ರಾಮನಗರ : ಅಂಡರ್ ಪಾಸ್ ವಿಚಾರವಾಗಿ ನಿತಿನ್ ಗಡ್ಕರಿಯವರಿಗೆ ಪತ್ರ ಬರೆದಿದ್ದೇನೆ. ಇವರು ಕೊನೆ ಹಂತದಲ್ಲಿ ಪ್ರತಿಭಟನೆ ಮಾಡ್ತಿದ್ದಾರೆ ಎಂಬ ಸುಮಲತಾ ಹೇಳಿಕೆಗೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿರುಗೇಟು ನೀಡಿದರು.
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಪ ಸುಮಲತಾ ಅವರನ್ನು ಸಮರ್ಥರು ಅನ್ನೋದಾ..? ಬುದ್ದಿವಂತರು ಅನ್ನೋದ ಗೊತ್ತಿಲ್ಲ..? ಎಂದು ಲೇವಡಿ ಮಾಡಿದರು.
ನಾವು ಏನೋ ಒಂದು ಹೇಳಿದ್ರೆ ಸುಮಲತಾ ಅವರೇ ಏನೋ ಹೇಳ್ತಾರೆ. ಸಂಸದರಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿ ಮಾಡಿದೆ ಅಂದ್ರೆ ಬೇಡ ಅನ್ನೋದಕ್ಕೆ ಆಗುತ್ತಾ..? ಕ್ರೆಡಿಟ್ ಯಾರಿಗೆ ಹೋಗುತ್ತೆ ಅನ್ನೋದಲ್ಲ, ಕೆಲಸ ಆಯ್ತಾ ಅನ್ನೋದು ಮುಖ್ಯ ಎಂದು ಕುಟುಕಿದರು.
ಇದೆಲ್ಲಾ ಯಾರ ತಪ್ಪು? ನಮ್ಮದಾ, ಅವರದಾ?
ಎಕ್ಸ್ಪ್ರೆಸ್ ರಸ್ತೆ ವಿಚಾರದಲ್ಲಿ ಕ್ರೆಡಿಟ್ ವಿಚಾರವಾಗಿ ಮಾತನಾಡಿದ ಅವರು, 20 ರಿಂದ 30 ಅಪಘಾತಗಳು ಆಗುತ್ತಿದ್ದಾಗ ಯಾಕೆ ತಪ್ಪಿಸಲಿಲ್ಲ? ಉದ್ಘಾಟನೆ ಮಾಡೋದಕ್ಕೂ ಮುಂಚೆ ಸರ್ವೀಸ್ ರಸ್ತೆ ಪೂರ್ಣ ಯಾಕೆ ಮಾಡಲಿಲ್ಲ. ಇದೆಲ್ಲಾ ಯಾರ ತಪ್ಪು? ನಮ್ಮದಾ, ಅವರದಾ..? ಜನರಿಗೆ ಒಳ್ಳೆಯದಾಗೋ ರೀತಿಯಲ್ಲಿ ಕೆಲಸ ಮಾಡಲಿ ಎಂದು ಚಲುವರಾಯಸ್ವಾಮಿ ಹೇಳಿದರು.