ಬೆಂಗಳೂರು : ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ಡಿಕೆಶಿ ಬೇಡ ಅಂದ್ರೆ ಬೇರೆಯವರು ಅಧ್ಯಕ್ಷರಾಗಬಹುದು ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅಂತಹ ಚರ್ಚೆ ಬಗ್ಗೆ ನನಗೆ ತಿಳಿದಿಲ್ಲ. ಇದ್ರೂ ಇರಬಹುದೇನೋ ಗೊತ್ತಿಲ್ಲ. ಡಿ.ಕೆ. ಶಿವಕುಮಾರ್ ಅವರಿಗೆ ಡಿಸಿಎಂ ಆಗಿ ಅಧಿಕಾರದ ಒತ್ತಡ ಇರುತ್ತೆ. ಅವರು ಬೇಡ ಅಂದ್ರೆ ಬೇರೆಯವರು ಆಗಬಹುದು ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಡ್ರಗ್ಸ್ ವ್ಯಸನಿಗಳು ಹೆಚ್ಚಳವಾಗುತ್ತಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರೇ ಪೊಲೀಸ್ ನೈತಿಕಗಿರಿ ಮಾಡ್ತಾ ಇದ್ದಿದ್ದು, ಇವರ ದುರ್ಬಲ ಆಡಳಿತದಿಂದಲೇ ಎಲ್ಲವೂ ಆಗಿದ್ದು. ನಾನೂ ಸಹ ಗೃಹ ಸಚಿವನಾಗಿದ್ದೆ, ಈಗ ಡಾ.ಜಿ. ಪರಮೇಶ್ವರ್ ಇದ್ದಾರೆ. ಇಲಾಖೆಯನ್ನ ಬಹಳ ಚೆನ್ನಾಗಿ ನಡೆಸಿಕೊಂಡು ಹೋಗ್ತಿದ್ದಾರೆ. ಕಳೆದ ನಾಲ್ಕು ವರ್ಷದಲ್ಲಿ ಬಿಜೆಪಿ ಏನು ಮಾಡಿದೆ? ಎಂದು ಪ್ರಶ್ನಿಸಿದ್ದಾರೆ.
ಪರಿಷತ್ ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗಿಲ್ಲ
ಪರಿಷತ್ ಚುನಾವಣೆಗೆ ಕಾಂಗ್ರೆಸ್ನಿಂದ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಯಾರನ್ನು ಶಿಫಾರಸು ಮಾಡಿದ್ದೇವೆ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸ್ತೀವಿ ಎಂದು ತಿಳಿಸಿದ್ದಾರೆ. ಏಳು ಸ್ಥಾನಗಳು ನಮಗೆ ಬರುತ್ತವೆ. ಬೆಂಗಳೂರಿಗೆ ಒಂದು ಕೊಡಿ ಎಂದು ಹೇಳಿದ್ದೇವೆ. ಇನ್ನು ಸಿಎಂ ಸಿದ್ದರಾಮಯ್ಯ ದೆಹಲಿಗೆ ಹೋಗಿ ಪಟ್ಟಿ ಫೈನಲ್ ಮಾಡಿಕೊಂಡು ಬರ್ತಾರೆ. ಆದ್ಯತೆ ಮೇರೆಗೆ ಪ್ರಾದೇಶಿಕವಾರು ಕೊಡಬೇಕು ಎಂಬ ಉದ್ದೇಶವಿದೆ ಎಂದು ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ.