ನಡದ ಹಿಟ್ ಸಿನಿಮಾಗಳಿಗೆ ಡಮ್ಮಿ ಗನ್ ಒದಗಿಸುವ ತಂತ್ರಜ್ಞ ಸಾಹಿಲ್ ಅವರಿಗೆ ನೋಟಿಸ್ ಬಂದಿದೆ.
ಇದನ್ನೂ ಓದಿ: ದರ್ಶನ್ಗೆ ಜುಲೈ 18ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ
ಹೊಂಬಾಳೆ ಫಿಲ್ಮ್ಸ್, ಗೀತಾ ಪಿಕ್ಚರ್ಸ್ ನಂತಹ ಬ್ಯಾನರ್ಗಳ ಸಿನಿಮಾಗಳಿಗೆ ಸಾಹಿಲ್ ಅವರು ಡಮ್ಮಿ ಗನ್ ನೀಡುತ್ತಿದ್ದರು. ಕನ್ನಡದ ಸೂಪರ್ ಹಿಟ್ ಚಿತ್ರಗಳಾದ ‘ಕಬ್ಜ’, ‘ಮಫ್ತಿ’ ಸಿನಿಮಾಗಳಲ್ಲಿ ಭರ್ಜರಿಯಾಗಿ ಗನ್ ಬಳಕೆ ಆಗಿತ್ತು. ಈ ಸಿನಿಮಾಗಳಿಗೆ ಡಮ್ಮಿ ಗನ್ ಒದಗಿಸಿದವರು ಸಾಹಿಲ್. ಅರುಣ್ ಮಾಡಿದ ತಪ್ಪಿನಿಂದ ಇವರಿಗೆ ನೋಟಿಸ್ ಹೋಗಿದೆ.
ಅರುಣ್ ಕಟಾರೆ ಅವರು ಡಮ್ಮಿ ಗನ್ನ ಬಾಡಿಗೆ ಪಡೆದಿದ್ದು ಸಾಹಿಲ್ನಿಂದ. ಸಾರ್ವಜನಿಕ ಸ್ಥಳದಲ್ಲಿ ರೀಲ್ಸ್ ಮಾಡಲು ಅರುಣ್ ಕಟಾರೆ ಈ ಗನ್ ಬಳಕೆ ಮಾಡಿಕೊಂಡಿದ್ದರು. ಸಾಹಿಲ್ ಅವರಿಂದ ಸಾರ್ವಜನಿಕರಲ್ಲಿ ಆತಂಕ ಎದುರಾಗಿತ್ತು. ಹೀಗಾಗಿ ಅರುಣ್ ಅವರನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದರು. ಅರುಣ್ ಅವರ ವಿಚಾರಣೆ ಮಾಡಿದಾಗ ಡಮ್ಮಿ ಗನ್ನ ಸಾಹಿಲ್ನಿಂದ ಪಡೆದಿರುವುದಾಗಿ ಮಾಹಿತಿ ನೀಡಿದ್ದಾರೆ. ಹೀಗಾಗಿ ಕೊತ್ತನೂರು ಪೊಲೀಸರಿಂದ ಸಾಹಿಲ್ಗೆ ನೊಟೀಸ್ ನೀಡಲಾಗಿದೆ.