ಬೆಂಗಳೂರು: ರಾಸಲೀಲೆಗಳ ಪ್ರಮುಖ ರೂವಾರಿ ಪ್ರಜ್ವಲ್ ರೇವಣ್ಣ ಮಧ್ಯರಾತ್ರಿ ದೇಶಕ್ಕೆ ವಾಪಾಸ್ ಆಗಿದ್ದು ವಿಶೇಷ ತನಿಖಾ ತಂಡ ವಶಕ್ಕೆ ಪಡೆದು ತನಿಖೆ ನಡೆಸುತ್ತಿದೆ. ಈ ಕುರಿತು ಗೃಹಸಚಿವ ಜಿ.ಪರಮೇಶ್ವರ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ರಾತ್ರಿ 12.50ಕ್ಕೆ ಜರ್ಮನಿಯಿಂದ ದೇಶಕ್ಕೆ ಬಂದಿದ್ದಾರೆ, ಈಗಾಗಲೇ ವಾರೆಂಟ್ ಜಾರಿ ಇದ್ದ ಕಾರಣ SIT ತಂಡ ವಶಕ್ಕೆ ತೆಗೆದುಕೊಂಡಿದ್ದು ಮುಂದಿನ ಕಾನೂನು ರೀತಿಯ ಕ್ರಮಗಳನ್ನು ಪೊಲೀಸರು ಕೈಗೊಳ್ಳಲಿದ್ದಾರೆ.
ಪ್ರಜ್ವಲ್ ರೇವಣ್ಣನಿಂದ ಅನ್ಯಾಯಕ್ಕೊಳಗಾದ ಸಂತ್ರಸ್ತ ಮಹಿಳೆಯರು ಯಾರೇ ಆದರೂ ದೂರು ನೀಡಬಹುದು ಅವರಿಗೆ ಸೂಕ್ತ ಭದ್ರತೆ ನೀಡಲಾಗುವುದು ಎಂದು ಈ ಮೊದಲೇ ಹೇಳಿದ್ದೇನೆ. ಈ ಪ್ರಕರಣದ ತನಿಖೆ ನಡೆಯುತ್ತಿದ್ದು ಮುಂದೆ ಯಾವ ರೀತಿ ಬೆಳವಣಿಗೆ ಆಗುತ್ತೆ ಎಂದು ನೋಡಬೇಕು, ಸ್ವಾಭಾವಿಕವಾಗಿ ಪ್ರಜ್ವಲ್ ಅಧಿಕಾರಿಗಳಿಗೆ ಸಹಕಾರ ಕೊಟ್ಟಿದ್ದಾರೆ ಅನ್ಸುತ್ತೆ ಅದರ ಬಗ್ಗೆ ಇನ್ನೂ ಮಾಹಿತಿ ಪಡೆದುಕೊಂಡಿಲ್ಲ.
ಇದನ್ನೂ ಓದಿ: ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಜ್ವಲ್: ವಶಕ್ಕೆ ಪಡೆದ SIT ತಂಡ
ಪ್ರಜ್ವಲ್ ಈಗಾಗಲೇ ಸಾಕ್ಷ್ಯಗಳ ನಾಶಪಡಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಾಕ್ಷ್ಯ ನಾಶ ಬಗ್ಗೆ SIT ಅಧಿಕಾರಿಗಳು ಹೇಳಿದ್ರೆ ಒಪ್ಪಬಹುದು, ಬೇರೆಯವರು ಹೇಳಿದ್ರೆ ಅದರ ಬಗ್ಗೆ ಮಾತಾಡೋಕೆ ಆಗಲ್ಲ ಎಂದರು.
ಇನ್ನು ಸಂತ್ರಸ್ತ ಮಹಿಳೆಯ ಕಿಡ್ನಾಪ್ ಪ್ರಕರಣದಲ್ಲಿ ಶಾಸಕ ಜೆಡಿಎಸ್ ಮುಖಂಡ ಸಾರಾ ಮಹೇಶ್ ಅವರ ಹೆಸರು ಕೇಳಿ ಬಂದಿದೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಕೂಡ ಈ ವಿಚಾರವನ್ನು ಮಾದ್ಯಮಗಳಲ್ಲಿ ನೋಡಿದ್ದೇನೆ. ರಿಮ್ಯಾಂಡ್ ಅರ್ಜಿಯಲ್ಲಿ ಏನಿದೆ ಅಂಥ ನಾನು ನೋಡಿಲ್ಲ, ನೋಡೋಣ ತನಿಖೆ ಮಾಡ್ತಾ ಇದ್ದಾರಲ್ಲಾ ಎಂದು ಅವರು ಹೇಳಿದರು.