ಹತ್ರಾಸ್: ಉತ್ತರ ಪ್ರದೇಶದ ಹತ್ರಾಸ್ ಎಂಬಲ್ಲಿ ನಡೆದ ಭೀಕರ ಕಾಲ್ತುಳಿತದಲ್ಲಿ 121 ಮಂದಿ ಸಾವನ್ನಪ್ಪಿದ್ದಾರೆ. ಇಂಥದ್ದೊಂದು ದುರಂತಕ್ಕೆ ಸಾಕ್ಷಿಯಾಗಿದ್ದು ಭೋಲೆ ಬಾಬಾ ಸತ್ಸಂಗ ಕಾರ್ಯಕ್ರಮ. ಇಲ್ಲಿ 2.5 ಲಕ್ಷಕ್ಕೂ ಅಧಿಕ ಮಂದಿ ಜಮಾಯಿಸಿದ್ದರು. ಅಷ್ಟರ ಮಟ್ಟಗೆ ಉತ್ತರ ಭಾರತದಲ್ಲಿ ಈ ಬಾಬಾ ಫೇಮಸ್. ಹಾಗಿದ್ದರೆ ಈ ಭೋಲೆ ಬಾಬಾ ಯಾರು?
ನಾರಾಯಣ ಸಾಕಾರ ಹರಿ @ ಸಾಕಾರ ವಿಶ್ವಹರಿ @ ಭೋಲೆ ಬಾಬಾ ಮೂಲತಃ ಉತ್ತರ ಪ್ರದೇಶದ ನಿವಾಸಿ. ಎಟಾ ಜಿಲ್ಲೆಯ ಪಟಿಯಾಲಿ ತಾಲ್ಲೂಕಿನ ಬಹಾದ್ದೂರ ಗ್ರಾಮದಲ್ಲಿ ಈ ಭೋಲೆ ಬಾಬಾ ಜನಿಸಿದ್ದಾಗಿ ಮಾಹಿತಿಯಿದೆ. ಈ ಭೋಲೆ ಬಾಬಾ ವಿದ್ಯಾಭ್ಯಾಸ ಮುಗಿಸಿದ ಬಳಿಕ ಪೊಲೀಸ್ ಇಲಾಖೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾಗಿ ಅನೇಕ ಪ್ರವಚನಗಳಲ್ಲಿ ಹೇಳಿಕೊಂಡಿದ್ದಾರೆ. 26 ವರ್ಷಗಳ ಹಿಂದೆಯೇ ತಮ್ಮ ಸೇವೆಗೆ ಗುಡ್ ಬೈ ಹೇಳಿ, ಧಾರ್ಮಿಕ ಪ್ರವಚನಗಳಲ್ಲಿ ತೊಡಗಿದ್ದರಂತೆ. ಇವರ ಪ್ರವಚನಗಳಿಂದ ಪ್ರಭಾವಿತರಾದ ಲಕ್ಷಾಂತರ ಮಂದಿ ಭಕ್ತರು ಉತ್ತರ ಭಾರತದಲ್ಲಿ ಇದ್ದಾರೆ. ವಿಶೇಷವಾಗಿ ಉತ್ತರ ಪ್ರದೇಶ, ರಾಜಸ್ಥಾನ, ಹರ್ಯಾಣ, ಉತ್ತರಾಖಂಡ, ದೆಹಲಿ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಇವರ ಅನುಯಾಯಿಗಳ ಸಂಖ್ಯೆ ಅಧಿಕವಾಗಿದೆ.
ಇದನ್ನೂ ಓದಿ: ಸತ್ಸಂಗದಲ್ಲಿ 2.50 ಲಕ್ಷ ಭಕ್ತರು..! ಬಾಬಾ ಪಾದದ ಧೂಳಿಗೆ ಮುಗಿಬಿದ್ದು ಕಾಲ್ತುಳಿತಕ್ಕೆ ಸತ್ತವರು 121 ಮಂದಿ.!!
ವಿಶೇಷ ಏನೆಂದರೆ ಇಂದಿನ ಡಿಜಿಟಲ್ ಜಮಾನಾದಲ್ಲೂ ಭೋಲೆ ಬಾಬಾ ಮಾತ್ರ, ಯಾವುದೇ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ಗಳಲ್ಲಿ ಕಾಣಿಸಿಕೊಂಡಿಲ್ಲ. ಬಹುತೇಕ ಎಲ್ಲಾ ಸ್ವಾಮೀಜಿಗಳು, ಬಾಬಾಗಳು ಯೂ ಟ್ಯೂಬ್, ಫೇಸ್ ಬುಕ್ ಅಷ್ಟೇ ಯಾಕೆ ಇನ್ಸ್ಟಾಗಳಲ್ಲೂ ಕಾಣಿಸಿಕೊಂಡು ಭಕ್ತರಿಗೆ ದರ್ಶನ ಕೊಡ್ತಾರೆ, ಪ್ರವಚನ ನೀಡುತ್ತಾರೆ. ಆದರೆ ಈ ಭೋಲೆ ಬಾಬಾ ಇಂದಿಗೂ ಯಾವುದೇ ಸೋಷಿಯಲ್ ಮೀಡಿಯಾ ಖಾತೆಯನ್ನು ಹೊಂದಿಲ್ಲ. ನೇರವಾಗಿ ಮಾತ್ರ ಇವರು ಭಕ್ತರನ್ನು ಬೇಟಿಯಾಗುತ್ತಾರೆ, ಸತ್ಸಂಗಗಳಲ್ಲಿ ಮಾತ್ರ ಭಾಗಿಯಾಗುತ್ತಾರೆ.
ಇವರ ಸತ್ಸಂಗ ಕಾರ್ಯಕ್ರಮಗಳಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಅನುಯಾಯಿಗಳು ಜಮಾಯಿಸುತ್ತಾರೆ. ಹೀಗೆಯೇ ಹತ್ರಾಸ್ನಲ್ಲಿ ನಡೆದಿದ್ದ ಸತ್ಸಂಗದಲ್ಲಿ ಕಾಲ್ತುಳಿತಕ್ಕೆ 121 ಮಂದಿ ಸಾವನ್ನಪ್ಪಿದ್ದು, ಇದೀಗ ಬಾಬಾ ಪರಾರಿ ಆಗಿದ್ದಾರೆ.