ಬೆಂಗಳೂರು: ಇತಿಹಾಸದಲ್ಲಿಯೇ ಮೊದಲ ಬಾರಿಗೆ ಒಂದು ಪೊಲೀಸ್ ಠಾಣೆಯನ್ನು ಶಾಮಿಯಾನದಿಂದ ಮುಚ್ಚಿದ ಪ್ರಸಂಗ ನಡೆದಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಗಡುಕರು ಇರುವ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಶಾಮಿಯಾನ ಹೊದಿಸುವಂತೆ ಪೊಲೀಸ್ ಆಯುಕ್ತ ದಯಾನಂದ್ ಸೂಚನೆ ನೀಡಿದ್ದಾರೆ. ಅದರಂತೆ ಠಾಣೆಯ ಸುತ್ತ ಸೈಡ್ ವಾಲ್ ಗಳನ್ನ ಕಟ್ಟಿ, ಆರೋಪಿಗಳು ಕಾಣದಂತೆ ಮಾಡಲಾಗಿದೆ. ಸದ್ಯ ಆಯುಕ್ತರು ಕೂಡ ಪೊಲೀಸ್ ಠಾಣೆಯಲ್ಲಿಯೇ ಇದ್ದಾರೆ. ಆದರೂ ಠಾಣೆಯ ಕಾಂಪೌಂಡ್ಗೆ ಶಾಮಿಯಾನ ಕಟ್ಟಿದ್ದು, ಭಾರೀ ಅನುಮಾನಕ್ಕೆ ಕಾರಣವಾಗಿದೆ.
ಪೊಲೀಸ್ ಠಾಣೆ ಸುತ್ತ 144 ಸೆಕ್ಷನ್ ಜಾರಿ:
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ ಇತರೆ ಆರೋಪಿಗಳನ್ನ ವಿಚಾರಣೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಸುತ್ತ ನಿಷೇಧಾಜ್ಞೆ ಜಾರಿ ಮಾಡಿ ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ್ ಆದೇಶಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ಆರೋಪಿಗಳಾದ ನಟ ದರ್ಶನ್ ಸೇರಿ 13 ಮಂದಿಯನ್ನ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದು ಠಾಣೆಯ ಸುತ್ತಮುತ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಠಾಣೆಯ 200 ಮೀಟರ್ ವ್ಯಾಪ್ತಿಯಲ್ಲಿ 5 ದಿನಗಳ ಕಾಲ ಜೂನ್ 17ರವರೆಗೆ 144 ಸೆಕ್ಷನ್ ಜಾರಿ ಮಾಡಲಾಗಿದೆ.
ಇದನ್ನೂ ಓದಿ: ದರ್ಶನ್ಗೆ ಬಿರಿಯಾನಿ ನೀಡಿದ್ದಕ್ಕೆ ಪೊಲೀಸರ ವಿರುದ್ದ ಅಧಿಕಾರಿಗಳು ಗರಂ
ಶಾಮಿಯಾನ ಹಾಕಿದ್ದು ಸರಿಯಾದ ಕ್ರಮ ಅಲ್ಲ: ಚಲವಾದಿ ನಾರಾಯಣಸ್ವಾಮಿ
ಸ್ಟೇಷನ್ಗೆ ಶಾಮಿಯಾನ ಹಾಕಿದ್ದು ಸರಿಯಾದ ಕ್ರಮ ಅಲ್ಲ ಎಂದು ವಿಧಾನ ಪರಿಷತ್ ಸದಸ್ಯ ಚಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಾಧ್ಯಮದವರಿಗೆ ನಿರ್ಬಂಧ ಹೇರೋದು ಸರಿಯಲ್ಲ. ಪತ್ರಕರ್ತರು ಸತ್ಯಾ ಸತ್ಯತೆ ತೋರಿಸ್ತಾರೆ, ಮುಚ್ಚಿಹಾಕಲು ಬಂದಿರಲ್ಲ. ಸ್ಟೇಷನ್ ಬಳಿ 144 ಹಾಕೋದು, ಶಾಮಿಯಾನ ಹಾಕೋದು ಸರಿಯಲ್ಲ. ಸತ್ಯಾಸತ್ಯತೆ ಹೊರಗೆ ಬರಬೇಕು, ಮುಚ್ಚಿಡೋ ಕೆಲಸ ಆಗಬಾರದು. ದರ್ಶನ್ ರಾಜ್ಯ ಮೆಚ್ಚುವ ನಟ, ಅವರನ್ನ ಗೌರವಿಸ್ತೇವೆ. ಆದರೆ ತಪ್ಪು ಮಾಡಿದ್ರೆ ಖಂಡಿಸ್ತೇವೆ. ಸಿಎಂ ಈ ವಿಚಾರ ಕೈಗೆತ್ತಿಕೊಂಡು ನ್ಯಾಯ ಕೊಡಿಸುವ ಕೆಲಸ ಮಾಡ್ಬೇಕು ಎಂದು ಹೇಳಿದರು.
ಮಂಡ್ಯದಲ್ಲಿ ದರ್ಶನ್ ವಿರುದ್ದ ರೈತರ ಪ್ರತಿಭಟನೆ:
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಟ ದರ್ಶನ್ ವಿರುದ್ದ ಮಂಡ್ಯದ ರೈತರು ಸಿಡಿದೆದ್ದಿದ್ದಾರೆ. ದರ್ಶನ್ ಸೇರಿ ಎಲ್ಲ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ಮಾಡಿದ್ದಾರೆ. ಮಂಡ್ಯದ ಸಂಜಯ್ ವೃತ್ತದಿಂದ ವಿಶ್ವೇಶ್ವರಯ್ಯ ಪ್ರತಿಮೆ ವರೆಗೆ ಪ್ರತಿಭಟನೆ ಮಾಡಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರೊಟೆಸ್ಟ್ ಮಾಡಲಾಗಿದೆ.