ಬೆಂಗಳೂರು: ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಕೇಸ್ನಲ್ಲಿ ಸೂರಜ್ ರೇವಣ್ಣನನ್ನು ಎಸ್ಐಟಿ ಅಧಿಕಾರಿಗಳು ಕಸ್ಟಡಿಗೆ ಪಡೆದಿದ್ದಾರೆ. ತಮ್ಮ ಪ್ರಜ್ವಲ್ ರೇವಣ್ಣ ಪರಪ್ಪನ ಅಗ್ರಹಾರ ಸೇರ್ತಾ ಇದ್ದಂತೆ ಸಿಐಡಿ ಕೋಣೆಗೆ ಅಣ್ಣ ಸೂರಜ್ ಸೇರಿದ್ದಾರೆ.
ಇಂದಿನಿಂದ ಪೊಲೀಸರು ಸೂರಜ್ ವಿಚಾರಣೆ ಮಾಡಲಿದ್ದಾರೆ. ಸಂತ್ರಸ್ತನ 164 ಹೇಳಿಕೆ ಪಡೆದು ಸೂರಜ್ ವಿಚಾರಣೆ ನಡೆಯುತ್ತದೆ. ಇದರ ಜೊತೆಗೆ ಆರೋಪಿಯ ಮೊಬೈಲ್ನ್ನು FSLಗೆ ಸಿಐಡಿ ತಂಡ ಕಳುಹಿಸಿದ್ದಾರೆ. ಇನ್ನು ಕೃತ್ಯ ನಡೆದ ಸ್ಥಳದಲ್ಲಿ ಮಹಜರ್ ನಡೆಸುವ ಸಾಧ್ಯತೆ ಇದೆ. ಈಗಾಗಲೇ ಸಂತ್ರಸ್ತ ನೀಡಿರುವ ದೂರಿನ ಅನ್ವಯ 15 ಮಾದರಿಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಿದ್ದಾರೆ. ವರದಿ ಜೊತೆಗೆ ಟೆಕ್ನಿಕಲ್ ಎವಿಡೆನ್ಸ್ ಸಂಗ್ರಹಕ್ಕೆ ಸಿಐಡಿ ತಂಡ ಮುಂದಾಗಿದ್ದಾರೆ.
ಸೂರಜ್ ವಿರುದ್ಧ ಕಾನೂನು ಕ್ರಮ:
ಸೂರಜ್ ರೇವಣ್ಣ ವಿರುದ್ಧ ಅಸಜಹ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ಪೊಲೀಸರು ಕಾನೂನು ಪ್ರಕಾರ ಏನು ಕ್ರಮ ತಗೊಬೇಕು ತಗೊಂಡಿದ್ದಾರೆ, ಅರೆಸ್ಟ್ ಮಾಡಿದ್ದಾರೆ. ಇದರಲ್ಲಿ ನನ್ನ ಅಭಿಪ್ರಾಯದ ಪ್ರಕಾರ ನಡೆಯಲ್ಲ. ಕಾನೂನಿನ ಪ್ರಕಾರವೇ ನಡೆಯುತ್ತೆ. ಆ ಪ್ರಕರಣದ ಬಗ್ಗೆ ಕಾನೂನಾತ್ಮಕವಾಗಿ ಕ್ರಮ ಜರುಗಿಸಿದ್ದಾರೆ. ದೂರು ಬಂದ ನಂತರವೇ ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಂಡಿದ್ದಾರೆ. ನಮ್ಮ ಸರ್ಕಾರ ಬಂದ ಮೇಲೆ ನೇಮಸಿರುವ ಎಲ್ಲಾ ಎಸ್ಐಟಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ ಎಂದರು.
ಇದನ್ನೂ ಓದಿ: ಜೈಲಿನಲ್ಲಿ ಪತ್ನಿ ಮಗನನ್ನು ಕಂಡು ಬಿಕ್ಕಿ ಬಿಕ್ಕಿ ಅತ್ತ ನಟ ದರ್ಶನ್
ರೇವಣ್ಣ ಕುಟುಂಬದ ವಿರುದ್ಧ ಷಡ್ಯಂತ್ರ ಇಲ್ಲ:
ರೇವಣ್ಣ ಕುಟುಂಬದ ವಿರುದ್ಧ ರಾಜಕೀಯ ಷಡ್ಯಂತ್ರ ಎಂಬ ಎಚ್.ಡಿ.ಕುಮಾರಸ್ವಾಮಿ ಆರೋಪ ವಿಚಾರಕ್ಕೆ ಸಂಬಂಧಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು, ಅದು ಸತ್ಯಕ್ಕೆ ದೂರವಾರ ಆರೋಪ. ಯಾವುದೇ ರಾಜಕೀಯ ಷಡ್ಯಂತ್ರ ಇದರಲ್ಲಿ ಇಲ್ಲ. ಕಾನೂನಿನ ಪ್ರಕಾರ ಏನು ಕ್ರಮ ತೆಗೆದುಕೊಳ್ಳಬೇಕೊ ಅದನ್ನು ತೆಗೆದುಕೊಂಡಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶ, ಪ್ರೇರೇಪಣೆ ಇಲ್ಲ. ಸೂರಜ್ ಅವರು ಕೊಟ್ಟಿರುವ ದೂರಿನ ತನಿಖೆಯನ್ನು ಮಾಡ್ತಾರೆ. ಅಂತಿಮವಾಗಿ ಏನು ಬರುತ್ತೆ ಅದನ್ನು ಈಗಲೇ ಹೇಳಲು ಆಗಲ್ಲ ಎಂದಿದ್ದಾರೆ.
ನಾವು, ನೀವು ಹೇಳಿದ್ರೆ ಅರೆಸ್ಟ್ ಮಾಡಲ್ಲ:
ಪೆನ್ಡ್ರೈವ್ ಹಂಚಿಕೆ ಪ್ರಕರಣದ ಪ್ರಮುಖ ಆರೋಪಿಗಳನ್ನು ಬಂಧಿಸದ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ನಾವು, ನೀವು ಹೇಳಿದ್ರೆ ಅರೆಸ್ಟ್ ಮಾಡಲ್ಲ. ಪೊಲೀಸರು ಯಾರನ್ನು, ಯಾವಾಗ ಕಸ್ಟಡಿಗೆ ತಗೊಬೇಕು ಅನ್ನೋದನ್ನ ಡಿಸೈಡ್ ಮಾಡ್ತಾರೆ. ಇವರನ್ನು ಅರೆಸ್ಟ್ ಮಾಡಿ, ಇವರನ್ನು ಬಿಡಿ ಎಂದು ಯಾರೂ ಹೇಳಲು ಆಗಲ್ಲ. ಇದರಲ್ಲಿ ಯಾವುದೇ ತಾರತಮ್ಯ ಮಾಡಲ್ಲ. ನಾನು ಹೇಳಲು ಆಗುತ್ತಾ, ಇವರನ್ನು ಈಗಲೇ ಅರೆಸ್ಟ್ ಮಾಡಿ, ಇವರನ್ನು ಬಿಡಿ ಅಂತ ಎಂದು ಹೇಳಲು ಸಾಧ್ಯವಿಲ್ಲ ಎಂದು ಪರಂ ಹೇಳಿದ್ದಾರೆ. ಅವರನ್ನು ಬಂಧಿಸದೆ ಇರುವುದಕ್ಕೆ ಕಾರಣ ಇರಬಹುದು. ಅದು ನಮಗೂ ಗೊತ್ತಿಲ್ಲ, ನಿಮಗೂ ಗೊತ್ತಿಲ್ಲ ಎಂದರು.