ಬೆಂಗಳೂರು: ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಆರ್ಸಿಬಿ ಪಂದ್ಯದ ಟಿಕೆಟ್ ಖರೀದಿಸಲು ಹೋಗಿ ಬೆಂಗಳೂರು ಮೂಲದ ಅಭಿಮಾನಿಯೊಬ್ಬ ಬರೋಬ್ಬರಿ 3 ಲಕ್ಷ ರೂ. ಕಳೆದುಕೊಂಡಿರುವ ಘಟನೆ ನಡೆದಿದೆ.
ಬೆಂಗಳೂರು ಮೂಲದ 28 ವರ್ಷದ ಅಭಿಮಾನಿಯೊಬ್ಬ ಟಿಕೆಟ್ ಖರೀದಿಸಲು ಮುಂದಾಗಿ ತನ್ನ ಖಾತೆಯಲ್ಲಿದ್ದ 3 ಲಕ್ಷ ಕಳೆದುಕೊಂಡಿದ್ದಾನೆ. ವಿಜಯ್ ಕುಮಾರ್ ಎನ್ನುವಾತ ipl_2024_tickets_24 ಎಂಬ ಖಾತೆಯ ಮೂಲಕ ಪಂದ್ಯಗಳ ಟಿಕೆಟ್ ಬುಕ್ಕಿಂಗ್ ಮಾಡಿಕೊಡಲಾಗುವುದು ಎಂದು ಹೇಳಿ ತನ್ನ ಮೊಬೈಲ್ ಸಂಖ್ಯೆ ಮತ್ತು ಆಧಾರ್ ಮಾಹಿತಿ ಎಲ್ಲವನ್ನೂ ಹಂಚಿಕೊಂಡು, ಪ್ರತಿ ಟಿಕೆಟ್ಗೆ 2,300 ರೂ. ದರದಂತೆ 3 ಟಿಕೆಟ್ಗೆ 7,900 ರೂ. ನಿಗದಿ ಪಡಿಸಿದ್ದ. ಈ ಮೂಲಕ ಟಿಕೆಟ್ ಖರೀದಿಸಲು ಬರುವವರ ವಿಶ್ವಾಸ ಸಂಪಾದಿಸಿದ್ದ. ಇದನ್ನು ನಂಬಿದ IPL ಅಭಿಮಾನಿಯೊಬ್ಬ ಹಣ ಕಳೆದುಕೊಂಡಿದ್ದಾನೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಪೋಸ್ಟ್ಗೆ ಪ್ರಧಾನಿ ಮೋದಿ ಪ್ರತಿಕ್ರಿಯೆ: ನೆಟ್ಟಿಗರಿಂದ ಟ್ರೋಲ್
ವಿಜಯ್ ಕುಮಾರ್ ಆನ್ಲೈನ್ ಪಾವತಿ ಭರವಸೆ ನೀಡಿದ್ದಂತೆ ಈ ಅಭಿಮಾನಿಗೆ 3 ಇ-ಟಿಕೆಟ್ಗಳನ್ನು ವರ್ಗಾಯಿಸಿದ್ದಾನೆ. ಆದರೆ, ಹಣ ಪಾವತಿ ನಿಲ್ಲದೆ ಆಗಾಗ ಈ ಅಭಿಮಾನಿಯ ಖಾತೆಯಿಂದ 7,900 ರೂ.ಗಳಂತೆ ಹಣ ವರ್ಗಾವಣೆ ಆಗಿ 3 ಲಕ್ಷ ರೂ,ಗಳಿಗೂ ಅಧಿಕ ಮೊತ್ತ ವಂಚಕನ ಖಾತೆಗೆ ಸೇರಿದೆ. ಈ ವೇಳೆ ಅಭಿಮಾನಿ ವಿಜಯ್ ಕುಮಾರ್ಗೆ ಕರೆ ಮಾಡಿ ವಿಚಾರಿಸಿದಾಗ ತಾಂತ್ರಿಕ ದೋಷ ಕಾರಣ ಹೀಗಾಗಿದ್ದು, ಹಣವನ್ನು ಹಿಂದಿರುಗಿಸುವುದಾಗಿ ಹೇಳಿಕೊಂಡಿದ್ದಾನೆ.
ಆ ಬಳಿಕವೂ ಕೂಡ ಹಣ ವರ್ಗಾವಣೆ ನಡೆದ ಕಾರಣ ಅನುಮಾನಗೊಂಡ ಅಭಿಮಾನಿ ಪೊಲೀಸರಿಗೆ ದೂರು ನೀಡಿದ್ದಾನೆ. ಹಣ ಪಾವತಿಯನ್ನು ತಡೆಯುವ ಹೊತ್ತಿಗಾಗಲೇ 3 ಲಕ್ಷ ರೂ. ಗಳಿಗೂ ಅಧಿಕ ಮೊತ್ತವನ್ನು ಕಳೆದುಕೊಂಡಿದ್ದ. ಸದ್ಯ ಪೊಲೀಸರು ವಂಚನೆ ಪ್ರಕರಣ ದಾಖಲಿಸಿದ್ದಾರೆ.